Friday, April 25, 2025
Homeರಾಷ್ಟ್ರೀಯ | Nationalಭಯೋತ್ಪಾದನೆ ವಿರುದ್ಧ ಹೋರಾಟ ಧರ್ಮ- ಅಧರ್ಮದ ನಡುವಿನ ಯುದ್ಧ : ಮೋಹನ್‌ ಭಾಗವತ್‌

ಭಯೋತ್ಪಾದನೆ ವಿರುದ್ಧ ಹೋರಾಟ ಧರ್ಮ- ಅಧರ್ಮದ ನಡುವಿನ ಯುದ್ಧ : ಮೋಹನ್‌ ಭಾಗವತ್‌

Battle between dharma and adharma: Mohan Bhagwat on Pahalgam terror attack

ಮುಂಬೈ,ಏ.25– ಭಯೋತ್ಪಾದನೆ ವಿರುದ್ಧ ಹೋರಾಟವನ್ನು ಧರ್ಮ- ಅಧರ್ಮದ ನಡುವಿನ ಯುದ್ಧ ಎಂದು ಬಣ್ಣಿಸಿರುವ ಆರ್‌ಎಸ್‌‍ಎಸ್‌‍ ಮುಖ್ಯಸ್ಥ ಮೋಹನ್‌ ಭಾಗವತ್‌, ಈ ಯುದ್ಧದಲ್ಲಿ ಅಂತಿಮವಾಗಿ ಧರ್ಮಕ್ಕೆ ಜಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಹಲ್ಗಾಮ್‌ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಅವರು, ಪಹಲ್ಗಾಮ್‌ ದಾಳಿಗೆ ಭಾರತೀಯರ ಪ್ರತೀಕಾರದ ಬೇಡಿಕೆ ಶೀಘ್ರದಲ್ಲೇ ಈಡೇರಲಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಈ ಯುದ್ಧವನ್ನು ಪಂಥಗಳು ಮತ್ತು ಧರ್ಮಗಳ ನಡುವಿನ ಹೋರಾಟ ಎಂದು ಪರಿಗಣಿಸಬಾರದು ಎಂದೂ ಭಾಗವತ್‌ ಸಲಹೆ ನೀಡಿದ್ದಾರೆ.

ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ನಡೆಯುತ್ತಿರುವ ಹೋರಾಟ ಪಂಥಗಳು ಮತ್ತು ಧರ್ಮಗಳ ನಡುವಿನ ಹೋರಾಟವಲ್ಲ. ಇದರ ಆಧಾರ ಪಂಥಗಳು ಮತ್ತು ಧರ್ಮವೇ ಆಗಿದ್ದರೂ, ಇದನ್ನು ಎರಡು ಧರ್ಮಗಳ ನಡುವಿನ ಹೋರಾಟ ಎಂದು ಯಾರೂ ಭಾವಿಸಬಾರದು ಎಂದು ಅಭಿಪ್ರಾಯಪಟ್ಟರು.

ಈ ಹೋರಾಟ ಧರ್ಮ(ಸತ್ಯ, ನ್ಯಾಯ) ಮತ್ತು ಅಧರ್ಮ(ಅಸತ್ಯ, ಅನ್ಯಾಯ)ದ ನಡುವಿನ ಯುದ್ಧವಾಗಿದ್ದು, ಈ ಹೋರಾಟದಲ್ಲಿ ಅಂತಿಮವಾಗಿ ಧರ್ಮ ಗೆಲ್ಲಲಿದೆ. ಪಹಲ್ಗಾಮ್‌ ಅಮಾನವೀಯ ದಾಳಿ ಮೂಲಕ ಯಾರಾದರೂ ಭಾರತದ ಒಗ್ಗಟ್ಟನ್ನು ಮುರಿಯುವ ಕನಸು ಕಾಣುತ್ತಿದ್ದರೆ, ಅದು ಅವರ ಮೂರ್ಖತನ ಎಂದು ಮಾರ್ಮಿಕವಾಗಿ ಹೇಳಿದರು.

ನಮ ಸೈನಿಕರು ಅಥವಾ ನಮ ಜನರು ಇದುವರೆಗೂ ಧರ್ಮ ಕೇಳಿ ಯಾರನ್ನೂ ಕೊಂದಿಲ್ಲ. ಅಮಾಯಕ ನಾಗರಿಕರ ಧರ್ಮದ ಬಗ್ಗೆ ಕೇಳಿ ಕೊಲೆ ಮಾಡಿದ ಮತಾಂಧರು ತಕ್ಕ ಶಿಕ್ಷೆ ಪಡೆಯಲಿದ್ದಾರೆ. ಹಿಂದೂಗಳು ಎಂದಿಗೂ ಧರ್ಮದ ಆಧಾರದ ಮೇಲೆ ಜನರೊಂದಿಗೆ ತಾರತಮ್ಯ ಮಾಡುವುದಿಲ್ಲ ಎಂದು ಹೇಳಿದರು.

ಪಹಲ್ಗಾಮ್‌ ಉಗ್ರ ದಾಳಿಯಿಂದ ಎಲ್ಲರ ಹೃದಯದಲ್ಲಿ ಆಕ್ರೋಶ ಮನೆ ಮಾಡಿದೆ. ಈ ಆಕ್ರೋಶವನ್ನು ನಾನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲೆ. ಆದರೆ ಯಾವುದೇ ಕಾರಣಕ್ಕೂ ಈ ಆಕ್ರೋಶ ತಣ್ಣಗಾಗದಂತೆ ನಾವು ನೋಡಿಕೊಳ್ಳಬೇಕು. ಏಕೆಂದರೆ ರಾಕ್ಷಸರನ್ನು ನಾಶ ಮಾಡಲು ನಮಗೆ ಅಪಾರ ಶಕ್ತಿಯ ಅವಶ್ಯಕತೆ ಇದ್ದು, ಈ ಆಕ್ರೋಶ ನಮಗೆ ಆ ಶಕ್ತಿಯನ್ನು ಒದಗಿಸಲಿದೆ ಎಂದು ಸೂಚ್ಯವಾಗಿ ಹೇಳಿದರು.

ರಾವಣ ಕೂಡ ಶಿವನ ಭಕ್ತನಾಗಿದ್ದ. ಆತನಿಗೆ ವೇದಗಳ ಬಗ್ಗೆ ಅಪಾರ ಜ್ಞಾನವಿತ್ತು. ಒಳ್ಳೆಯ ವ್ಯಕ್ತಿಯಾಗಲು ಬೇಕಾದ ಎಲ್ಲವನ್ನೂ ಆತ ಹೊಂದಿದ್ದ. ಆದರೆ ಅವನು ದುಷ್ಟ ಮಾರ್ಗವನ್ನು ಆಯ್ಕೆ ಮಾಡಿಕೊಂಡ. ಆ ದುಷ್ಟ ಮಾರ್ಗದಲ್ಲೇ ಆತನ ಅಂತ್ಯವಾಯಿತು. ಹೀಗೆಯೇ ದುಷ್ಟ ಜನರ ನಿರ್ಮೂಲನೆಯಾಗಲಿದ್ದು, ಶೀಘ್ರದಲ್ಲೇ ಇದು ನೆರವೇರಲಿದೆ ಎಂದು ಅವರು ಪಹಲ್ಗಾಮ್‌ ದಾಳಿಯಲ್ಲಿ ಭಾಗಿಯಾದ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮದ ಮುನ್ಸೂಚನೆ ನೀಡಿದರು.

ಅಮಾಯಕ ಜನರನ್ನು ಬಲಿ ಪಡೆಯುವ ಭಯೋತ್ಪಾದಕರ ನಿರ್ಮೂಲನೆ ಅತ್ಯಗತ್ಯ. ಸದ್ಯ ಭಾರತದ ಒಕ್ಕೊರಲಿನ ಬೇಡಿಕೆ ಕೂಡ ಇದೇ ಆಗಿದೆ. ನಮನ್ನು ಆಳುವವರು ಭಾರತೀಯರ ಈ ಬೇಡಿಕೆಯನ್ನು ಈಡೇರಿಸುವ ವಿಶ್ವಾಸವಿದೆ. ಇದೇ ವೇಳೆ ಸಮಾಜದಲ್ಲಿ ಶಾಂತಿಯನ್ನು ಖಾತರಿಪಡಿಸುವುದು ನಮೆಲ್ಲರ ಜವಾಬ್ದಾರಿ ಎಂದು ಸಲಹೆ ನೀಡಿದರು.

RELATED ARTICLES

Latest News