ಮುಂಬೈ,ಏ.19- ಸಾವಿತ್ರಿಬಾಯಿ ಪುಲೆ ಜೀವನಾಧಾರಿತ ಸಿನಿಮಾವನ್ನು ಟೀಕಿಸುವ ಭರದಲ್ಲಿ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ, ಏನಿವಾಗ ಎಂದು ಪ್ರಶ್ನಿಸುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಸದ್ಯ ಅವರ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಬ್ರಾಹ್ಮಣ ಸಮುದಾಯದ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡಿದ ನಂತರ ಅವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ. ಇದೀಗ ಅನುರಾಗ್ ಕಶ್ಯಪ್ ತಾವಾಡಿದ ಮಾತುಗಳಿಗೆ ಕ್ಷಮೆಯನ್ನು ಕೇಳಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅನುರಾಗ್ ಕಶ್ಯಪ್ ಇದು ನನ್ನ ಕ್ಷಮಾಪಣೆ. ನಾನು ಹೇಳಿದ ಮಾತುಗಳಿಗೆ ಅಲ್ಲ, ಬದಲಿಗೆ ನನ್ನ ಪೋಸ್ಟ್ನಲ್ಲಿರುವ ಒಂದು ಸಾಲನ್ನು ಮಾತ್ರ ಎತ್ತಿಕೊಂಡು ದ್ವೇಷ ಹರಡುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಸಾವಿತ್ರಿ ಭಾಯಿ ಪುಲೆ ಜೀವಾಧಾರಿತ ಸಿನಿಮಾವನ್ನು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಡ್ ಸರ್ಟಿಫಿಕೇಶನ್ ಗೆ ಕಳುಹಿಸಲಾಗಿತ್ತು. ಅ ಈ ಆ ಪುಲೆ ಸಿನಿಮಾಗೆ ಯು ಸರ್ಟಿಫಿಕೇಟ್ ನೀಡಿತ್ತು. ಆದರೆ ಕೆಲ ದೃಶ್ಯಗಳಿಗೆ ಕತ್ತರಿ ಹಾಕುವಂತೆ ನಿರ್ದೇಶಿಸಿತ್ತು.
ಪ್ರಮುಖವಾಗಿ ಈ ಸಿನಿಮಾದಲ್ಲಿ ಬರುವ ಜಾತಿ ಆಧಾರಿತ ಹೆಸರುಗಳು, 3000 ವರ್ಷಗಳ ಗುಲಾಮಿ ಸೇರಿದಂತೆ ಕೆಲ ಡೈಲಾಗ್ಗಳಿಗೂ ಕತ್ತರಿ ಹಾಕುವಂತೆ ಸೂಚಿಸಿತ್ತು. ಈ ಸಿನಿಮಾಗೆ ಮಹಾರಾಷ್ಟ್ರದಲ್ಲಿ ಬ್ರಾಹ್ಮಣ ಸಮುದಾಯ ವಿರೋಧಿಸಿತ್ತು. ವಿರೋಧ ಜಾಸ್ತಿ ಆಗುತ್ತಿದ್ದಂತೆ ಏ. 11ಕ್ಕೆ ಬಿಡುಗಡೆಯಾಗಬೇಕಿದ್ದ ಸಿನಿಮಾ ಏ. 25ಕ್ಕೆ ಮುಂದೂಡಿಕೆಯಾಗಿತ್ತು.
ಬೋರ್ಡ್ ಕತ್ತರಿ ಹಾಕುವಂತೆ ನಿರ್ದೇಶನ, ಸಿನಿಮಾ ಬಿಡುಗಡೆಗೆ ವಿಳಂಬಕ್ಕೆ ಸಂಬಂಧಿಸಿದಂತೆ ಇನ್ಸ್ಟಾದಲ್ಲಿ ಅನುರಾಗ್ ಕಶ್ಯಪ್ ಪೋಸ್ಟ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಪೋಸ್ಟ್ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ, ಏನಿವಾಗ ಪ್ರಶ್ನಿಸುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅನುರಾಗ್ ಕಶ್ಯಪ್ ವಿರುದ್ಧ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಕಶ್ಯಪ್ ಪೋಸ್ಟ್ನ ಸ್ಟೀನ್ ಶಾಟ್ ಅಪ್ಲೋಡ್ ಮಾಡಿ ಜನರು ಈಗ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ.
ಕ್ಷಮಾಯಾಚನೆ:
ಸಂಸ್ಕಾರವಂತರು ಎಂದು ಕರೆಸಿಕೊಳ್ಳುವ ಸಮುದಾಯದವರು ಹೆಂಡತಿ, ಮಗಳು, ಗೆಳೆಯರ ಅತ್ಯಾಚಾರ, ಕೊಲೆಯ ಬೆದರಿಕೆಯನ್ನು ಹಾಕುತ್ತಿದ್ದಾರೆ. ಆದರೆ ಹೇಳಿಕೆಗಳು, ಮಾತುಗಳು, ಈ ರೀತಿಯ ಬೆದರಿಕೆಗೆ ಅರ್ಹವಲ್ಲ, ಹೇಳಿರುವ ಮಾತುಗಳನ್ನು ವಾಪಸ್ ಪಡೆಯಲು ಆಗುವುದಿಲ್ಲ, ನಾನು ಅದನ್ನು ವಾಪಸ್ ಪಡೆಯುವುದೂ ಇಲ್ಲ ಎಂದು ಅನುರಾಗ್ ಕಶ್ಯಪ್ ಹೇಳಿದ್ದಾರೆ. ನಿಮಗೆ ಬೈಯ್ಯಬೇಕು ಎಂದು ಅನ್ನಿಸಿದರೆ ನನಗೆ ಬೈಯಿರಿ. ನನ್ನ ಮೇಲೆ ಅವಾಚ್ಯ ಶಬ್ದವನ್ನು ಉಪಯೋಗಿಸಿ. ಪಾಪದ ಮಹಿಳೆಯನ್ನು ಬಿಟ್ಟು ಬಿಡಿ. ಧರ್ಮಗ್ರಂಥಗಳು ಸಹ ಮನುಸ್ಮೃತಿಯನ್ನು ಮಾತ್ರವಲ್ಲ, ಇಷ್ಟು ಸಭ್ಯತೆಯನ್ನು ಕಲಿಸುತ್ತವೆ. ನೀವು ನಿಜವಾಗಿಯೂ ಯಾವ ರೀತಿಯ ಬ್ರಾಹ್ಮಣರು ಎಂದು ನೀವೇ ನಿರ್ಧರಿಸಿ. ನನ್ನ ಮಟ್ಟಿಗೆ ಹೇಳುವುದಾದರೆ, ನಾನು ನನ್ನ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.
ಏನಿದು ವಿವಾದ?:
ಮಹಾರಾಷ್ಟ್ರದ ಸಾಮಾಜಿಕ ಕಾರ್ಯಕರ್ತರಾದ ಜ್ಯೋತಿರಾವ್ ಫುಲೆ ಮತ್ತು ಸಾವಿತ್ರಿ ಭಾಯಿ ಫುಲೆ ಅವರ ಜೀವನವನ್ನಾಧರಿಸಿ ಹಿಂದಿಯಲ್ಲಿ ಪುಲೆ ಚಿತ್ರ ನಿರ್ಮಾಣವಾಗಿದೆ. ರೋಹನ್ ಸಿಪ್ಪಿ ನಿರ್ದೇಶನದ ಈ ಚಿತ್ರದಲ್ಲಿನ ವಿವದಾತ್ಮಕ, ಜಾತಿ ವ್ಯವಸ್ಥೆಯನ್ನು ಸೂಚಿಸುವ ಭಾಗಗಳನ್ನು ತೆಗೆದು ಹಾಕುವಂತೆ ಸೆನ್ಸಾರ್ ಮಂಡಳಿ ಸೂಚಿಸಿತ್ತು. ಈ ಬಗ್ಗೆ ಕಿಡಿ ಕಾರಿದ ಅನುರಾಗ್ ಕಶ್ಯಪ್ ನಾಲಗೆ ಹರಿಯಬಿಟ್ಟಿದ್ದರು. ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ, ಏನಿವಾಗ? ಎಂದು ಅವರು ಹೇಳಿದ್ದರು. ಇದು ಸಾಕಷ್ಟು ವಿವಾದವನ್ನು ಸೃಷ್ಟಿಸಿತ್ತು.
ಬಾಲಿವುಡ್ ನಿರ್ದೇಶಕ, ನಟ ಅನುರಾಗ್ ಕಶ್ಯಪ್ ಸದಾ ಒಂದೆಲ್ಲಾ ಒಂದು ವಿವಾದಗಳನ್ನು ಮೈಮೇಲೆ ಎಳೆದು ಕೊಳ್ಳುತ್ತಲೇ ಇರುತ್ತಾರೆ. ಇದೀಗ ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ, ಏನಿವಾಗ?ಎಂದು ಅವರು ಸೋಶೀಯಲ್ ಮೀಡಿಯಾದಲ್ಲಿ ಪ್ರಶ್ನಿಸುವ ಮೂಲಕ ಉದ್ದಟತನ ಮೆರೆದಿದ್ದರು.