ಬೆಂಗಳೂರು, ಜೂ.6– ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಪವರ್ಸ್ಟಾರ್ ಪುನೀತ್ ರಾಜ್ ಕುಮಾರ್ ಸವಿನೆನಪಿನಲ್ಲಿ ಅಪ್ಪು ಸ್ಮಾರಕ ಲೇದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ.
ನಾಳೆ ಬೆಳಿಗ್ಗೆ ಎಂಟು ಗಂಟೆಗೆ ನಗರದ ವೈಎಂಸಿಎ ಕ್ರೀಡಾಂಗಣದಲ್ಲಿ ಈ ಪಂದ್ಯಾವಳಿ ನಡೆಯಲಿದೆ. ಬಿಬಿಎಂಪಿ ನೌಕರರು, ಮಾಧ್ಯಮ, ಪೊಲೀಸ್ ಇಲಾಖೆ ಹಾಗೂ ವಕೀಲರ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ ಎಂದು ಸಂಘದ ಅಧ್ಯಕ್ಷ | ಅಮೃತ್ರಾಜ್ ತಿಳಿಸಿದ್ದಾರೆ.
ಫೈನಲ್ ಪಂದ್ಯ ಗೆಲ್ಲುವ ತಂಡ ಒಂದು ಲಕ್ಷ ರೂ.ಗಳ ನಗದು ಬಹುಮಾನ ಮತ್ತು ಪಾರಿತೋಷಕ ಗೆಲ್ಲಲಿದೆ. ಮೊದಲಿಗೆ ಬಿಬಿಎಂಪಿ ನೌಕರರು ಹಾಗೂ ಮಾಧ್ಯಮ ತಂಡದ ನಡುವೆ ಪಂದ್ಯ ನಡೆಯಲಿದೆ. ನಂತರ ಪೊಲೀಸ್ ಮತ್ತು ವಕೀಲರ ತಂಡದ ನಡುವೆ ಪಂದ್ಯ ನಡೆಯಲಿದೆ. ಎರಡು ಪಂದ್ಯಗಳಲ್ಲಿ ವಿಜಯಿಯಾಗುವ ತಂಡಗಳು ಫೈನಲ್ ತಲುಪಲಿವೆ. ನಾಳೆ ಬೆಳಗ್ಗೆ ಪಂದ್ಯಾವಳಿಗೆ ಹಿರಿಯ ವಕೀಲ ಜಿ.ಶಿವಕುಮಾರ್ ಹಾಗೂ ಹಿರಿಯ ಪತ್ರಕರ್ತ ರಮೇಶ್ ಪಾಳ್ಯ ಚಾಲನೆ ನೀಡಲಿದ್ದಾರೆ.
ಸಂಜೆ 4 ಗಂಟೆಗೆ ಪ್ರಶಸ್ತಿ ವಿತರಣೆ ಸಮಾರೋಪ ಸಮಾರಂಭ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಐಪಿಎಸ್ ಅಧಿಕಾರಿ ಕೆ. ಸಂತೋಷ್ ಬಾಬು, ಬಾರ್ ಕೌನ್ಸಿಲ್ ಅಧ್ಯಕ್ಷ ಎಸ್.ಎಸ್. ಮಿಟ್ಟಲಕೋಡ, ಕರ್ನಾಟಕ ಚೆಸ್ ಅಸೋಸಿಯೇಷನ್ ಉಪಾಧ್ಯಕ್ಷೆ ಸೌಮ್ಯ ಎಂ.ಯು. ಎಸಿಪಿ ಹೆಚ್.ಎಸ್. ಪರಮೇಶ್ವರ, ಅಶ್ವಿನಿ ರಾವ್, ತ್ರಿವಿಕ್ರಮ್ ರಾವ್, ಎಂ. ಗಂಗಾಧರ್ ಭಾಗವಹಿಸಲಿದ್ದಾರೆ.