Thursday, September 19, 2024
Homeಜಿಲ್ಲಾ ಸುದ್ದಿಗಳು | District Newsನೇಪಥ್ಯಕ್ಕೆ ಸರಿಯುತ್ತಿರುವ ಸರ್ಕಸ್‌‍

ನೇಪಥ್ಯಕ್ಕೆ ಸರಿಯುತ್ತಿರುವ ಸರ್ಕಸ್‌‍

ಅರಸೀಕೆರೆ, ಜೂ.20- ಕಸರತ್ತು ತುಸು ಎಚ್ಚರ ತಪ್ಪಿದರೆ ಆಪತ್ತು ಮಿಂಚಿನಂತೆ! ಪ್ರದರ್ಶನ ಕ್ಷಣ ಕ್ಷಣವೂ ರೋಮಾಂಚನ ಇದು ನಮ್ಮೂರಿನಲ್ಲಿ ಅಪೋಲೋ ಸರ್ಕಸ್‌‍ ತಂಡದ ಕಲಾವಿದರ ಕಲಾ ಪ್ರದರ್ಶನ ಮತ್ತು ಕಸರತ್ತು ಕಣ್ತುಂಬಿಕೊಂಡ ವೀಕ್ಷಕರ ಏಕಕಾಲದ ಭಿನ್ನವಿಲುವಿನ ಅನುಭವದ ಮಾತಾಗಿದೆ.

ಜಾನಪದ ಕಲೆ ನಾಟಕ ಪ್ರದರ್ಶನಗಳ ರೀತಿಯಲ್ಲಿ ಸರ್ಕಸ್‌‍ ಪ್ರದರ್ಶನ ನೀಡುತ್ತಿದ್ದ ಕಲಾವಿದರ ಕಲಾ ಪ್ರದರ್ಶನಕ್ಕೂ ಮೆಚ್ಚುಗೆ ಮಾತುಗಳು ಮಾತ್ರವಲ್ಲ ಮನ್ನಣೆ ಕೂಡ ಸಮಾಜ ನೀಡುತ್ತಾ ಬಂದಿತ್ತು ಆದರೆ ಬದಲಾದ ಕಾಲಘಟ್ಟದಲ್ಲಿ ಬಿಳಿಯ ಪರದೆಯ ಮೇಲೆ ಚಲನಚಿತ್ರಗಳು ವಿಜೃಂಭಿಸಲು ಆರಂಭವಾದಾಗ ಸಹಜವಾಗಿಯೇ ನಾಟಕ ಹಾಗೂ ಸರ್ಕಸ್‌‍ ಕಂಪನಿಗಳು ಕಳೆಗುಂದಲು ಆರಂಭಿಸಿದವು ಅದರಲ್ಲೂ ಕಳೆದ ಎರಡೂವರೆ ದಶಕಗಳಿಂದ ಟಿವಿ ಎಂಬ ಮಾಯಾ ಪೆಟ್ಟಿಗೆ ನಾಟಕ ಮತ್ತು ಸರ್ಕಸ್‌‍ ಕಲಾವಿದರ ಕಲೆಯನ್ನು ಮೂಲೆಗುಂಪಾಗುವಂತೆ ಮಾಡಿರುವುದು ಸುಳ್ಳಲ್ಲ.

ಆದರೂ ಇದನ್ನೇ ನಂಬಿ ಜೀವನ ನಡೆಸುತ್ತಾ ಬಂದಿರುವ ಕೆಲವು ಬೆರಣಿಕೆಯ ಕಂಪನಿಗಳ ಮಾಲೀಕರು ಹಾಗೂ ಕಲಾವಿದರು ಈ ಕಲೆಗಳ ಉಳಿವು ಹಾಗೂ ಬೆಳವಣಿಗೆಗೆ ಇಂದಿಗೂ ಶ್ರಮಿಸುತ್ತಿದ್ದರೂ, ಟಿವಿ ಎಂಬ ಮಾಯಾ ಪೆಟ್ಟಿಗೆಯಿಂದ ಹೊರಬರದ ಮಂದಿ ನಮ್ಮ ಸಂಸ್ಕೃತಿಯ ಭಾಗದಂತಿರುವ ನಾಟಕ ಹಾಗೂ ಸರ್ಕಸ್‌‍ ಪ್ರದರ್ಶನ ನೀಡುವ ಕಲಾವಿದರ ಬಗ್ಗೆ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ತೋರದ ಕಾಳಜಿ ಈ ಎಲ್ಲಾ ಕಾರಣಗಳಿಂದ ನಾಟಕ ಹಾಗೂ ಸರ್ಕಸ್‌‍ ಕಂಪನಿಗಳು ಬರಿದಾಗುತ್ತಿದ್ದರೆ ಈ ಕಲೆಯನ್ನೇ ನಂಬಿ ಜೀವನ ಸಾಗಿಸುತ್ತಾ ಬಂದಿದ್ದ ಕಲಾವಿದರ ಬದುಕು ಬಡವಾಗುತ್ತಿರುವುದು ವಿಷಾದದ ಸಂಗತಿಯಾಗಿದೆ.

ಮನೋರಂಜನೆಯ ಸೆಲೆಯಂತಿದ್ದ ಸರ್ಕಸ್‌‍ ಕಂಪನಿಗಳು ವೀಕ್ಷಕರ ನಿರಾಸಕ್ತಿಯಿಂದ ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ. ಮೊದಲೆಲ್ಲ ಸರ್ಕಸ್‌‍ ಕಂಪನಿಗಳಲ್ಲಿ ಆನೆ, ಸಿಂಹ, ಕರಡಿ ಸೇರಿದಂತೆ ಇತರೆ ಪ್ರಾಣಿ, ಪಕ್ಷಿಗಳನ್ನು ಪಳಗಿಸಿ ಪ್ರದರ್ಶನ ನೀಡಲಾಗುತ್ತಿತ್ತು ಸಹಜವಾಗಿ ಮಹಿಳೆಯರು, ಮಕ್ಕಳನ್ನು ಆಕರ್ಷಿಸುತ್ತಿದ್ದವು. ಆದರೆ ಸರ್ಕಾರ ಸರ್ಕಸ್‌‍ ಕಂಪನಿಗಳಲ್ಲಿ ಪ್ರಾಣಿ ಪಕ್ಷಿಗಳ ಪ್ರದರ್ಶನಕ್ಕೆ ನಿರ್ಬಂಧ ಹೇರಿದ್ದು, ಸರ್ಕಸ್‌‍ನ ಆಕರ್ಷಣೆ ಕಡಿಮೆಯಾಗಲು ಮತ್ತೊಂದು ಕಾರಣವಾಗಿದೆ ಕಲಾವಿದರೂ ಸೇರಿದಂತೆ ನಮ್ಮ ಕಂಪನಿ ನೂರಾರು ಮಂದಿ ಬಳಗ ಹೊಂದಿದೆ.

ದಿನ ಒಂದಕ್ಕೆ ಲಕ್ಷಾಂತರ ಖರ್ಚಿದ್ದರೂ ಆದಾಯ ಮಾತ್ರ ಸಾವಿರಾರುಪಾಯಿ ಆಗಿದೆ. ನೂರಾರು ವರ್ಷಗಳ ಇತಿಹಾಸವಿರುವ ಸರ್ಕಸ್‌‍ ಕಂಪನಿಗಳು ಮತ್ತು ಕಲಾವಿದರ ನೆರವಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗುವುದರೊಂದಿಗೆ ಅಳಿವಿನಂಚಿನಲ್ಲಿರುವ ಸರ್ಕಸ್‌‍ ಪ್ರದರ್ಶನಗಳಿಗೆ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡುತ್ತಾರೆ ಅಪೋಲೋ ಸರ್ಕಸ್‌‍ ಕಂಪನಿಯ ವ್ಯವಸ್ಥಾಪಕ ಸನಿಲ್‌ ಜಾರ್ಜ್‌.

ರಾಜ್ಯ ದೇಶವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿರುವ ಸರ್ಕಾರಗಳು ಅಳಿವಿನಂಚಿಗೆ ಬಂದಿರುವ ಕಲೆ ಹಾಗೂ ಕಲಾವಿದರಿಗೆ ಬಲ ನೀಡಬೇಕಿದೆ. ಜನಪದ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿರ್ಲಕ್ಷ್ಯ ತೋರುವುದರಿಂದ ಕಲೆಗಳು ಮಾತ್ರ ನಾಶವಾಗುವುದಿಲ್ಲ ನಮ್ಮತನ ಮತ್ತು ಈ ನೆಲದ ಸೊಗಡು ನಾಶವಾಗುತ್ತದೆ ಎಂಬುದನ್ನು ಸರ್ಕಾರ ಹರಿತುಕೊಳ್ಳುವುದರೊಂದಿಗೆ ಈ ಕಲೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಹಿರಿಯ ಪತ್ರಕರ್ತ ಕಣಕಟ್ಟೆ ಕುಮಾರ್‌.

RELATED ARTICLES

Latest News