ಹುಣಸೂರು, ಜೂ.28– ಜಾನುವಾರುಗಳ ರಕ್ಷಣೆ ನೆಪದಲ್ಲಿ ಹಣ ವಸೂಲಿಗೆ ಇಳಿದ ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ, ಬೆಂಗಳೂರು ಮೂಲದ ಮಹಿಳೆ ಸೇರಿದಂತೆ 7 ಮಂದಿಯನ್ನ ಹುಣಸೂರು ಪೊಲೀಸರು ಬಂಧಿಸಿದ್ದಾರೆ.
ಜಾನುವಾರು ಸಾಗಿಸುವ ವಾಹನಗಳ ತಡೆದು ಹಣ ವಸೂಲಿ ದಂಧೆಗಿಳಿದಿದ್ದ ಮಹಿಳೆ ಸೇರಿದಂತೆ ಏಳು ಮಂದಿ ತಂಡವನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ, ಎರಡು ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಕಟ್ಟೆಮಳಲವಾಡಿಯಲ್ಲಿ ಹಿಂದೂ ರಾಷ್ಟ್ರೀಯ ರಕ್ಷಣಾ ವೇದಿಕೆ ಅಧ್ಯಕ್ಷ ಬೆಂಗಳೂರು ಉತ್ತರಹಳ್ಳಿಯ ರಾಮಕೃಷ್ಣ ಮತ್ತು ಬೆಂಗಳೂರಿನ ವಿವಿಧ ಬಡಾವಣೆ ನಿವಾಸಿಗಳಾದ ಶಿವಕುಮಾರ್, ಲಿಂಗರಾಜು, ಕಿಶೋರ್, ಪ್ರೇಮಕುಮಾರ್, ಪುಷ್ಪಲತಾ ಹಾಗೂ ಕೆ.ಆರ್.ಪೇಟೆ ತಾಲೂಕಿನ ಮಾರಗೌಡನಹಳ್ಳಿಯ ಸ್ವಾಮಿ ಬಂಧಿತರು.
ತಾಲೂಕಿನ ರತ್ನಪುರಿಯ ಕಿರಣ್ ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಸಂತೆಯಲ್ಲಿ ಮೂರು ಜಾನುವಾರುಗಳನ್ನು ಖರೀದಿಸಿ ವಾಹನದಲ್ಲಿ ಸಾಗಿಸುತ್ತಿದ್ದ ವೇಳೆ ಕಾರಿನಲ್ಲಿ ಹಿಂಬಾಲಿಸಿಕೊಂಡು ಕಟ್ಟೆಮಳಲವಾಡಿ ಬಳಿ ಅಡ್ಡಗಟ್ಟಿ ಕಸಾಯಿಖಾನೆಗೆ ಜಾನುವಾರು ಸಾಗಿಸುತ್ತಿದ್ದೀರಾ ಎಂದು ಚಾಲಕ ಕಿರಣ್ಣನ್ನು ಬೆದರಿಸಿ 25 ಸಾವಿರ ರೂ. ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.
ನಾನು ವ್ಯವಸಾಯಕ್ಕಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದೇನೆಂದು ಹೇಳಿದರೂ ಕೇಳದೆ ಕೊನೆಗೆ 20 ಸಾವಿರ ಕೊಟ್ಟರೆ ಬಿಡುತ್ತೇವೆ. ಇಲ್ಲದಿದ್ದರೆ ಪೊಲೀಸರಿಗೆ ಮಾಹಿತಿ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ.ಈ ವೇಳೆ ಏನು ನಡೆಯುತ್ತಿದೆ ಎಂದು ರಸ್ತೆಯಲ್ಲಿ ಹೋಗುತ್ತಿದ್ದ ಜನರು ಜಮಾಯಿಸಿದರು. ವಿಷಯ ತಿಳಿದು ಜನರು ಆರೋಪಿಗಳ ವಿರುದ್ದ ತಿರುಗಿ ಬಿದ್ದು ತರಾಟೆ ತೆಗೆದುಕೊಂಡು ಗೂಸಾ ನೀಡಿ 112 ಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಇವರ ಕುತಂತ್ರ ಬಯಲಾಗಿದೆ. ಈ ಸಂಬಂಧ ಕಿರಣ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಇದೇ ತಂಡ ಕೆ.ಆರ್.ನಗರದಲ್ಲೂ ಗ್ಯಾಸ್ ಅಂಗಡಿಯೊಂದರ ಮಾಲಿಕನನ್ನು ಬೆದರಿಸಿ 20 ಸಾವಿರ ರೂ ಕಿತ್ತಿದ್ದಾರೆ. ಚಾಮರಾಜನಗರದಲ್ಲಿ ಎರಡು ವರ್ಷಗಳ ಹಿಂದೆ ಹಾಗೂ ಬೆಂಗಳೂರಿನಲ್ಲೂ ಇದೀಗ ಹುಣಸೂರು ಮತ್ತು ಕೆ.ಆರ್.ನಗರ ಠಾಣೆಯಲ್ಲಿ ಇವರ ವಿರುದ್ದ ಪ್ರಕರಣ ದಾಖಲಾಗಿದೆ.ಅಡಿಷನಲ್ ಎಸ್.ಪಿ.ಮಲ್ಲಿಕ್ ಭೇಟಿ ನೀಡಿ ವಿಚಾರಣೆ ನಡೆಸಿದರು. ಡಿವೈಎಸ್ಪಿ ಗೋಪಾಲಕೃಷ್ಣ, ಇನ್ಸ್ಪೆಕ್ಟರ್ ಮುನಿಯಪ್ಪ ಹಾಜರಿದ್ದರು.
- ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಬಸ್, ತಪ್ಪಿದ ಅಪಾಯ
- ದತ್ತಾತ್ರೇಯ ಹೊಸಬಾಳೆ ಹೇಳಿಕೆ ಅಪ್ರಸ್ತುತ : ಗೃಹಸಚಿವ ಪರಮೇಶ್ವರ್
- ಕೋಡಿಶ್ರೀಗಳ ಚಿನ್ನಾಭರಣವಿದ್ದ ಬ್ಯಾಗ್ಗೆ ಕನ್ನ ಹಾಕಿದ್ದ ಖದೀಮನ ಬಂಧನ
- ಸರ್ ಸಿ.ವಿ.ರಾಮನ್ನಗರದಲ್ಲಿ ಕೆಂಪೇಗೌಡ ಉದ್ಯಾನವನ
- ಬಿಎಂಟಿಸಿ ನಿರ್ವಾಹಕರ ವಿರುದ್ಧ 3500 ಪ್ರಕರಣ ದಾಖಲು