Friday, December 26, 2025
Homeಬೆಂಗಳೂರುಬೆಂಗಳೂರು : ಪ್ರಿಯಕರನಿಂದಲೇ ಸ್ಟಾಫ್‌ ನರ್ಸ್‌ ಭೀಕರ ಕೊಲೆ

ಬೆಂಗಳೂರು : ಪ್ರಿಯಕರನಿಂದಲೇ ಸ್ಟಾಫ್‌ ನರ್ಸ್‌ ಭೀಕರ ಕೊಲೆ

Bengaluru: Staff nurse brutally murdered by boyfriend

ಬೆಂಗಳೂರು,ಡಿ. 26- ಒಂಟಿಯಾಗಿ ವಾಸವಾಗಿದ್ದ ಸ್ಟಾಫ್‌ನರ್ಸ್‌ ಕತ್ತು ಕೊಯ್ದು ಪ್ರಿಯಕರನೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕುಮಾರ ಸ್ವಾಮಿ ಲೇಔಟ್‌ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಜಯದೇವ ಆಸ್ಪತ್ರೆಯಲ್ಲಿ ಸ್ಟಾಫ್‌ ನರ್ಸ್‌ ಆಗಿ ಸೇವೆ ಸಲ್ಲಿಸುತ್ತಿದ್ದ ಮಮತಾ (39) ಕೊಲೆಯಾದ ದುರ್ದೈವಿ. ಮಮತಾ ಅವರು ಸ್ನೇಹಿತೆಯೊಂದಿಗೆ ಕುಮಾರಸ್ವಾಮಿ ಲೇಔಟ್‌ನ ಪ್ರಗತಿಪುರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು.

ಮೂಲತಃ ಹಿರಿಯೂರು ತಾಲ್ಲೂಕಿನವರಾದ ಮಮತಾ ಅವರು ಕಳೆದ ಒಂದು ವರ್ಷದ ಹಿಂದೆ ನಗರಕ್ಕೆ ಬಂದು ಜಯದೇವ ಆಸ್ಪತ್ರೆಯಲ್ಲಿ ಸ್ಟಾಫ್‌ನರ್ಸ್‌ ಆಗಿ ಸೇವೆ ಸಲ್ಲಿಸುತ್ತಿದ್ದರು. ಇದೇ ಆಸ್ಪತ್ರೆಯಲ್ಲಿ ಕಳೆದ 6 ವರ್ಷಗಳಿಂದ ಸ್ಟಾಫ್‌ನರ್ಸ್‌ ಆಗಿರುವ ಹಾಸನ ಮೂಲದ ಸುಧಾಕರ್‌ಗೆ ಮಮತಾ ಮೇಲೆ ಪ್ರೀತಿಯಾಗಿದೆ.

ತನಗಿಂತ ವಯಸ್ಸಿನಲ್ಲಿ ಮಮತಾ ಅವರು ದೊಡ್ಡವರೆಂದು ತಿಳಿಯದೇ ಸುಧಾಕರ್‌ ಪ್ರೀತಿಯ ಬಲೆಗೆ ಬಿದ್ದಿದ್ದಾರೆ. ಈತನ ಪ್ರೀತಿಯನ್ನು ಆಕೆಯೂ ಸಹ ಒಪ್ಪಿಕೊಂಡು ಪರಸ್ಪರ ಪ್ರೀತಿಸುತ್ತಿದ್ದರು. ಈ ನಡುವೆ ಸುಧಾಕರ್‌ಗೆ ಆತನ ಕುಟುಂಬಸ್ಥರು ಇತ್ತೀಚೆಗೆ ಬೇರೆ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಸಿದ್ದಾರೆ. ಈ ವಿಷಯ ಮಮತಾಗೆ ಗೊತ್ತಾಗಿ ಕೋಪಗೊಂಡು ನೀನು ತನ್ನನ್ನೇ ಮದುವೆಯಾಗಬೇಕೆಂದು ಒತ್ತಾಯಿಸಿದ್ದಾರೆ.

ನೀನೇನಾದರೂ ನನ್ನನ್ನು ಬಿಟ್ಟು ಬೇರೆ ಮದುವೆಯಾದರೆ ತಾನು ಆತಹತ್ಯೆ ಮಾಡಿಕೊಂಡು ನಿನ್ನ ಹಾಗೂ ನಿನ್ನ ಕುಟುಂಬವನ್ನು ಸಂಕಷ್ಟಕ್ಕೆ ಒಳಪಡಿಸುವುದಾಗಿ ಮಮತಾ ಬೆದರಿಸಿದ್ದಾಳೆ. ಮಮತಾಳ ಮಾತಿನಿಂದ ಸುಧಾಕರ್‌ ಆತಂಕಗೊಂಡಿದ್ದಾನೆ. ಹಾಗೇನಾದರೂ ಒಂದು ವೇಳೆ ಮಮತಾ ಆತಹತ್ಯೆ ಮಾಡಿಕೊಂಡರೆ ತೊಂದರೆಯಾಗುತ್ತದೆ ಎಂದು ಯೋಚಿಸಿದ ಸುಧಾಕರ್‌ ಆಕೆಯನ್ನೇ ಕೊಲೆ ಮಾಡಲು ಸಂಚು ರೂಪಿಸಿದ್ದಾನೆ.

ಅದರಂತೆ ಡಿ.24 ರಂದು ಮಮತಾ ಅವರ ಸ್ನೇಹಿತೆ ಊರಿಗೆ ಹೋಗಿರುವ ಬಗ್ಗೆ ಸುಧಾಕರ್‌ಗೆ ಗೊತ್ತಾಗಿದೆ. ಇದೇ ಸರಿಯಾದ ಸಮಯವೆಂದು ತಿಳಿದು ಅಂದು ರಾತ್ರಿ ಮಮತಾ ಅವರನ್ನು ಮಾತನಾಡಿಸುವ ನೆಪದಲ್ಲಿ ಅವರ ಮನೆಗೆ ಹೋಗಿದ್ದಾನೆ.ಮನೆಯಲ್ಲಿ ಒಂಟಿಯಾಗಿದ್ದ ಮಮತಾಳ ಕತ್ತುಕೊಯ್ದು ಭೀಕರವಾಗಿ ಕೊಲೆ ಮಾಡಿ ಪ್ರಿಯಕರ ಸುಧಾಕರ್‌ ಸ್ಥಳದಿಂದ ಪರಾರಿಯಾಗಿದ್ದಾನೆ.

ನಿನ್ನೆ ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದೆ. ಸುದ್ದಿ ತಿಳಿದು ಕುಮಾರಸ್ವಾಮಿ ಲೇಔಟ್‌ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ, ನರ್ಸ್‌ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆಹಾಕಿ ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಸುಧಾಕರ್‌ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News