ಬೆಂಗಳೂರು,ಅ.10-ಸ್ನೇಹಿತರೊಂದಿಗೆ ಬಾರ್ ಅಂಡ್ ರೆಸ್ಟೋರೆಂಟ್ಗೆ ಹೋಗಿದ್ದ ಬ್ಯಾಂಕ್ ಮಾನ್ಯೇಜರ್ರೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.ಮೂಲತಃ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಮೇಘರಾಜ್ (31) ಮೃತಪಟ್ಟ ಬ್ಯಾಂಕ್ ಮ್ಯಾನೇಜರ್. ನಗರದ ಉಲ್ಲಾಳದಲ್ಲಿ ಪತ್ನಿ ಹಾಗೂ ಆರು ತಿಂಗಳ ಮಗುವಿನೊಂದಿಗೆ ಮೇಘರಾಜ್ ವಾಸವಾಗಿದ್ದರು.ಅವರು ಜನ ಸಾಲ್ ಬ್ಯಾಂಕ್ನಲ್ಲಿ ಮ್ಯಾನೇಜರ್ ಆಗಿದ್ದರು.
ಆರ್ ಆರ್ ನಗರ ಮುಖ್ಯ ರಸ್ತೆಯಲ್ಲಿರುವ 1522 ಬಾರ್ ಅಂಡ್ ರೆಸ್ಟೋರೆಂಟ್ಗೆ ನಿನ್ನೆ ರಾತ್ರಿ ಮೂವರು ಸ್ನೇಹಿತರೊಂದಿಗೆ ಹೋಗಿ ಮದ್ಯ ಸೇವಿಸಿ ಊಟ ಮಾಡಿದ್ದಾರೆ. ನಂತರ ಬಿಲ್ ಕೊಟ್ಟು ಸ್ನೇಹಿತರೊಂದಿಗೆ ರೆಸ್ಟೋರೆಂಟ್ನಿಂದ ರಾತ್ರಿ 11.30 ರ ಸುಮಾರಿನಲ್ಲಿ ಹೊರಗೆ ಹೋಗುವಾಗ ಒಂದು ನಿಮಿಷ ನಿಂತಿರಿ ಎಂದು ಹೇಳಿ ಮತ್ತೆ ಮೇಘರಾಜ್ ಒಳಗೆ ಹೋಗಿದ್ದಾರೆ.
ಎಷ್ಟು ಹೊತ್ತಾದರೂ ಮೇಘರಾಜ್ ಬಾರದಿದ್ದಾಗ ಸ್ನೇಹಿತರು ಒಳಗೆ ಹೋಗಿ ನೋಡಿದರೂ ಕಾಣಿಸಿಲ್ಲ. ನಂತರ ಬಾರ್ ಮ್ಯಾನೇಜರ್ನನ್ನು ವಿಚಾರಿಸಿ, ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ವಾಶ್ರೂಂಗೆ ಹೋಗಿರುವುದು ಕಂಡು ಬಂದಿದೆ. ಸ್ನೇಹಿತರು ವಾಶ್ ರೂಂ ಬಳಿ ಹೋಗಿ ಬಾಗಿಲು ತಟ್ಟಿ ಕೂಗಿದ್ದಾರೆ. ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಗಾಬರಿಯಾಗಿ ಮ್ಯಾನೇಜರ್ಗೆ ತಿಳಿಸಿದ್ದಾರೆ.
ತಕ್ಷಣ ಬಾಗಿಲು ಹೊಡೆದು ನೋಡಿದಾಗ ಮೇಘರಾಜ್ ಅವರು ಮೃತಪಟ್ಟಿರುವುದು ಗೊತ್ತಾಗಿದೆ.ಈ ಬಗ್ಗೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸೋಕೋ ಅಧಿಕಾರಿಗಳು ಆರ್ಆರ್ನಗರ ಠಾಣೆ ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಮೇಘರಾಜ್ ಅವರ ಸಹೋದರ ವಿನಯ್ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಮೇಘರಾಜ್ ಅವರ ಸಾವು ಹೇಗಾಗಿದೆ ಎಂಬುವುದು ಮರಣೋತ್ತರ ಪರೀಕ್ಷೆವರದಿ ಬಂದ ನಂತರವಷ್ಟೇ ಗೊತ್ತಾಗಲಿದೆ ಎಂದು ಡಿಸಿಪಿ ಗಿರೀಶ್ ಅವರು ಈ ಸಂಜೆಗೆ ತಿಳಿಸಿದ್ದಾರೆ.