ಬೆಂಗಳೂರು, ಡಿ.8 ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಕಾನೂನುಬಾಹೀರವಾಗಿ ಹಿರಿಯ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಈ ಕ್ರಮದಿಂದ ಪಾಲಿಕೆ ಬೊಕ್ಕಸಕ್ಕೆ ಹೊರೆಯಾಗುವುದರಿಂದ ಸರ್ಕಾರ ತನ್ನ ನಿರ್ಧಾರವನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಒತ್ತಾಯಿಸಿದ್ದಾರೆ.
ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ಅವರು ಆಗ್ರಹಿಸಿದ್ದಾರೆ. ಐದು ನಗರ ಪಾಲಿಕೆಗಳಲ್ಲಿ ಅನಗತ್ಯವಾಗಿ 10 ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಈ ನೇಮಕದಲ್ಲಿ ಕರ್ನಾಟಕ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಐದು ಪಾಲಿಕೆಗಳಿಗೆ ಆಯುಕ್ತರುಗಳನ್ನು ನಿಯೋಜನೆ ಮಾಡಿರುವುದು ಸರಿಯಾದ ಕ್ರಮವಲ್ಲ. ಇದು ಸಂವಿಧಾನ ಬಾಹಿರ ಕಾರ್ಯ ಎಂದು ಅವರು ತಿಳಿಸಿದ್ದಾರೆ.
1.40 ಕೋಟಿ ಜನಸಂಖ್ಯೆ ಹೊಂದಿದ್ದ ಬಿಬಿಎಂಪಿಯನ್ನು ವಿಭಜನೆ ಮಾಡಿ ರಚಿಸಿರುವ ಪಾಲಿಕೆಗಳಿಗೆ ಹಿರಿಯ ಅಧಿಕಾರಿಗಳ ಬದಲು ಪ್ರಾಯೋಗಿಕ ಅವಧಿಯಲ್ಲಿರುವ ಅಧಿಕಾರಿಗಳನ್ನು ಅಥವಾ ಸೇವಾ ಹಿರಿತನ ಹೊಂದಿರುವ ಹಿರಿಯ ಅಧಿಕಾರಿ ಗಳನ್ನು ನಿಯೋಜನೆ ಮಾಡಿದ್ದರೆ ಸಾಕಿತ್ತು.
ಇದರಿಂದಾಗಿ ಪಾಲಿಕೆಗಳಿಗೆ ಪ್ರತೀ ತಿಂಗಳು ಕನಿಷ್ಠ ಹತ್ತು ಲಕ್ಷ ರೂ.ಗಳಷ್ಟು ಹಣ ಉಳಿತಾಯವಾಗುತ್ತಿತ್ತು.ಐದು ನಗರ ಪಾಲಿಕೆಗಳಿಗೆ ಅಪರ ಆಯುಕ್ತರ ಹೆಸರುಗಳಲ್ಲಿ 10 ಅಧಿಕಾರಿಗಳ ಅವಶ್ಯಕತೆ ಇತ್ತೇ ? ನಗರ ಪಾಲಿಕೆಗಳಿಗೆ ತಲಾ ಒಬ್ಬರು ಅಪರ ಆಯುಕ್ತರು (ಅಭಿವೃದ್ಧಿ) ಮತ್ತು ಅಪರ ಆಯುಕ್ತರು (ಆಡಳಿತ) ಸೇರಿದಂತೆ ಒಟ್ಟು 10 ಮಂದಿ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ.
ಈ 10 ಮಂದಿ ಅಧಿಕಾರಿಗಳ ವೇತನ ಮತ್ತು ಭತ್ಯೆಗಳು ಹಾಗೂ ಅವರುಗಳ ಕಛೇರಿಗಳ ಸಿಬ್ಬಂದಿ ವರ್ಗ ವಾಹನಗಳ ನಿರ್ವಹಣೆ ಕಾರ್ಯಗಳಿಗೆ ಪ್ರತೀ ವರ್ಷ ಒಂಬತ್ತು ಕೋಟಿಗಳಷ್ಟು ಬೃಹತ್ ಪ್ರಮಾಣದಷ್ಟು ಸಾರ್ವಜನಿಕರ ತೆರಿಗೆ ಹಣವನ್ನು ದುಂದು ವೆಚ್ಛ ಮಾಡುತ್ತಿದೆ.
ಹೀಗಾಗಿ ಅನವಶ್ಯಕವಾದ 10 ಮಂದಿ ಅಪರ ಆಯುಕ್ತರುಗಳ ಹುದ್ದೆಗಳನ್ನು ಹಿಂಪಡೆದುಕೊಳ್ಳುವ ಬಗ್ಗೆ ಕೂಡಲೇ ಕಾನೂನು ರೀತ್ಯಾ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಆಗುತ್ತಿರುವ ಹತ್ತಾರು ಕೋಟಿ ರೂಪಾಯಿಗಳ ಅನಗತ್ಯ ವೆಚ್ಛಗಳನ್ನು ತಪ್ಪಿಸಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.
