Thursday, September 19, 2024
Homeರಾಜಕೀಯ | Politicsಜೆಡಿಎಸ್ "ಬ್ಲಾಕ್‌ಮೇಲ್‌"ಗೆ ಬಗ್ಗದೆ ಪಾದಯಾತ್ರೆ ನಡೆಸುವಂತೆ ಬಿಜೆಪಿ ವರಿಷ್ಠರ ಸೂಚನೆ

ಜೆಡಿಎಸ್ “ಬ್ಲಾಕ್‌ಮೇಲ್‌”ಗೆ ಬಗ್ಗದೆ ಪಾದಯಾತ್ರೆ ನಡೆಸುವಂತೆ ಬಿಜೆಪಿ ವರಿಷ್ಠರ ಸೂಚನೆ

ಬೆಂಗಳೂರು,ಆ.1- ಜೆಡಿಎಸ್ನ ಯಾವುದೇ ಬ್ಲಾಕ್ಮೇಲ್ಗೆ ಬಗ್ಗದೇ ಈಗಾಗಲೇ ನಿಗದಿ ಯಾಗಿರುವಂತೆ ಬೆಂಗಳೂ ರಿನಿಂದ ಮೈಸೂರುವರೆಗೆ ನಡೆಸಲು ಉದ್ದೇಶಿಸಿರುವ ಪಾದಯಾತ್ರೆಯನ್ನು ಮುಂದುವರೆಸಬೇಕೆಂದು ಕೇಂದ್ರ ಬಿಜೆಪಿ ವರಿಷ್ಠರು ರಾಜ್ಯಘಟಕಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಕೇಂದ್ರ ಸಚಿವರೂ ಆಗಿರುವ ಜೆಡಿಎಸ್ನ ಎಚ್.ಡಿ.ಕುಮಾರಸ್ವಾಮಿಯವರ ಹೇಳಿಕೆಗೆ ತಲೆಕೆಡಿಸಿಕೊಳ್ಳದೆ.

ಈಗಾಗಲೇ ತೀರ್ಮಾನಿಸಿರುವಂತೆ ಆ.3ರಿಂದ (ಶನಿವಾರ) ಮೈಸೂರುವರೆಗೆ ಪಾದಯಾತ್ರೆಯನ್ನು ನಡೆಸಿ ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭ್ರಷ್ಟಾಚಾರವನ್ನು ಜನರಿಗೆ ಮನವರಿಕೆ ಮಾಡುವಂತೆ ಸೂಚನೆ ಕೊಡಲಾಗಿದೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿರುವ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಪಾದಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಬೇಕೆಂದು ತಾಕೀತು ಮಾಡಿದ್ದಾರೆ.

ಸಂಸತ್ ಭವನದ ಶ್ರೀ HD ಕುಮಾರಸ್ವಾಮಿ ಅವರ ಕಚೇರಿಯಲ್ಲಿ ಭೇಟಿ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಷಿ, ಶ್ರೀ ರಾಧಮೋಹನ್ ದಾಸ್, ಶ್ರೀ BY ವಿಜಯೇಂದ್ರ, ಶ್ರೀ ಬಂಡೆಪ್ಪ ಕಾಶೆಂಪೂರ್, ಶ್ರೀ ಮಲ್ಲೇಶ್ ಬಾಬು ಸಭೆ ಪಾದಯಾತ್ರೆ ಗ್ಗೆ ಮಹತ್ವದ ಚರ್ಚೆ

ಜೆಡಿಎಸ್ ಪಾದಯಾತ್ರೆಗೆ ಏಕೆ ವಿರೋಧಪಡಿಸುತ್ತದೆ ಎಂಬುದು ನಮಗೆ ಗೊತ್ತಿದೆ. ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಅವರು ಕೈಜೋಡಿಸಿದರೆ ಜೋಡಿಸಲಿ, ಇಲ್ಲದಿದ್ದರೆ ಬಿಡಲಿ, ಅವರ ನೈತಿಕ ಬೆಂಬಲವನ್ನೂ ನಿರೀಕ್ಷಿಸದೇ ಬಿಜೆಪಿ ವತಿಯಿಂದಲೇ ಪಾದಯಾತ್ರೆಯನ್ನು ಆಯೋಜಿಸಬೇಕೆಂದು ಅಮಿತ್ ಶಾ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಒಂದು ಬಾರಿ ನಾವು ಜೆಡಿಎಸ್ನ ಒತ್ತಡಕ್ಕೆ ಮಣಿದು ಬಗ್ಗಿದರೆ ಭವಿಷ್ಯದಲ್ಲಿ ಇದೇ ತಂತ್ರವನ್ನು ಅನುಸರಿಸುತ್ತಾರೆ. ಪಾದಯಾತ್ರೆ ಯಶಸ್ವಿಯಾದರೆ ಅದು ನೇರವಾಗಿ ಜೆಡಿಎಸ್ನ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ ಎಂಬುದು ಕುಮಾರಸ್ವಾಮಿಯವರ ಆತಂಕ.

ನಾವು ಒಂದು ರಾಷ್ಟ್ರೀಯ ಪಕ್ಷದವರಾಗಿ ನಮ ಗುರಿ ಏನಿದೆಯೋ ಅದನ್ನು ತಲುಪೋಣ. ಇಲ್ಲಿ ಪ್ರೀತಂಗೌಡ ಅವರ ಹೆಸರನ್ನು ಅನಗತ್ಯವಾಗಿ ಕುಮಾರಸ್ವಾಮಿ ಪ್ರಸ್ತಾಪಿಸಿದ್ದಾರೆ. ಇದರ ಮೂಲ ಕಾರಣ ಏನೆಂಬುದನ್ನು ನಾನು ಅರಿತಿದ್ದೇನೆ. ನಾಳೆ ಅವರನ್ನು ಪಕ್ಷದಿಂದ ಹೊರಹಾಕಿ ಎಂದು ಕುಮಾರಸ್ವಾಮಿ ಹೇಳಿದರೆ ಹಾಗೆ ಮಾಡಲು ಸಾಧ್ಯವೇ ಎಂದು ಅಮಿತ್ ಶಾ ಅವರು ವಿಜಯೇಂದ್ರರಿಗೆ ಪ್ರಶ್ನಿಸಿದ್ದಾರೆ.

ಸದ್ಯದಲ್ಲಿ ನಡೆಯಲಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕ್ಷೇತ್ರವನ್ನು ಬಿಜೆಪಿಯವರಿಗೆ ಬಿಟ್ಟುಕೊಡಲು ಮೀನಾಮೇಷ ಎಣಿಸುತ್ತಿರುವ ಕುಮಾರಸ್ವಾಮಿಯವರು ಪ್ರೀತಂಗೌಡ ಅವರ ಹೆಸರನ್ನು ಎಳೆದುತಂದಿದ್ದಾರೆ. ಅವರ ರಾಜಕೀಯ ಮರ್ಮವನ್ನು ಅರ್ಥ ಮಾಡಿಕೊಳ್ಳದಷ್ಟು ದಡ್ಡರು ಬಿಜೆಪಿಯಲ್ಲಿಲ್ಲ. ಅಷ್ಟಕ್ಕೂ ನಾವೇನೂ ಪಾದಯಾತ್ರೆಗೆ ಬೆಂಬಲ ಕೊಡಬೇಕೆಂದು ಜೆಡಿಎಸ್ನವರಿಂದ ನಿರೀಕ್ಷೆ ಮಾಡಿಲ್ಲ. ಕೊಡುವುದು, ಬಿಡುವುದು ಅವರಿಗೆ ಬಿಟ್ಟಿದ್ದು. ಪಾದಯಾತ್ರೆ ನಡೆಸಿಯೇ ತೀರಬೇಕೆಂದು ಹೇಳಿದ್ದಾರೆ.

ಮುಡಾ ಮತ್ತು ಮಹರ್ಷಿ ವಾಲೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣವು ಕಾಂಗ್ರೆಸ್ ಸರ್ಕಾರಕ್ಕೆ ಸಾಕಷ್ಟು ಹಾನಿಯುಂಟು ಮಾಡಿದೆ. ಇದನ್ನು ನಾವು ರಾಜಕೀಯವಾಗಿ ಬಳಸಿಕೊಳ್ಳಬೇಕು. ಸಿದ್ದರಾಮಯ್ಯ ಸರ್ಕಾರದ ಒಂದೊಂದು ಹಗರಣಗಳನ್ನು ಜನತೆಯ ಮುಂದೆ ಇಡಿ ಎಂದು ಅಮಿತ್ ಶಾ ಸೂಚಿಸಿರುವುದಾಗಿ ತಿಳಿದುಬಂದಿದೆ.

ಪಕ್ಷದ ವರಿಷ್ಠರಿಂದ ಸೂಚನೆ ಸಿಕ್ಕ ಬೆನ್ನಲ್ಲೇ ವಿಜಯೇಂದ್ರ ಪಾದಯಾತ್ರೆ ನಡೆಸಲು ರೂಪುರೇಷೆಗಳನ್ನು ಸಿದ್ಧಪಡಿಸಿದ್ದಾರೆ.ಸಮಾರೋಪ ಸಮಾರಂಭಕ್ಕೆ ಜೆ.ಪಿ.ನಡ್ಡಾ, ಅಮಿತ್ ಶಾ ಆಗಮಿಸಲಿದ್ದು, ಮೈಸೂರಿನ ಹೊರವಲಯದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು ಸೇರಿಸಲು ಉದ್ದೇಶಿಲಾಗಿದೆ.

RELATED ARTICLES

Latest News