ಬೆಂಗಳೂರು,ಜೂ.18- ಕರ್ನಾಟಕ ಬಿಜೆಪಿ ಘಟಕದ ರಾಜ್ಯಾಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಅವರೇ ಮುಂದುವರಿಯುವುದು ಬಹುತೇಕ ಖಚಿತವಾಗಿದೆ. ಕೆಲವು ತಿಂಗಳಿನಿಂದ ಸದ್ದಿಲ್ಲದೆ ಬಿಜೆಪಿ ಶಾಸಕರ ಅಭಿಪ್ರಾಯ ವನ್ನು ಉಸ್ತುವಾರಿ ರಾಧ ಮೋಹನ್ದಾಸ್ ಆಗರ್ ವಾಲ್ ಆಲಿಸಿದ್ದರು.
ಅದರಲ್ಲಿ ನಾಲ್ಕೈದು ಶಾಸಕ ರನ್ನು ಹೊರತುಪಡಿಸಿ,ಎಲ್ಲರೂ ವಿಜಯೇಂದ್ರ ಪರವಾಗೇ ಕೈಯೆತ್ತಿದ್ದರು. ಇನ್ನು ಜಿಲ್ಲಾಧ್ಯಕ್ಷರ ಆಯ್ಕೆಯೂ ಅದೇ ರೀತಿ ಆಗಿರುವುದರಿಂದ, ಸದ್ಯದ ಮಟ್ಟಿಗೆ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಬಿಜೆಪಿ ನಾಯಕರು ಬಯಸುತ್ತಿಲ್ಲ. ಇನ್ನು ಅಕ್ಟೋಬರ್ – ನವೆಂಬರ್ ನಲ್ಲಿ ಬಿಹಾರದ ವಿಧಾನಸಭಾ ಚುನಾವಣೆ ನಡೆಯತ್ತಿರುವುದರಿಂದ, ಕೇಂದ್ರದ ನಾಯಕರು ಅಲ್ಲಿನ ರಾಜಕೀಯದ ವಿಚಾರಕ್ಕೆ ಬ್ಯುಸಿಯಾಗಲಿದ್ದಾರೆ. ಜೊತೆಗೆ, ಇತ್ತೀಚೆಗೆ ಹೊರಬಿದ್ದಿರುವ ಕೆಲವೊಂದು ಸಮೀಕ್ಷೆಗಳು ಎನ್ಡಿಎ ಮೈತ್ರಿಕೂಟಕ್ಕೆ ಪೂರಕವಾಗಿರದೇ ಇರುವ ಹಿನ್ನೆಲೆಯಲ್ಲಿ ಅಲ್ಲಿಗೆ ವಿಶೇಷ ಒತ್ತನ್ನು ನೀಡಬೇಕಿದೆ.
ಹೀಗಾಗಿ ಕರ್ನಾಟಕದ ಬಿಜೆಪಿ ಅಧ್ಯಕ್ಷರಾಗಿ ವಿಜಯೇಂದ್ರ ಅವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಮುಂದುವರೆಸಲು ವರಿಷ್ಟರು ಬಯಸಿದ್ದಾರೆ. ಸದ್ಯದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ತಿಂಗಳಾಂತ್ಯದೊಳಗೆ ಅಧಿಕೃತವಾಗಿ ಘೋಷಣೆಯಾಗಬಹುದು.
ಕರ್ನಾಟಕದ ಎಲ್ಲಾ 39 (ಬಿಜೆಪಿಯ ಸಂಘಟನಾತಕ ಜಿಲ್ಲೆಗಳು) ಜಿಲ್ಲೆಗಳಿಗೆ ಅಧ್ಯಕ್ಷರ ನೇಮಕ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಆ ಮೂಲಕ, ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ವಿಜಯೇಂದ್ರ ಸ್ಪಷ್ಟ ಮೇಲುಗೈ ಸಾಧಿಸಿದ್ದಾರೆ. ರಾಜ್ಯಾಧ್ಯಕ್ಷರ ನೇಮಕಕ್ಕೆ ಇದು ಬಹುಮುಖ್ಯವಾದ ಪ್ರಕ್ರಿಯೆಯಾಗಿದೆ. ಮೂಲಗಳ ಪ್ರಕಾರ, ಕೇಂದ್ರ ಗೃಹ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಕರ್ನಾಟಕಕ್ಕೆ ಬಂದು ಅಧಿಕೃತ ಘೋಷಣೆಯನ್ನು ಮಾಡಲಿದ್ದಾರೆ.
ಇದು ಬಹಳ ಹಿಂದೆಯೇ ಆಗಬೇಕಾಗಿತ್ತು, ಆದರೆ ಕರ್ನಾಟಕ ಬಿಜೆಪಿ ಘಟಕದಲ್ಲಿ ಮನೆಯೊಂದು ಹಲವು ಬಾಗಿಲುಗಳು ಇರುವ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರು ಅಳೆದುತೂಗಿ ಘೋಷಣೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ದಕ್ಷಿಣದ ರಾಜ್ಯದಲ್ಲಿ ಬಿಜೆಪಿ ಬಲಿಷ್ಠ ಎಂದು ಇರುವುದು ಕರ್ನಾಟಕದಲ್ಲಿ. ಹಾಗಾಗಿ, ಇರುವ ಹಿಡಿತವನ್ನು ಕಳೆದುಕೊಳ್ಳಲು ಅಮಿತ್ ಶಾ ಸಿದ್ಧರಿಲ್ಲ. ಬಿಜೆಪಿ ನಡೆಸಿದ ಆಂತರಿಕ ಸಮೀಕ್ಷೆಯಲ್ಲೂ ವಿಜಯೇಂದ್ರ ಮೇಲುಗೈ ಸಾಧಿಸಿದ್ದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಇಬ್ಬರಲ್ಲಿ ಒಬ್ಬರನ್ನು ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ಕೂರಿಸಲು ಸಿದ್ಧತೆಯನ್ನು ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಸದ್ಯದ ಮಟ್ಟಿಗೆ ಅದನ್ನು ಕಾರ್ಯರೂಪಕ್ಕೆ ತರದೇ ಇರಲು ನಿರ್ಧರಿಸಿ, ಆರೇಳು ತಿಂಗಳು ಮುಂದಕ್ಕೆ ಹಾಕಲು ಶಾ ನಿರ್ಧರಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಮಾಜಿ ಸಚಿವ ಮತ್ತು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದಾಗಿಂದಲೂ ಅಮಿತ್ ಶಾ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಮುರುಗೇಶ್ ನಿರಾಣಿಯವರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸುವ ನಿರ್ಧಾರಕ್ಕೆ ಅಮಿತ್ ಶಾ ಬಹುತೇಕ ಬಂದಿದ್ದರು ಎಂದು ಹೇಳಲಾಗುತ್ತಿದೆ. ಈ ಬಗ್ಗೆ, ಅವರಿಗೆ ಕಮಿಟೆಂಟ್ ಕೂಡಾ ಮಾಡಿದ್ದರು ಎನ್ನುವ ಸುದ್ದಿಯಿದೆ.
ಇನ್ನೊರ್ವ ಕೇಂದ್ರ ಸಚಿವರಾದ ಲಿಂಗಾಯತ ಸಮುದಾಯದ ವಿ.ಸೋಮಣ್ಣ ಕೂಡಾ ರಾಜ್ಯಾಧ್ಯಕ್ಷ ಹುದ್ದೆಯನ್ನು ಬಯಸಿದ್ದರು ಎನ್ನುವ ಮಾಹಿತಿಯಿದೆ. ಅವರ ಆಯ್ಕೆಯ ಬಗ್ಗೆಯೂ, ಅಮಿತ್ ಶಾಗೆ ಏನೂ ತಕರಾರು ಇರಲಿಲ್ಲ. ಆದರೆ, ಕೇಂದ್ರದ ಸಂಪುಟದಲ್ಲಿ ಚುರುಕಿನಿಂದ ಕೆಲಸ ಮಾಡುತ್ತಿರುವ ಸೋಮಣ್ಣಗೆ ತೋಡಾ ದಿನ್ ರುಕ್ ಜಾಯಿಯೇೞ ( ಸ್ವಲ್ಪ ದಿನ ಕಾಯಿರಿ) ಎನ್ನುವ ಸೂಚನೆ, ಅಮಿತ್ ಶಾ ಕಡೆಯಿಂದ ಬಂದಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ವಿಜಯೇಂದ್ರ ಹೊರತಾಗಿ, ಅಮಿತ್ ಶಾ ತಲೆಯಲ್ಲಿದ್ದ ಮುರುಗೇಶ್ ನಿರಾಣಿ ಮತ್ತು ವಿ.ಸೋಮಣ್ಣ ಇಬ್ಬರೂ ಲಿಂಗಾಯತ ಸಮುದಾಯದ ನಾಯಕರೇ ಆಗಿದ್ದರೂ, ಸದ್ಯದ ಮಟ್ಟಿಗೆ ವಿಜಯೇಂದ್ರ ಅವರನ್ನೇ ಮುಂದುವರಿಸಲು ಕೇಂದ್ರದ ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ. ರಾಜ್ಯ ಉಸ್ತುವಾರಿ ರಾಧಾ ಮೋಹನದಾಸ್ ಅಗರ್ವಾಲ್ ಕೂಡಾ ಇದೇ ವರದಿಯನ್ನು ಕೇಂದ್ರಕ್ಕೆ ನೀಡಿದ್ದಾರೆಂದು ಹೇಳಲಾಗುತ್ತಿದೆ.
- ಪಾಕ್ ಸೇನಾ ಮುಖ್ಯಸ್ಥನಿಗೆ ಭೋಜನ ಕೂಟ ಏರ್ಪಡಿಸಿದ ಟ್ರಂಪ್
- ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೊರೆಹೋದ ಐಪಿಎಸ್ ಅಧಿಕಾರಿ ಶ್ರೀನಿವಾಸ ಜೋಶಿ
- ಶುಕ್ಲಾ ಬಾಹ್ಯಾಕಾಶ ಪ್ರಯಾಣ ಮತ್ತೆ ಮುಂದೂಡಿಕೆ
- ಚಿಕ್ಕಬಳ್ಳಾಪುರ : ಬೈಕ್ಗೆ ಕ್ಯಾಂಟರ್ ಡಿಕ್ಕಿಯಾಗಿ ಯುವಕರಿಬ್ಬರ ಸಾವು
- ಆಗ್ರಾ : ಮೇಲ್ಸೆತುವೆಯಿಂದ ಲಾರಿ ಉರುಳಿ ಬಿದ್ದು ನಾಲ್ವರ ದುರ್ಮರಣ