Wednesday, June 18, 2025
Homeಬೆಂಗಳೂರುನಾಲ್ಕು ತಿಂಗಳೊಳಗೆ ಬಿಬಿಎಂಪಿ ಚುನಾವಣೆ

ನಾಲ್ಕು ತಿಂಗಳೊಳಗೆ ಬಿಬಿಎಂಪಿ ಚುನಾವಣೆ

BBMP elections within four months

ಬೆಂಗಳೂರು,ಜೂ.18– ಬೆಂಗಳೂರನ್ನು ಕನಿಷ್ಠ 5 ಭಾಗಗಳನ್ನಾಗಿ ವಿಭಜಿಸುವ ನಿಟ್ಟಿನಲ್ಲಿ ರಾಜ್ಯಸರ್ಕಾರ ಪ್ರಕ್ರಿಯೆಗಳನ್ನು ಆರಂಭಿಸಿದ್ದು, ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ ಪಕ್ಷದ ಶಾಸಕರು ಮತ್ತು ಸಚಿವರ ಜೊತೆ ಮಹತ್ವದ ಸಭೆ ನಡೆಸಿದ್ದಾರೆ.

ನಗರದ ಕುಮಾರಕೃಪ ಅತಿಥಿಗೃಹದಲ್ಲಿ ನಡೆದ ಮಹತ್ವದ ಸಭೆ ನಡೆದಿದೆ. ಸಚಿವ ರಾಮಲಿಂಗಾರೆಡ್ಡಿ ಸಭೆಗೆ ಗೈರು ಹಾಜರಾದರೆ, ಬಿಜೆಪಿಯ ಉಚ್ಛಾಟಿತ ಶಾಸಕ ಎಸ್‌‍.ಟಿ.ಸೋಮಶೇಖರ್‌ ಭಾಗವಹಿಸಿದ್ದು ಗಮನ ಸೆಳೆದಿದೆ.ಉಳಿದಂತೆ ಸಚಿವರಾದ ಕೆ.ಜೆ.ಜಾರ್ಜ್‌, ಕೃಷ್ಣಭೈರೇಗೌಡ, ಭೈರತಿ ಸುರೇಶ್‌, ಜಮೀರ್‌ ಅಹಮದ್‌, ಶಾಸಕರಾದ ಎಂ.ಕೃಷ್ಣಪ್ಪ, ಪ್ರಿಯಾಕೃಷ್ಣ, ಎ.ಸಿ.ಶ್ರೀನಿವಾಸ್‌‍, ಆನೇಕಲ್‌ ಕೃಷ್ಣಪ್ಪ, ಬಿಬಿಎಂಪಿಯ ಆಯುಕ್ತರು, ಆಡಳಿತಾಧಿಕಾರಿಗಳು, ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಬಿಬಿಎಂಪಿಗೆ ಗ್ರೇಟರ್‌ ಬೆಂಗಳೂರು ಸ್ವರೂಪ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗ್ರೇಟರ್‌ ಬೆಂಗಳೂರು ಸಮಿತಿ ರಚನೆಯಾಗಬೇಕಿದೆ. ವಿಧಾನಮಂಡಲದಲ್ಲಿ ಅಂಗೀಕಾರಗೊಂಡಿರುವ ಮಸೂದೆಯ ಪ್ರಕಾರ, ಬಿಬಿಎಂಪಿಯನ್ನು 7 ಪಾಲಿಕೆಗಳನ್ನಾಗಿ ವಿಂಗಡಿಸಲು ಅವಕಾಶ ಇದೆ. ಮೊದಲ ಹಂತದಲ್ಲಿ ಕೇಂದ್ರ ಬೆಂಗಳೂರನ್ನು 5 ವಿಭಾಗಗಳನ್ನಾಗಿ ವಿಂಗಡಿಸಿ ನಗರದ ಹೊರವಲಯದಲ್ಲಿ ಉಸ್ತುವಾರಿಯಾಗಿ ಎರಡು ಪಾಲಿಕೆಗಳನ್ನಾಗಿ ವಿಭಜಿಸುವ ಚರ್ಚೆಗಳಾಗಿವೆ.

ಮೂಲ ಬಿಬಿಎಂಪಿಯ ಕೇಂದ್ರ ಭಾಗಕ್ಕೆ ಚುನಾವಣೆ ನಡೆಸಿ ಜನಪ್ರತಿನಿಧಿಗಳ ಸಮಿತಿಯನ್ನು ಅಸ್ತಿತ್ವಕ್ಕೆ ತರಲು ಸರ್ಕಾರ ಸಿದ್ಧವಾಗಿದೆ. ಈ ಸಂಬಂಧಪಟ್ಟಂತೆ ಡಿ.ಕೆ.ಶಿವಕುಮಾರ್‌, ಪಕ್ಷದ ಶಾಸಕರು, ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದು ಎಲ್ಲರ ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಗ್ರೇಟರ್‌ಬೆಂಗಳೂರು ವ್ಯಾಪ್ತಿಗೆ ಏಕಕಾಲ ಚುನಾವಣೆ ನಡೆಸಲು ಕೆಲವರು ಸಲಹೆ ನೀಡಿದರೆ, ಇನ್ನೂ ಕೆಲವರು ಸದ್ಯಕ್ಕೆ ಬಿಬಿಎಂಪಿ ವ್ಯಾಪ್ತಿಗೆ ಮಾತ್ರ ಚುನಾವಣೆ ನಡೆಸುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.

ಮುಂದಿನ ನಾಲ್ಕು ತಿಂಗಳೊಳಗಾಗಿ ಚುನಾವಣೆಯನ್ನು ಘೋಷಣೆ ಮಾಡುವುದಾಗಿ ಉಪಮುಖ್ಯಮಂತ್ರಿ ಸಭೆಯಲ್ಲಿ ಭರವಸೆ ನೀಡಿದ್ದಾರೆ. ಆ ವೇಳೆಗೆ ಕ್ಷೇತ್ರದಲ್ಲಿ ರಸ್ತೆ, ನೀರು, ಕಸ ವಿಲೇವಾರಿಯಂತಹ ನಾಗರಿಕ ಸೌಲಭ್ಯಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವಂತೆ ಪಕ್ಷದ ಶಾಸಕರಿಗೆ ಒತ್ತಾಯಿಸಿದ್ದಾರೆ.

ಅಭಿವೃದ್ಧಿಗೆ ಅನುದಾನ ದೊರೆಯುತ್ತಿಲ್ಲ ಎಂದು ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದು, ಕ್ರಮಬದ್ಧವಾದ ಪ್ರಸ್ತಾವನೆಗಳನ್ನು ಸಲ್ಲಿಸಿ ಅನುದಾನ ಪಡೆದುಕೊಳ್ಳುವಂತೆ ಉಪಮುಖ್ಯಮಂತ್ರಿಯವರು ಸಲಹೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.
ಇದೇ ವೇಳೆ ಸಂಚಾರದಟ್ಟಣೆಯ ಸಮಸ್ಯೆಯ ಬಗ್ಗೆ ವ್ಯಾಪಕ ಚರ್ಚೆಯಾಗಿದೆ.

ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅದಕ್ಕೆ ಪೂರಕವಾದ ರಸ್ತೆ ಅಭಿವೃದ್ಧಿಯಾಗುತ್ತಿಲ್ಲ, ಕಿರಿದಾದ ರಸ್ತೆಗಳನ್ನು ವಿಸ್ತರಣೆ ಮಾಡಲು ಭೂ ಸ್ವಾದೀನ ಪ್ರಕ್ರಿಯೆಗಳು ಅಡ್ಡಿಯಾಗಿವೆ. ರಸ್ತೆ ನಿರ್ಮಾಣಕ್ಕಿಂತಲೂ ಭೂಸ್ವಾಧೀನದ ವೆಚ್ಚವೇ ದುಬಾರಿಯಾಗುತ್ತಿದೆ. ಹೀಗಾಗಿ ಮೇಲ್ಸೇತುವೆ, ಕೆಳಸೇತುವೆಗಳ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಸಕರು ಸಲಹೆ ನೀಡಿದ್ದಾರೆ.

ಹೊಸ ಯೋಜನೆಗಳಾದ ನಂಬಿಕೆ ನಕ್ಷೆ, ಖಾತಾ ವಿತರಣೆಯಲ್ಲಿ ಗೊಂದಲಗಳಾಗದಂತೆ ಎಚ್ಚರಿಕೆ ವಹಿಸಬೇಕು. ಯಾರದೋ ದಾಖಲೆಗಳನ್ನು ಮತ್ಯಾರಿಗೋ ನೀಡುವುದು ಅಥವಾ ಯಾರದೋ ಆಸ್ತಿಗಳನ್ನು ಮತ್ಯಾರದೋ ಹೆಸರಿಗೆ ಖಾತೆ ಮಾಡಿಕೊಡದಂತೆ ಮುಂಜಾಗ್ರತೆ ವಹಿಸಲು ಶಾಸಕರು ಸಲಹೆ ನೀಡಿದ್ದಾರೆ.

ಈ ಬಗ್ಗೆ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಸ್ವಲ್ಪ ಏರುಪೇರಾದರೂ ದೊಡ್ಡ ಅನಾಹುತವೇ ನಡೆಯುತ್ತದೆ. ಸರ್ಕಾರಕ್ಕೂ ಕೆಟ್ಟ ಹೆಸರು ಬರುತ್ತದೆ ಎಂದು ಹೇಳಿದ್ದಾರೆ.
ಹವಾಮಾನ ಬದಲಾವಣೆ, ಹಸಿರು ಬೆಂಗಳೂರು ಭವಿಷ್ಯದ ಸವಾಲುಗಳಾಗಿದ್ದು, ಈ ಬಗ್ಗೆ ಶಾಲಾ ಮಟ್ಟದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಇದು ಸ್ವಾಗತಾರ್ಹ. ಅದೇ ಸಮಯದಲ್ಲಿ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು.

ಕೇಂದ್ರ ಸರ್ಕಾರದಿಂದ ಇದಕ್ಕೆ ಪೂರಕವಾದ ಅನುದಾನವನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆದುಕೊಳ್ಳಬೇಕೆಂಬ ಸಲಹೆಗಳು ಕೇಳಿಬಂದಿವೆ. ಜನವಸತಿ ಪ್ರದೇಶಗಳಿಗೆ ಮಳೆನೀರು ನುಗ್ಗಿ ಸಮಸ್ಯೆ ಉಂಟಾಗುತ್ತಿರುವುದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅವಶ್ಯಕತೆ ಇದೆ ಎಂದು ಶಾಸಕರು ತಿಳಿಸಿದ್ದಾರೆ.

RELATED ARTICLES

Latest News