ಬೆಂಗಳೂರು,ಜೂ.1- ಉದ್ಯಮಿಯೊಬ್ಬರ ಕಾರಿನ ಗಾಜು ಒಡೆದು ಹಾಡುಹಗಲೇ 11.5 ಲಕ್ಷ ರೂ. ದೋಚಿರುವ ಘಟನೆ ನೆಲಮಂಗಲ ಪಟ್ಟಣದಲ್ಲಿ ನಡೆದಿದೆ.ನೆಲಮಂಗಲದ ಇಸ್ಲಾಂಪುರದ ನಿವಾಸಿ ಅತೀಕ್ ಅಹಮದ್ ಅವರು ಬ್ಯಾಂಕ್ನಿಂದ ಹಣ ಡ್ರಾ ಮಾಡಿಕೊಂಡು ಕಾರಿನಲ್ಲಿ ಮನೆಗೆ ಹೋಗುವಾಗ ನೆಲಮಂಗಲ ಪಟ್ಟಣದ ಅಂಬೇಡ್ಕರ್ ಭವನದ ಬಳಿ ನಿನ್ನೆ ಮಧ್ಯಾಹ್ನ 1.45ರ ಸಮಯದಲ್ಲಿ ಈ ಘಟನೆ ನಡೆದಿದೆ.
ಅತೀಕ್ ಅಹಮದ್ ಅವರ ಸಹೋದರ ದಾಬಸ್ಪೇಟೆಯಲ್ಲಿ ಲಾಜೆಸ್ಟಿಕ್ ಕಂಪನಿ ನಡೆಸುತ್ತಿದ್ದು, ಸಹೋದರನಿಗೆ ಬ್ಯಾಂಕ್ನಿಂದ ಹಣ ಡ್ರಾ ಮಾಡಿಕೊಂಡು ಬರಲು ಸೂಚನೆ ನೀಡಿದ್ದರು. ಅದರಂತೆ ಅವರು ದಾಬಸ್ಪೇಟೆಯ ಬ್ಯಾಂಕ್ ವೊಂದರಲ್ಲಿ 11.5 ಲಕ್ಷ ರೂ.ಗಳನ್ನು ಡ್ರಾ ಮಾಡಿಕೊಂಡು ಕಾರಿನಲ್ಲಿಟ್ಟುಕೊಂಡು ಮನೆಗೆ ಹೋಗುತ್ತಿದ್ದರು.
ಅತೀಕ್ ಅಹಮದ್ ಅವರು ಮಿಕ್ಸಿ ರಿಪೇರಿ ಮಾಡಿಸಿಕೊಂಡು ಬರಲು ನೆಲಮಂಗಲದ ಅಂಬೇಡ್ಕರ್ ಭವನದ ಬಳಿ ಕಾರು ನಿಲ್ಲಿಸಿ ಹೋಗಿದ್ದ ವೇಳೆ ದುಷ್ಕರ್ಮಿಗಳು ಕಾರಿನ ಗಾಜು ಒಡೆದು ಹಣ ಅಪಹರಿಸಿ ಪರಾರಿಯಾಗಿದ್ದಾರೆ.
ಅವರು ವಾಪಸ್ ಕಾರಿನ ಬಳಿ ಬಂದು ನೋಡಿದಾಗ ಕೃತ್ಯ ನಡೆದಿರುವುದು ಕಂಡುಬಂದಿದೆ. ನಂತರ ಅವರು ನೆಲಮಂಗಲ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆ ರಸ್ತೆಗಳಲ್ಲಿನ ಸಿಸಿಟಿವಿ ಫುಟೇಜ್ಗಳನ್ನು ಪರಿಶೀಲಿಸಿ ಆರೋಪಿಗಳ ಬಂಧನಕ್ಕಾಗಿ ಶೋಧ ನಡೆಸುತ್ತಿದ್ದಾರೆ.