ಬೆಂಗಳೂರು, ಮಾ.21- ಕೇರ್ ಟೇಕರ್ ಕೆಲಸಕ್ಕೆ ಸೇರಿದ ಕೇವಲ ಹತ್ತು ದಿನಗಳಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದ ಮಹಿಳೆ ಮತ್ತು ಆಕೆಯ ಪತಿಯನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿ 20.24 ಲಕ್ಷ ಮೌಲ್ಯದ 253 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಿರುವ ನಿವಾಸಿಯೊಬ್ಬರ ಅಜ್ಜಿಯು ವಯೋವೃದ್ಧರಾಗಿದ್ದು, ಆನಾರೋಗ್ಯದಿಂದ ಬಳಲುತ್ತಿದ್ದರಿಂದ, ಅವರ ಆರೈಕೆಗಾಗಿ ಕಳೆದ ಡಿ.31 ರಂದು ಒಬ್ಬ ಮಹಿಳೆಯನ್ನು ಕೇರ್ ಟೇಕರ್ ಕೆಲಸಕ್ಕೆ ನೇಮಕ ಮಾಡಿಕೊಂಡಿದ್ದಾರೆ. ಕೆಲಸದ ಅವಧಿಯಲ್ಲಿ ಮಾಲೀಕರಿಗೆ ತಿಳಿಯದಂತೆ ಈಕೆ ಹಣ, ಆಭರಣಗಳನ್ನು ಕಳ್ಳತನ ಮಾಡಿದ್ದಾಳೆ.
ಈ ನಡುವೆ ಜ.11 ರಂದು ಈ ಮಹಿಳೆ ಮನೆಯಿಂದ ಹೊರಗೆ ಹೋಗಿದ್ದು, ಮರಳಿ ಕರ್ತವ್ಯಕ್ಕೆ ಬಂದಿರುವುದಿಲ್ಲ. ಆಕೆಯ ಮೊಬೈಲ್ ಸಹ ಸ್ವಿಚ್ ಆಫ್ ಆಗಿರುತ್ತದೆ. ಕೇರ್ ಟೇಕರ್ ಕೆಲಸದಾಕೆಯ ಮೇಲೆ ಅನುಮಾನಗೊಂಡು, ಕೊಠಡಿಯ ಬೀರು ತೆಗೆದು ನೋಡಿದಾಗ ಅದರಲ್ಲಿದ್ದ ವಜ್ರ ಮತ್ತು ಚಿನ್ನಾಭರಣಗಳು ಹಾಗೂ 2.50 ಸಾವಿರ ಹಣ ಕಾಣೆಯಾಗಿದ್ದವು.
ತಕ್ಷಣ ಅವರು ಕೇರ್ಟೇಕರ್ ಕೆಲಸದಾಕೆಯ ಮೇಲೆ ಅನುಮಾನಗೊಂಡು ಹೆಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಮಹಿಳೆಯ ಬಗ್ಗೆ ಮಾಹಿತಿಯನ್ನು ಕಲೆಹಾಕಿ, ಹೆಚ್ ಬಿಆರ್ ಲೇಔಟ್ 4 ನೇ ಬ್ಲಾಕ್ ಹತ್ತಿರ ಮಹಿಳೆ ಹಾಗೂ ಆಕೆಯ ಪತಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಚಿನ್ನಾಭರಣ ಹಾಗೂ ಹಣ ಕಳವು ಮಾಡಿರುವುದಾಗಿ ಹೇಳಿದ್ದಾಳೆ.
ಅಲ್ಲದೇ ಈ ಹಿಂದೆ ನಗರದ ವಿವಿಧ ಠಾಣಾ ವ್ಯಾಪ್ತಿಯಲ್ಲಿಯೂ ಸಹ ಮನೆ ಕಳವು ಮಾಡಿರುವುದಾಗಿ ತಿಳಿಸಿದ್ದು, ಆಕೆಯಿಂದ 45 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಈ ದಂಪತಿಯನ್ನು ಸುದೀರ್ಘವಾಗಿ ವಿಚಾರಣೆ ಮಾಡಿದಾಗ ಕಳವು ಮಾಡಿದ ಚಿನ್ನಾಭರಣಗಳನ್ನು ಆಂಧ್ರಪ್ರದೇಶದ ನೆಲ್ಲೂರಿನ ಜ್ಯೂವೆಲರಿ ಅಂಗಡಿಯಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದು, ಅದರಂತೆ ಜ್ಯೂವೆಲರಿ ಅಂಗಡಿಯ ಮಾಲೀಕನಿಗೆ ನೋಟಿಸ್ನ್ನು ಜಾರಿ ಮಾಡಿದ್ದು, ನಂತರ ಆತ 70 ಗ್ರಾಂ ಚಿನ್ನಾಭರಣವನ್ನು ಠಾಣೆಗೆ ತಂದು ಒಪ್ಪಿಸಿದ್ದಾರೆ.
ಅಲ್ಲದೇ ಕೆಲವು ಆಭರಣಗಳನ್ನು ಜೆಪಿನಗರದ ಕೊತ್ತನೂರು ದಿಣ್ಣೆಯಲ್ಲಿ ವಾಸರುವ ಸ್ನೇಹಿತನಿಗೆ ನೀಡಿರುವುದಾಗಿ ತಿಳಿಸಿದ್ದು, ಆತನಿಂದ 138 ಗ್ರಾಂ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ. ಒಟ್ಟಾರೆ ಆರೋಪಿಗಳಿಂದ 253 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದು, ಇವುಗಳ ಮೌಲ್ಯ 20.24 ಲಕ್ಷ ರೂ. ಅಂದಾಜಿಸಲಾಗಿದೆ. ಇನ್ಸ್ಪೆಕ್ಟರ್ ದೀಪಕ್ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ಕೈಗೊಂಡಿದ್ದರು.