ಬೆಂಗಳೂರು,ಜೂ.10-ಅತೀ ವೇಗದಿಂದ ಮುನ್ನುಗ್ಗಿದ ಗೂಡ್ಸ್ ವಾಹನವೊಂದು ಎರಡು ಕಾರು, ಬೈಕ್ಗೆ ಡಿಕ್ಕಿ ಹೊಡೆದು ಸಂಭವಿಸಿದ ಸರಣಿ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಅಶೋಕನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹಳೇ ಗುಡ್ಡದಹಳ್ಳಿ ನಿವಾಸಿ ಅಂಜಲಿ(36) ಮೃತಪಟ್ಟ ಮಹಿಳೆ. ಇವರ ಪತಿ ವಿಜಯ ಕುಮಾರ್ (40) ಗಾಯಗೊಂಡಿದ್ದು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ನಿನ್ನ ಸಂಜೆ 6.30 ರ ಸುಮಾರಿನಲ್ಲಿ ಹನೀಜ್ ಎಂಬುವವರು ಕಾರನ್ನು ಚಾಲನೆ ಮಾಡಿಕೊಂಡು ಕಾಡುಗೋಡಿ ಕಡೆಗೆ ಹೋಗುವ ಸಲುವಾಗಿ ಎಂ.ಜಿ ರಸ್ತೆಯ ಕಾವೇರಿ ಎಂಪೋರಿಯಂ ಜಂಕ್ಷನ್ ಕಡೆಯಿಂದ ಬರುತ್ತಿದ್ದಾಗ, ಸಿಗ್ನಲ್ ಇದ್ದ ಕಾರಣ ಕಾರನ್ನು ಮೆಯೋಹಾಲ್ ಜಂಕ್ಷನ್ನಲ್ಲಿ ನಿಲ್ಲಿಸಿದ್ದಾರೆ.
ಅದೇ ಸಮಯಕ್ಕೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಹಿಂದಿನಿಂದ ಬಂದ ಗೂಡ್್ಸ ವಾಹನವೊಂದು ಜಂಕ್ಷನ್ನಲ್ಲಿ ನಿಂತಿದ್ದ ಇವರ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಈ ಕಾರು ಮುಂದೆ ನಿಂತಿದ್ದ ಕಾರಿಗೆ ಡಿಕ್ಕಿಯಾಗಿದೆ.
ಅಷ್ಟೆ ಅಲ್ಲದೆ ಗೂಡ್್ಸ ವಾಹನ ಮುನ್ನುಗ್ಗಿಕೊಂಡು ಹೋಗಿ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಾಗ ವಿಜಯಕುಮಾರ್ ಹಾಗೂ ಅಂಜಲಿ ದಂಪತಿ ಕೆಳಗೆ ಬಿದ್ದಾಗ ಅಂಜಲಿ ಮೇಲೆ ಗೂಡ್್ಸ ವಾಹನದ ಚಕ್ರ ಹರಿದು ನಂತರ ವಿದ್ಯುತ್ ಕಂಬಕ್ಕೆ ಅಪ್ಪಳಿಸಿ ನಿಂತಿದೆ.
ಅಂಜಲಿ ಅವರ ತಲೆ ಹಾಗೂ ಮುಖಕ್ಕೆ ಗಂಭೀರ ಗಾಯವಾಗಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.ಇವರ ಪತಿ ವಿಜಯಕುಮಾರ್ ಅವರ ಬಲಗೈ ಹಾಗೂ ಬಲಗಾಲಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತ ಸಂಭವಿಸುತ್ತಿದ್ದಂತೆ ಗೂಡ್್ಸ ವಾಹನದ ಚಾಲಕ ಲಾರಿ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.ಅಪಘಾತದಿಂದಾಗಿ ಎರಡು ಕಾರುಗಳು ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗೊಂಡಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುದ್ದಿ ತಿಳಿದು ಅಶೋಕನಗರ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.