Sunday, September 8, 2024
Homeರಾಷ್ಟ್ರೀಯ | Nationalಕೇಜ್ರಿ ಜಾಮೀನು ವಿಸ್ತರಣೆ ಅರ್ಜಿ ಆಲಿಸದಿರಲು ಸುಪ್ರೀಂ ನಿರ್ಧಾರ

ಕೇಜ್ರಿ ಜಾಮೀನು ವಿಸ್ತರಣೆ ಅರ್ಜಿ ಆಲಿಸದಿರಲು ಸುಪ್ರೀಂ ನಿರ್ಧಾರ

ನವದೆಹಲಿ,ಮೇ.28- ದೆಹಲಿ ಮದ್ಯ ನೀತಿಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಅವಧಿಯನ್ನು 7 ದಿನಗಳವರೆಗೆ ವಿಸ್ತರಿಸುವಂತೆ ಕೋರಿ ಅರವಿಂದ್‌ ಕೇಜ್ರಿವಾಲ್‌ ಅವರ ಸಲ್ಲಿಸಿದ್ದ ಮೇಲನವಿಯನ್ನು ಆಲಿಸದಿರಲು ಸುಪ್ರೀಂ ಕೋರ್ಟ್‌ ತೀರ್ಮಾನಿಸಿದೆ.

ಲೋಕಸಭೆ ಚುನಾವಣೆಯ ಪ್ರಚಾರಕ್ಕಾಗಿ ಕೇಜ್ರಿವಾಲ್‌ಗೆ ಕಳೆದ ತಿಂಗಳು ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿತ್ತು ಮತ್ತು ಕೊನೆಯ ಹಂತದ ಮತದಾನದ ನಂತರ ಜೂನ್‌ 2 ರಂದು ಶರಣಾಗುವಂತೆ ಕೇಳಿತ್ತು.

ಈ ಮಧ್ಯೆ ಅನಾರೋಗ್ಯದ ಕಾರಣ ನೀಡಿ ಜಾಮೀನು ಅವಧಿಯನ್ನು 7 ದಿನಗಳವರೆಗೆ ವಿಸ್ತರಿಸುವ ಕೇಜ್ರಿವಾಲ್‌ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್‌ ರಿಜಿಸ್ಟ್ರಾರ್‌ ಅವರು, ನಿಯಮಿತ ಜಾಮೀನಿಗಾಗಿ ವಿಚಾರಣಾ ನ್ಯಾಯಾಲಯಕ್ಕೆ ತೆರಳಲು ದೆಹಲಿ ಮುಖ್ಯಮಂತ್ರಿಗೆ ಅನುಮತಿ ನೀಡಲಾಗಿದೆ ಮತ್ತು ಆದ್ದರಿಂದ ಈ ಅರ್ಜಿಯನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಆರೋಗ್ಯದ ತೊಂದರೆಗಳು ಮತ್ತು ಹೆಚ್ಚಿದ ಅಪಾಯದ ಚಿಹ್ನೆಗಳ ದಷ್ಟಿಯಿಂದ, ಅವರ ಜೈಲುವಾಸದ ಅವಧಿಯಲ್ಲಿ ಸಂಭವನೀಯ ದೀರ್ಘಕಾಲೀನ ಹಾನಿಯಿಂದ ಅವರನ್ನು ರಕ್ಷಿಸಲು ವೈದ್ಯಕೀಯ ಪರೀಕ್ಷೆ ಅಗತ್ಯ ಎಂದು ಕೇಜ್ರಿವಾಲ್‌ ಅವರನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅರ್ಜಿಯಲ್ಲಿ ತಿಳಿಸಿದ್ದಾರೆ.

ಕಾನೂನು ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುವ ಅಪಾಯವಿಲ್ಲ ಮತ್ತು ಸುಪ್ರೀಂ ಕೋರ್ಟ್‌ (ಮಧ್ಯಂತರ ಜಾಮೀನಿಗಾಗಿ) ನಿಗದಿಪಡಿಸಿದ ಷರತ್ತುಗಳನ್ನು ಅನುಸರಿಸಲಾಗಿದೆ ಎಂದು ಸಿಂಘ್ವಿ ಹೇಳಿದರು. ಈಗ ರದ್ದುಗೊಂಡಿರುವ ನೀತಿಯನ್ನು ರೂಪಿಸುವಲ್ಲಿ ಮತ್ತು ಮದ್ಯದ ಪರವಾನಗಿಗಳಿಗೆ ಪ್ರತಿಯಾಗಿ ಲಂಚ ಅಥವಾ ಕಿಕ್‌ಬ್ಯಾಕ್‌ಗಳನ್ನು ಪಡೆಯುವಲ್ಲಿ ದೆಹಲಿ ಮುಖ್ಯಮಂತ್ರಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ.

ಎಎಪಿಯು 100 ಕೋಟಿಯ ಕಿಕ್‌ಬ್ಯಾಕ್‌ಗಳನ್ನು ಪಡೆದಿದೆ ಎಂದು ಸಂಸ್ಥೆ ಹೇಳಿಕೊಂಡಿದೆ, ನಂತರ ಅದನ್ನು ಅದರ ಗೋವಾ ಮತ್ತು ಪಂಜಾಬ್‌ ಚುನಾವಣಾ ಪ್ರಚಾರಕ್ಕಾಗಿ ಬಳಸಲಾಗಿದೆ ಎಂದು ಹೇಳಿದೆ.ಎಎಪಿ ಮತ್ತು ಕೇಜ್ರಿವಾಲ್‌ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ ಮತ್ತು ಬಂಧನ ಮತ್ತು ಪ್ರಕರಣವನ್ನು ರಾಜಕೀಯ ಸೇಡು ಎಂದು ಕರೆದಿದ್ದಾರೆ.

RELATED ARTICLES

Latest News