ಬೆಂಗಳೂರು, ಸೆ.4- ಯೂ ಟ್ಯೂಬರ್ ಸಮೀರ್ ವಾಸವಾಗಿದ್ದ ಬನ್ನೇರುಘಟ್ಟದ ಹುಲ್ಲಹಳ್ಳಿಯ ಬಾಡಿಗೆ ಮನೆ ಮೇಲೆ ಬೆಳ್ತಂಗಡಿ ಪೊಲೀಸರು ಇಂದು ಮಧ್ಯಾಹ್ನ ದಾಳಿ ಮಾಡಿದ್ದಾರೆ. ಯೂ ಟ್ಯೂಬರ್ ಎಂಡಿ ಸಮೀರ್ ಬೆಳ್ತಂಗಡಿ ಪೊಲೀಸರಿಗೆ ಸರಿಯಾಗಿ ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಇನ್್ಸಪೆಕ್ಟರ್ ನಾಗೇಶ್ ಖದ್ರಿ ಮತ್ತು ಅವರ ತಂಡ ಎಫ್ಎಸ್ಎಲ್ ವಿಭಾಗದ ಸೋಕೋ ಸಿಬ್ಬಂದಿ ಜತೆ ಇಂದು ಮಧ್ಯಾಹ್ನ 1.30ರ ಸುಮಾರಿನಲ್ಲಿ ನಗರಕ್ಕೆ ಆಗಮಿಸಿ ಆತನ ಮನೆಯನ್ನು ಮಹಜರು ನಡೆಸಿದೆ. ಪ್ರಕರಣದ ವಿಡಿಯೋ ಮಾಡಲು ಬಳಸಿದ ಕಂಪ್ಯೂಟರ್ ಮತ್ತು ಮೊಬೈಲ್ಅನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳ್ತಂಗಡಿ ಪೊಲೀಸರು ಈಗಾಗಲೇ ಆತನನ್ನು ಎರಡು ಬಾರಿ ವಿಚಾರಣೆಗೊಳಪಡಿಸಿ ಮಾಹಿತಿ ಪಡೆದುಕೊಂಡಿದ್ದಾರೆ.
ಬೆಳಗಿನಜಾವದವರೆಗೂ ಯೂಟ್ಯೂಬರ್ ವಿಚಾರಣೆ
ಬೆಂಗಳೂರು, ಸೆ.4- ಧರ್ಮಸ್ಥಳದ ಸುತ್ತಮುತ್ತ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಬಗ್ಗೆ ಯೂಟ್ಯೂಬ್ನಲ್ಲಿ ಬಿತ್ತರವಾಗಿದ್ದ ವಿಡಿಯೋ ತುಣುಕುಗಳ ಸತ್ಯಾಸತ್ಯತೆಯ ಬಗ್ಗೆ ತನಿಖೆ ತೀವ್ರಗೊಳಿಸಿರುವ ಎಸ್ಐಟಿ ಯೂಟ್ಯೂಬರ್ ಒಬ್ಬರನ್ನು ರಾತ್ರಿಯಿಡೀ ವಿಚಾರಣೆಗೊಳಪಡಿಸಿ ಮಾಹಿತಿ ಪಡೆದುಕೊಂಡಿದೆ. ಬೆಳ್ತಂಗಡಿ ಎಸ್ಐಟಿ ಕಚೇರಿಗೆ ನಿನ್ನೆ ಸಂಜೆ ದಾಖಲೆಗಳೊಂದಿಗೆ ಹಾಜರಾಗಿದ್ದ ಯು ಟ್ಯೂಬರ್ ಅಭಿಷೇಕ್ನನ್ನು ಇಂದು ಬೆಳಗಿನ ಜಾವ 4 ಗಂಟೆವರೆಗೂ ತನಿಖಾಧಿಕಾರಿ ಜಿತೇಂದ್ರಕುಮಾರ್ ದಯಾಮ ಅವರು ವಿಚಾರಣೆಗೊಳಪಡಿಸಿ ಹಲವು ಮಹತ್ವದ ವಿವರಗಳನ್ನು ಪಡೆದುಕೊಂಡಿದ್ದಾರೆ.
ನೀವು ಯು ಟ್ಯೂಬ್ನಲ್ಲಿ ಪ್ರಸಾರ ಮಾಡಿರುವ ಅಂಶಗಳ ಮೂಲ ಎಲ್ಲಿಯದು, ಯಾವ ಮೂಲಗಳಿಂದ ಸಂಗ್ರಹಿಸಲಾಗಿದೆ. ಪ್ರಸಾರ ಮಾಡಿರುವ ಅಂಶಗಳಲ್ಲಿ ಸತ್ಯಾಸತ್ಯತೆ ಇದೆಯೇ ಎಂಬಿತ್ಯಾದಿ ವಿವರಗಳನ್ನು ತನಿಖಾಧಿಕಾರಿ ಪಡೆದುಕೊಂಡು ಇಂದು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಹೇಳಿ ಅವರನ್ನು ಕಳುಹಿಸಿದ್ದಾರೆ. ಧರ್ಮಸ್ಥಳ ಸುತ್ತಮುತ್ತ ನೂರಾರು ಶವಗಳನ್ನು ಹೂಳಲಾಗಿದೆ ಎಂದು ಆರೋಪಿಸಿರುವ ಬುರುಡೆ ಚಿನ್ನಯ್ಯ ಹಾಗೂ ಅನನ್ಯ ಭಟ್ ಕಾಲ್ಪನಿಕದ ಸುಜಾತಾ ಭಟ್ ಅವರ ಬಗ್ಗೆ ವಿಡಿಯೋ ಮಾಡಿ ತನ್ನ ಯು ಟ್ಯೂಬ್ನಲ್ಲಿ ಅಭಿಷೇಕ್ ಪ್ರಸಾರ ಮಾಡಿದ್ದರು. ಬುರುಡೆ ಚಿನ್ನಯ್ಯನನ್ನು ನಿನ್ನೆ ಎಸ್ಐಟಿ ಅಧಿಕಾರಿಗಳು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯ ಮೂರು ದಿನಗಳ ಕಾಲ ಆತನನ್ನು ಎಸ್ಐಟಿ ಕಸ್ಟಡಿಗೆ ನೀಡಿದೆ.