Thursday, September 19, 2024
Homeರಾಜ್ಯಮುಡಾ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ, ಸಿಬಿಐ ತನಿಖೆ ಅಗತ್ಯವಿಲ್ಲ : ಸಿಎಂ

ಮುಡಾ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ, ಸಿಬಿಐ ತನಿಖೆ ಅಗತ್ಯವಿಲ್ಲ : ಸಿಎಂ

ಮೈಸೂರು,ಜು.10- ಮುಡಾ ಪ್ರಕರಣವನ್ನು ಸಿಬಿಐ ತನಿಖೆ ನಡೆಸುವ ಅಗತ್ಯವಿಲ್ಲ ಎಂದು ಬಿಜೆಪಿಯ ಬೇಡಿಕೆಯನ್ನು ತಳ್ಳಿ ಹಾಕಿರುವ ಸಿಎಂ ಸಿದ್ದರಾಮಯ್ಯ ರಾಜಕೀಯ ಕಾರಣಕ್ಕಾಗಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾದಿಂದ ತಮ ಪತ್ನಿಗೆ ಬದಲಿ ನಿವೇಶನ ನೀಡಿರುವುದು ಕಾನೂನುಬದ್ಧವಾಗಿದೆ. ಯಾವುದೇ ಅವ್ಯವಹಾರಗಳಾಗಿಲ್ಲ.

ಭೂಮಿ ಕಳೆದುಕೊಂಡಿರುವುದು ಒಂದು ಪ್ರಕರಣವಾದರೆ, ನಮ ಜಮೀನನ್ನು ಕಾನೂನುಬಾಹಿರವಾಗಿ ಮುಡಾ ಒತ್ತುವರಿ ಮಾಡಿಕೊಂಡಿದೆ. ಇದನ್ನು ಮುಡಾ ತನ್ನ ಸಮಿತಿ ಸಭೆಯಲ್ಲಿ ಒಪ್ಪಿಕೊಂಡಿದೆ ಎಂದರು.ನಮ ಜಮೀನಿಗೆ ಪರಿಹಾರ ಕೇಳಿದಾಗ ವಿಜಯನಗರದಲ್ಲಿ ಜಾಗ ಕೊಟ್ಟಿದ್ದಾರೆ. ನಾವು ಇಂತಹುದೇ ಜಾಗದಲ್ಲಿ ನೀಡಿ ಎಂದು ಕೇಳಿರಲಿಲ್ಲ. ಬಿಜೆಪಿಯವರು ಉದ್ದೇಶಪೂರ್ವಕವಾಗಿಯೇ ಇದರಲ್ಲಿ ತಪ್ಪು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮುಡಾದಿಂದ ನಿಯಮಬಾಹಿರವಾಗಿ ನಿವೇಶನ ಹಂಚಿರುವುದನ್ನು ಇಬ್ಬರು ಐಎಎಸ್‌‍ ಅಧಿಕಾರಿಗಳಿಂದ ತನಿಖೆ ನಡೆಸಲಾಗುತ್ತಿದೆ. ಅಕ್ರಮ ನಡೆದಿರುವುದು ವರದಿಯಲ್ಲಿ ಸಾಬೀತಾ ದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ. ಬಿಜೆಪಿಯವರು ಈಗಾಗಲೇ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನಮ ಮನೆಗೂ ಮುತ್ತಿಗೆ ಹಾಕಿದ್ದಾರೆ. ಈಗ ಮೈಸೂರಿನಲ್ಲೂ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ರಾಜಕೀಯ ಕಾರಣಕ್ಕಾಗಿ ಅವರು ಏನಾದರೂ ಮಾಡಲಿ. ವಿಧಾನಸಭೆಯಲ್ಲಿ ವಿಚಾರ ಪ್ರಸ್ತಾಪವಾದರೆ ಉತ್ತರ ನೀಡಲು ನಮ ಸರ್ಕಾರ ಸಿದ್ಧವಿದೆ ಎಂದರು.

ಮುಡಾದಲ್ಲಿ ಜನಪ್ರತಿನಿಧಿಗಳ ಸಮಿತಿಯನ್ನು ರದ್ದು ಮಾಡಬೇಕು ಎಂಬ ನಿಟ್ಟಿನಲ್ಲಿ ಕಾನೂನು ರೂಪಿಸುವ ಕುರಿತು ಚರ್ಚೆಗಳಾಗುತ್ತಿವೆ. ಈ ಹಿಂದೆ ರಾಮಣ್ಣ ಅವರು ಅಧ್ಯಕ್ಷರಾಗಿದ್ದಾಗಲೂ ಇದೇ ರೀತಿಯ ಚರ್ಚೆಗಳು ನಡೆದಿದ್ದವು. ಜನಪ್ರತಿನಿಧಿ ಗಳ ಅಭಿಪ್ರಾಯ ಪಡೆದು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಬಿಜೆಪಿಯವರು ಒತ್ತಾಯಿಸುತ್ತಿರುವುದು ಅರ್ಥಹೀನ. ಈ ಹಿಂದೆ ನಮ ಸರ್ಕಾರ ಹಲವು ಪ್ರಕರಣಗಳನ್ನು ಸಿಬಿಐಗೆ ನೀಡಿದೆ. ಬಿಜೆಪಿಯವರು ಒಂದು ಪ್ರಕರಣವನ್ನೂ ನೀಡಿಲ್ಲ. ಯಾವುದೇ ಪ್ರಕರಣವಾದರೂ ತನಿಖೆ ನಡೆಸಲು ನಮ ಪೊಲೀಸರು ಸಮರ್ಥರಿದ್ದಾರೆ. ಸಿಬಿಐನ ಮಹಾನಿರ್ದೇಶಕರಾಗಿರುವ ಪ್ರವೀಣ್‌ ಸೂದ್‌ ಅವರು ರಾಜ್ಯದಲ್ಲಿ ಪೊಲೀಸ್‌‍ ಮಹಾನಿರ್ದೇಶಕರಾಗಿದ್ದರು. ಅಲ್ಲಿಯೂ ಕೂಡ ಪೊಲೀಸ್‌‍ ಅಧಿಕಾರಿಗಳೇ ಇದ್ದಾರೆ ಎಂದರು.

ಸಿಬಿಐ ಅನ್ನು ಚೋರ್‌ ಬಚಾವ್‌ ಸಂಸ್ಥೆ ಎನ್ನುತ್ತಿದ್ದ ಬಿಜೆಪಿಯವರು ಈಗ ಪ್ರತಿಯೊಂದನ್ನೂ ಸಿಬಿಐಗೆ ಕೊಡಿ ಎಂದು ಕೇಳುತ್ತಿದ್ದಾರೆ. ನಮಗೆ ನಮ ಪೊಲೀಸರ ಸಾಮರ್ಥ್ಯದ ಮೇಲೆ ನಂಬಿಕೆ ಇದೆ ಎಂದು ಹೇಳಿದರು.ರಾಜ್ಯದಲ್ಲಿ ಈಗಾಗಲೇ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಲಾಗಿದೆ. ಜಿಲ್ಲಾಮಟ್ಟದಲ್ಲಿ ಪ್ರಗತಿ ಪರಿಶೀಲನೆ ನಡೆಸಲು ಜಿಲ್ಲಾ ಸಚಿವರುಗಳಿಗೆ ಸೂಚನೆ ನೀಡಲಾಗಿದೆ ಎಂದರು.

ರಾಮನಗರದ ಜಿಲ್ಲೆಯ ಎಲ್ಲಾ ಮುಖಂಡರೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಾಯಕತ್ವದಲ್ಲಿ ನಿನ್ನೆ ತಮನ್ನು ಭೇಟಿ ಮಾಡಿ, ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ಮನವಿ ಮಾಡಿದ್ದಾರೆ. ಸಚಿವ ಸಂಪುಟದಲ್ಲಿ ಈ ಕುರಿತು ಚರ್ಚೆ ನಡೆಸುವುದಾಗಿ ಭರವಸೆ ನೀಡಿದ್ದೇನೆ ಎಂದು ಹೇಳಿದರು.

ಕುಮಾರಸ್ವಾಮಿಯವರಿಗೆ ಮುಖ್ಯಮಂತ್ರಿಯಾಗಲು ಜನ ಆಶೀರ್ವಾದ ಮಾಡಿಲ್ಲ. ಚುನಾವಣೆಯಲ್ಲಿ ಅವರಿಗೆ ಬೆಂಬಲ ಸಿಕ್ಕಿಲ್ಲ. ನಾವು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ನಾಮಕರಣ ಮಾಡಿದಾಗ ಅದನ್ನು ಕಿತ್ತುಹಾಕುತ್ತೇವೆ ಎಂದು ಕುಮಾರಸ್ವಾಮಿ ಹೇಳಿರುವುದು ಭ್ರಮೆ. ಅವರು ಅಧಿಕಾರಕ್ಕೆ ಬರುವುದಿಲ್ಲ ಎಂದು ಲೇವಡಿ ಮಾಡಿದರು.
ಮಾಜಿ ಸಚಿವ ಬಿ.ನಾಗೇಂದ್ರಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆದಿರುವುದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯನವರು, ಇದರಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಕಾನೂನು ಪ್ರಕಾರ ಅವರ ಕೆಲಸವನ್ನು ಅವರು ಮಾಡಲಿ ಎಂದು ಹೇಳಿದರು.

ಕಳೆದ ತಿಂಗಳು ದೆಹಲಿಗೆ ಭೇಟಿ ನೀಡಿದ ವೇಳೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರ್ಕಾರದ ಸಚಿವರು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಿ ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ಸಹಕಾರ ನೀಡುವಂತೆ ಮನವಿ ನೀಡಿದ್ದೇವೆ. ಪ್ರಧಾನಿಯವರು ಅಧಿಕಾರಿಗಳ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು ಹೇಳಿದರು.

ನಗರ ಹಾಗೂ ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಹಿಂದುಳಿದ ವರ್ಗಗಳ ಮೀಸಲಾತಿಗೆ ಸಂಬಂಧಪಟ್ಟಂತೆ ನ್ಯಾಯಾಲಯ ನೀಡುವ ನಿರ್ದೇಶನಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದರು.ಬಿಬಿಎಂಪಿಯ ಮೀಸಲಾತಿ ವಿಚಾರವಾಗಿ ಸುಪ್ರೀಂಕೋರ್ಟ್‌ ಹಂತದಲ್ಲಿದೆ. ತಾ.ಪಂ., ಜಿ.ಪಂ. ಮೀಸಲಾತಿ ಹೈಕೋರ್ಟ್‌ ವಿಚಾರಣೆಯಲ್ಲಿದೆ. ಅಲ್ಲಿನ ನಿರ್ದೇಶನಗಳ ನಂತರ ಚುನಾವಣೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

RELATED ARTICLES

Latest News