ಬೆಂಗಳೂರು, ಆ.7– ಮನೆ ಮುಂದೆ ಬರುವ ಕಸದ ವಾಹನಗಳಿಗೆ ಕಸ ನೀಡದಿರುವ ಮನೆಗಳ ಮಾಲೀಕರ ಮೇಲೆ ದಂಡ ಪ್ರಯೋಗಿಸುವ ಸಾಹಸಕ್ಕೆ ಬಿಬಿಎಂಪಿ ಕೈ ಹಾಕಿದೆ. ಕಸದ ವಾಹನಗಳು ಸಂಗೀತ ಹಾಕಿಕೊಂಡು ಮನೆ ಮುಂದೆ ಬಂದರೂ ಜನ ಮಾತ್ರ ಕಸದ ಗಾಡಿಗಳಿಗೆ ಕಸ ಹಾಕದೆ ಬೀದಿ ಬದಿಗಳಲ್ಲಿ ಎಸೆಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ ಅಧಿಕಾರಿಗಳು ಇದೀಗ ಕಸದ ಗಾಡಿಗಳಿಗೆ ಕಸ ಹಾಕದಿರುವ ಮನೆಗಳಿಗೆ ದಂಡ ಹಾಕಲು ಮುಂದಾಗಿದೆ.
ಮನೆ..ಮನೆಗೆ ಕಸ ಸಂಗ್ರಹಿಸಲು ಪೌರಕಾರ್ಮಿಕರು ಬಂದಾಗ ಕಸ ನೀಡಬೇಕು..ಇಲ್ಲವಾದ್ರೆ, ಮನೆ ಮಾಲೀಕರಿಗೆ ನೋಟೀಸ್ ಅಥವಾ ದಂಡ ಪ್ರಯೋಗ ಮಾಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಕಳೆದ ವಾರ ಸ್ವಚ್ಛ ಸರ್ವೇಕ್ಷಣ ವರದಿಯಲ್ಲಿ ದೇಶದ 4 ನೇ ಕಲುಷಿತ ನಗರ ಎಂಬ ಕಳಂಕ ಬೆಂಗಳೂರಿಗೆ ಬಂದಿತ್ತು. ಇದರಿಂದ ಕಸ ಸಂಗ್ರಹಣೆಯಲ್ಲಿ ಬೆಂಗಳೂರಿನ ಮಾನಮರ್ಯಾದೆ ಮೂರು ಕಾಸಿಗೆ ಹಾರಾಜಾಗಿತ್ತು.
ಈ ಕಳಂಕ ತಪ್ಪಿಸಲು ಡಿಸಿಎಂ ನೇತೃತ್ವದಲ್ಲಿ ಬಿಬಿಎಂಪಿ ಅಧಿಕಾರಿಗಳ ಸಭೆಯಲ್ಲಿ ದಂಡ ಪ್ರಯೋಗ ಅಸ್ತ್ರ ಪ್ರಯೋಗಿಸಲು ತೀರ್ಮಾನಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಜೊತೆಗೆ ಹಾಟ್ಸ್ಪಾಟ್ಗಳನ್ನು ಗುರುತಿಸಿ ಮಾರ್ಷಲ್ ನಿಯೋಜನೆ ಮಾಡುವುದು.ಪೊಲೀಸ್ ಇಲಾಖೆ ಸಹಯೋಗದೊಂದಿಗೆ ರಾತ್ರಿ ವೇಳೆ ಗಸ್ತು ತಿರುಗುವುದು..ರಸ್ತೆಗಳಲ್ಲಿ ಕಸ ಹಾಕುವವರ ವಿರುದ್ಧ ದಂಡ ಪ್ರಯೋಗದ ಜೊತೆಗೆ ಕಟ್ಟಡಗಳ ತ್ಯಾಜ್ಯ ವಿಲೇವಾರಿಗೂ ಬ್ರೇಕ್ ಹಾಕುವ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಕಟ್ಟಡ ನಿರ್ಮಿಸುವವರು ಇನ್ನು ಮುಂದೆ ಕಟ್ಟಡಗಳ ಅವಶೇಷಗಳ ವಿಲೇವಾರಿಗೆ ಹಣ ವಸೂಲಿ ಮಾಡುವುದು ಹಾಗೂ ಅವಶೇಷಗಳನ್ನು ಪಾಲಿಕೆ ನಿಗದಿಪಡಿಸಿದ ಕ್ವಾರೆಯಲ್ಲೇ ವಿಲೇವಾರಿ ಮಾಡಬೇಕು ಎಂಬ ಷರತ್ತು ವಿಧಿಸುವ ಸಾಧ್ಯತೆಗಳಿವೆ.
ತನಿಖೆಗೆ ಸೂಚನೆ : ಜಿ.ಪರಮೇಶ್ವರ್
ಧರ್ಮಸ್ಥಳದಲ್ಲಿ ನಿನ್ನೆ ದಿನ ಎರಡು ಗುಂಪುಗಳ ಮಧ್ಯೆ ಗುಂಪು ಘರ್ಷಣೆ ಏಕಾಗಿದೆ, ಯಾರು? ಕಾರಣಕರ್ತರು, ಎರಡು ಗುಂಪಿನ ಉದ್ದೇಶ ಏನಿದೆ! ಎಂಬುದರ ಕುರಿತು ತನಿಖೆ ನಡೆಸಿ ವರದಿ ನೀಡಲು ಸೂಚಿಸಿದ್ದೇನೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.
ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಲಿನ ಜನಸಮುದಾಯ ಎಸ್ಐಟಿ ಮಾಡಲು ಒತ್ತಾಯಿಸಿದ್ದರು. ಬಹಳ ಎಚ್ಚರಿಕೆಯಿಂದ ಪರಿಶೀಲನೆ ಮಾಡಿ ಎಸ್ಐಟಿ ರಚಿಸಿದ್ದೇವೆ. ಅನಾಮಿಕ ವ್ಯಕಿ,್ತ ಇಲ್ಲಿ ಕೊಲೆಯಾಗಿದೆ, ನಾನೇ ಅನೇಕ ಶವಗಳನ್ನು ಹೂತಿದ್ದೇನೆ ಎಂದು ಹೇಳಿಕೆ ನೀಡಿದ್ದ. ಆ ವ್ಯಕ್ತಿ, ಮ್ಯಾಜಿಸ್ಟ್ರೇಟರ್ ಮುಂದೆ ಸಿಆರ್ಪಿಸಿ 164ರ ಅಡಿ ಹೇಳಿಕೆ ನೀಡಿದ್ದಾನೆ. ಆತನ ಹೇಳಿಕೆ ಆಧರಿಸಿ ತನಿಖೆ ಮಾಡಬೇಕು ಎಂದು ಮ್ಯಾಜಿಸ್ಟ್ರೀಯಲ್ ಸೂಚನೆಯೂ ಇತ್ತು. ನಾವು ಕೂಡ ಸಾರ್ವಜನಿಕವಾಗಿ ಗಂಭೀರವಾಗಿ ಪರಿಗಣಿಸಿ ಎಸ್ಐಟಿ ಮಾಡಿದ್ದೇವೆ ಎಂದು ತಿಳಿಸಿದರು.
ಧರ್ಮಸ್ಥಳ ಭಾಗದ 13 ಸ್ಥಳಗಳಲ್ಲಿ ಹೆಣಗಳನ್ನು ಹೂತುಹಾಕಿದ್ದೇನೆ ಎಂದು ಹೇಳಿಕೆ ನೀಡಿದ್ದ. ಅದರ ಪ್ರಕಾರ 13 ಸ್ಥಳಗಳನ್ನು ಅಗೆದಿದ್ದಾರೆ. 6ನೇ ಸ್ಥಳದಲ್ಲಿ ಗಂಡಸಿನ ಅಸ್ಥಿಪಂಜರ ಸಿಕ್ಕಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. 13ನೇ ಸ್ಥಳಕ್ಕೆ ಹೋದಾಗ ಏನೂ ಸಿಕ್ಕಿಲ್ಲ. ಇದನ್ನು ಹೊರತುಪಡಿಸಿ ಗುಡ್ಡದಲ್ಲಿ ಒಂದಿಷ್ಟು ಮೂಳೆಗಳು ಸಿಕ್ಕಿದ್ದು, ಎಫ್ಎಸ್ಎಲ್ ಪರೀಕ್ಷೆಗೆ ಎಸ್ಐಟಿ ಕಳುಹಿಸಿದೆ ಎಂದು ಹೇಳಿದರು.
ಇದರ ಹಿನ್ನೆಲೆಯಲ್ಲಿ ಅಥವಾ ಸಂಬಂಧಪಟ್ಟಂತೆ ಎರಡು ಗುಂಪುಗಳ ನಡುವೆ ನಿನ್ನೆ ಘರ್ಷಣೆಯಾಗಿದೆ. ದೂರು, ಪ್ರತಿದೂರು ಕೊಟ್ಟಿದ್ದಾರೆ. ಎಫ್ಐಆರ್ ದಾಖಲಿಸುವಂತೆ ಸೂಚಿಸಲಾಗಿದೆ. ಅದನ್ನು ತನಿಖೆ ಮಾಡುತ್ತಾರೆ. ಯಾವ ರೀತಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಎಸ್ಐಟಿ ಹಾಗೂ ಸ್ಥಳೀಯ ಪೊಲೀಸರು ನಿರ್ಧರಿಸುತ್ತಾರೆ ಎಂದು ತಿಳಿಸಿದರು.
ಧರ್ಮಸ್ಥಳದ ವಿಚಾರದಲ್ಲಿ ಯಾರೋ ನೀಡುವ ಹೇಳಿಕೆ ನಮಗೆ ಮುಖ್ಯವಲ್ಲ. ಎಸ್ಐಟಿಯವರು ತನಿಖೆಯನ್ನು ತಾಂತ್ರಿಕವಾಗಿ ಮತ್ತು ಆಧುನಿಕವಾಗಿ ತನಿಖೆ ನಡೆಸಿ ಸತ್ಯ ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅವರನ್ನು ಈಗಲೇ ಪ್ರಶ್ನೆ ಮಾಡುವುದು ತನಿಖೆಯ ದೃಷ್ಟಿಯಿಂದ ಸರಿಯಲ್ಲ ಎಂದರು.
ಎಸ್ಐಟಿ ಸರಿಯಾಗಿ ತನಿಖೆ ಮಾಡುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಸರಿಯಾಗಿ ತನಿಖೆ ಆಗುತ್ತಿಲ್ಲ ಎಂದು ಇನ್ನೂ ಕೆಲವರು ಹೇಳುತ್ತಿದ್ದಾರೆ. ಎಲ್ಲ ಸಲಹೆಗಳನ್ನು ಅವರೇ ನೀಡುತ್ತಿದ್ದಾರೆ. ಕೆಲವರು ರೇಡಾರ್ ತರಬೇಕು ಎನ್ನುತ್ತಿದ್ದಾರೆ. ಅವರು ಹೇಳಿದ ರೀತಿ ತನಿಖೆ ಮಾಡಲು ಸಾಧ್ಯವಿಲ್ಲ. ಪೊಲೀಸರು ಸಮರ್ಥರಿದ್ದಾರೆ. ತನಿಖೆ ಮಾಡುತ್ತಾರೆ. ಎಸ್ಐಟಿ ತನಿಖೆಯ ಬಗ್ಗೆ ಸರ್ಕಾರ ಯಾವುದೇ ನಿರ್ದೇಶನ ನೀಡುವುದಿಲ್ಲ ಎಂದು ಹೇಳಿದರು.
ಇವತ್ತಿನ ಸಚಿವ ಸಂಪುಟಸಭೆಯಲ್ಲಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಒಳಮೀಸಲಾತಿ ಕುರಿತು ನೀಡಿರುವ ವರದಿ ಚರ್ಚೆಯಾಗಲಿದೆ ಎಂದರು.ನಾಳೆ ಬೆಂಗಳೂರಿನಲ್ಲಿ ರಾಹುಲ್ಗಾಂಧಿ ನೇತೃತ್ವದಲ್ಲಿ ನಡೆಯಲಿರುವ ಮತಗಳ್ಳತನದ ವಿರುದ್ಧದ ಪ್ರತಿಭಟನೆಗೆ ಪೊಲೀಸ್ ಆಯುಕ್ತರು ಎಲ್ಲ ರೀತಿಯ ಭದ್ರತೆಗಳನ್ನು ಕೈಗೊಂಡಿದ್ದಾರೆ. ಕೇಂದ್ರದಿಂದ ಎಸ್ಪಿಜಿಯವರು ಬಂದಿದ್ದಾರೆ. ಅವರೊಂದಿಗೆ ನಮ ಪೊಲೀಸರು ಸಂಪರ್ಕದಲ್ಲಿದ್ದಾರೆ. ಆಗಸ್ಟ್ 10ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬರುತ್ತಿದ್ದು, ಅವರಿಗೂ ಭದ್ರತೆ ಒದಗಿಸುತ್ತೇವೆ ಎಂದರು.