Wednesday, October 23, 2024
Homeಬೆಂಗಳೂರುಜಾಹೀರಾತು ದರ ಹೆಚ್ಚಳಕ್ಕೆ ಇಲಾಖೆಗಳಿಗೆ ಮನವಿ

ಜಾಹೀರಾತು ದರ ಹೆಚ್ಚಳಕ್ಕೆ ಇಲಾಖೆಗಳಿಗೆ ಮನವಿ

Appeal to the departments to increase the advertisement rate, got no response

ಬೆಂಗಳೂರು, ಅ.23- ಸ್ಥಳೀಯ ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಮಸ್ಯೆ ಕುರಿತು ಈಗಾಗಲೇ ಮುಖ್ಯಮಂತ್ರಿಯವರಿಗೆ, ಇಲಾಖೆಯ ಸರ್ಕಾರದ ಕಾರ್ಯದರ್ಶಿಯವರಿಗೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸಹ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಈ ಬಗ್ಗೆ ಪರಿಶೀಲಿಸಿ ನ್ಯಾಯ ಒದಗಿಸಿ ಕೊಡುವಂತೆ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಎ.ಸಿ. ತಿಪ್ಪೇಸ್ವಾಮಿ ಒತ್ತಾಯಿಸಿದರು.

ಸಂಪಾದಕರ ಸಂಘದ ರಾಜ್ಯ ಮತ್ತು ಜಿಲ್ಲಾ ಘಟಕದ ಪದಾಧಿಕಾರಿಗಳ ನಿಯೋಗ ಮುಖ್ಯಮಂತ್ರಿಯವರ ಕಾರ್ಯದರ್ಶಿಗಳು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಕಾರ್ಯ ದರ್ಶಿಯಾಗಿರುವ ಬಿ.ಬಿ. ಕಾವೇರಿ ಅವರನ್ನು ಭೇಟಿ ಮಾಡಿ ಸಂಘದ ವಿವಿಧ ಬೇಡಿಕೆಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು. ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ ಮಾತನಾಡಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಾಧ್ಯಮಪಟ್ಟಿಯಲ್ಲಿರುವ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಹಾಲೀ ಇರುವ ಜಾಹೀರಾತಿನ ದರಕ್ಕೆ ಪ್ರತಿ ಎರಡು ವರ್ಷಕ್ಕೊಮ್ಮೆ ಶೇ.12 ರಷ್ಟು ಹೆಚ್ಚಳ ಮಾಡಬೇಕು ಎಂಬ ನಿಯಮವಿದೆ.

ಕಳೆದ ಹತ್ತು ವರ್ಷದಲ್ಲಿ ಐದು ಸಲ ಜಾಹೀರಾತು ದರವನ್ನು ಹೆಚ್ಚಳ ಮಾಡಬೇಕಾಗಿತ್ತು. ಆದರೆ ಇದುವರೆಗೆ ಕೇವಲ ಎರಡು ಬಾರಿ ಮಾತ್ರ ಜಾಹೀರಾತು ದರ ಹೆಚ್ಚಳ ಮಾಡಲಾಗಿದೆ. ದರ ಹೆಚ್ಚಳಕ್ಕೆ ಕಳೆದ 8 ತಿಂಗಳಲ್ಲಿ ಆನೇಕ ಸಲ ಮನವಿ ಸಲ್ಲಿಸಿದರೂ ಕೂಡ ಇಲಾಖೆಯ ಆಯುಕ್ತರು ಸ್ಪಂದಿಸುತ್ತಿಲ್ಲ. ಇದರಿಂದ ಸ್ಥಳೀಯ ದಿನಪತ್ರಿಕೆಗಳ ಸಂಪಾದಕರಿಗೆ ಆರ್ಥಿಕ ಸಮಸ್ಯೆ ಆಗಿದೆಎಂದು ಸರ್ಕಾರದ ಕಾರ್ಯದರ್ಶಿಯವರಿಗೆ ಮನವರಿಕೆ ಮಾಡಿಕೊಟ್ಟರು. ಮಾಧ್ಯಮ ಪಟ್ಟಿಯಲ್ಲಿರುವ ಎಸ್ಸಿ-ಎಸ್ಟಿ ಸಮುದಾಯಕ್ಕೆ , ಒಬಿಸಿ, ಬ್ರಾಹ್ಮಣ ಸಮುದಾಯದ ಪತ್ರಿಕೆಗಳಿಗೆ ನೀಡಲಾಗುತ್ತಿ ರುವ ಮಾಸಿಕ ಎರಡು ಪುಟಗಳ ಪ್ರೋತ್ಸಾಹ ರೂಪದ ಜಾಹೀರಾತಿನ ಮಾದರಿಯಲ್ಲಿ ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಒಬಿಸಿ ಮತ್ತು ಬ್ರಾಹ್ಮಣ ಸಮುದಾಯದ ಐದು ವರ್ಷದೊಳಗಿನ ಮಾಲೀಕತ್ವ ಮತ್ತು ಸಂಪಾದಕತ್ವದ ದಿನಪತ್ರಿಕೆಗಳಿಗೆ ಒಂದು ಪುಟ ಜಾಹೀರಾತು ನೀಡುವಂತೆ ಕೋರಲಾಯಿತು.


ಸರ್ಕಾರದಿಂದ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಬಿಡುಗಡೆ ಯಾಗುವ ಜಾಹೀರಾತಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕವೇ ನೇರವಾಗಿ ಬಿಡುಗಡೆ ಮಾಡುವಂತೆ ಮನವಿ ಮಾಡಲಾಯಿತು. ಸಂಪಾದಕರ ಸಂಘದ ನಿಯೋಗದ ಬೇಡಿಕೆ ಆಲಿಸಿದ ಸರ್ಕಾರದ ಕಾರ್ಯ ದರ್ಶಿ ಬಿ.ಬಿ.ಕಾವೇರಿ ಅವರು ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದರು. ಸಂಪಾದಕರ ಸಂಘದ ಪ್ರಮುಖರಾದ ರಾಮಕೃಷ್ಣ, ಜಿ.ವೈ. ಪದಾ, ಮಹಮದ್ ಯೂನುಸ್, ಟಿ.ಎಸ್. ಕೃಷ್ಣಮೂರ್ತಿ, ವೇದಮೂರ್ತಿ ಎಸ್.ಟಿ, ಡಾ.ಕೆ.ಎಸ್.ಸ್ವಾಮಿ, ದಿನೇಶ್ ಗೌಡಗೆರೆ, ನರಸಿಂಹರಾಜು ಹೆಚ್, ಎಂ.ಬಿ.ಕೊಡಗಲಿ, ರಾಜು ತಳವಾರ ವಿಜಯಪುರ, ಹರೀಶ್ , ಶ್ರೀನಿವಾಸ ಎಂ.ಜೆ, ಕೊಪ್ಪಳ, ಶರಣುಗದ್ದುಗೆ, ವಿಜಯಕುಮಾರ ಬೀದರ್, ಪ್ರಕಾಶ್ ಗುಳೇದಗುಡ್, ಜಾಕೀರ್ ತಾಳಿಕೋಟಿ ಬಾಗಲಕೋಟೆ, ನಾಗೇಶ, ಶಿವಶಂಕರ್, ನಾಗನಗೌಡ, ನಾಗೇಶ್, ಇರ್ಫಾನ್ ಶೇಖ್ ವಿಜಯಪುರ ಇತರರಿದ್ದರು.

RELATED ARTICLES

Latest News