ದೊಡ್ಡಬಳ್ಳಾಪುರ, ಮಾ.31 – ಅಪಘಾತದಲ್ಲಿ ಮಡಿದ ವ್ಯಕ್ತಿಯೋರ್ವನ ಬೆಲೆ ಬಾಳುವ ವಸ್ತುಗಳನ್ನು ಮೃತನ ಗೆಳೆಯನಿಗೆ ಹಸ್ತಾಂತರ ಮಾಡುವ ಮೂಲಕ 108 ಅಂಬುಲೆನ್ಸ್ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ.
ನಿನ್ನೆ ಸಂಜೆ ದೇವನಹಳ್ಳಿ ದಾಬಸ್ಪೇಟೆ ನಡುವಿನ ರಾಷ್ಟ್ರೀಯ ಹೆದ್ದಾರಿ ನಾಗದೇನಹಳ್ಳಿ ಮೇಲ್ಲೇತುವೆಯಲ್ಲಿ ದೇವನಹಳ್ಳಿ ಕಡೆಯಿಂದ ಬಂದ ದ್ವಿಚಕ್ರ ವಾಹನ ಸವಾರ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡಿದ್ದರು.
ಈ ಕುರಿತು ಮಾಹಿತಿ ತಿಳಿದ 108 ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಗಾಯಾಳು ಬ್ಯಾಟರಾಯನಪುರ ಸಮೀಪದ ಕೆಂಪಾಪುರ ನಿವಾಸಿ ಮದನ್ (40) ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಸಾವನಪ್ಪಿದ್ದರು.
ಮೃತನ ಕುರಿತು ದಾಖಲೆ ಪರಿಶೀಲನೆ ನಡೆಸಿದ 108 ಚಾಲಕ ನರಸಿಂಹಮೂರ್ತಿ ಮೃತನು ಧರಿಸಿದ್ದ ಬಂಗಾರದ ಒಡವೆಗಳು, ಮೊಬೈಲ್ ಮತ್ತು ಪರ್ಸ್ ಅನ್ನು ಮೃತನ ಗೆಳೆಯನಿಗೆ ಹಸ್ತಾಂತರ ಮಾಡಿ ಪ್ರಾಮಾಣಿಕತೆ ಮೆರೆದಿದ್ದಾರೆ. ಮೃತನು ಯುಗಾದಿ ಹಿನ್ನೆಲೆಯಲ್ಲಿ ನಂದಿಗಿರಿಗೆ ಭೇಟಿ ನೀಡಿದ್ದಾಗ ಅಪಘಾತ ಸಂಭವಿಸಿದೆ.