ಬೆಂಗಳೂರು, ಫೆ.11- ಸ್ವ ಪಕ್ಷೀಯರ ವಿರುದ್ಧವೇ ಭಿನ್ನಮತ ಸಾರಿ ಕೇಂದ್ರ ಚುನಾವಣಾ ಶಿಸ್ತು ಸಮಿತಿಯಿಂದ ಷೋಕಾಸ್ ನೋಟೀಸ್ ಪಡೆದಿರುವ ಭಿನ್ನಮತೀಯ ನಾಯಕ ಹಾಗೂ ಬಿಜಾಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಪಕ್ಷದಿಂದ ಅಮಾನತು ಮಾಡುವ ಸಾಧ್ಯತೆ ಇದೆ.
ಷೋಕಾಸ್ ನೋಟೀಸ್ಗೆ ಮೂರು ದಿನದೊಳಗೆ ಉತ್ತರಿಸುವಂತೆ ಯತ್ನಾಳ್ಗೆ ಕೇಂದ್ರ ಚುನಾವಣಾ ಶಿಸ್ತು ಸಮಿತಿ ಸೂಚನೆ ನೀಡಿದೆ. ಒಂದು ವೇಳೆ ಅವರು ನೀಡುವ ಉತ್ತರ ತೃಪ್ತಿಕರವಾಗದಿದ್ದರೆ, ಅವರನ್ನು ಪಕ್ಷದಿಂದ ಅಮಾನತುಗೊಳಿಸುವ ಸಂಭವವಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಉಚ್ಚಾಟನೆಯಂತಹ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡರೆ, ಬಿಜೆಪಿಗೆ ಭದ್ರ ಬುನಾದಿಯಾಗಿರುವ ಪಂಚಮಸಾಲಿ ಸಮುದಾಯವು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಿರುಗಿ ಬೀಳಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಯತ್ನಾಳ್ ಬಾಯಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಮಾನತುಗೊಳಿಸುವ ಅಸ್ತ್ರವನ್ನು ಬಳಸಲು ಶಿಸ್ತು ಸಮಿತಿ ಮುಂದಾಗಿದೆ.
ಈ ಹಿಂದೆಯೂ ಯತ್ನಾಳ್ಗೆ ಶಿಸ್ತು ಸಮಿತಿ ನೋಟೀಸ್ ನೀಡಿತ್ತು. ಆಗ ಅವರು ನೀಡಿದ್ದ ಉತ್ತರ ತೃಪ್ತಿಕರವಾಗಿಲ್ಲ ಎಂದು ಸಮಿತಿ ಆಕ್ಷೇಪ ವ್ಯಕ್ತಪಡಿಸಿತ್ತು. ತಮ ನಡವಳಿಕೆಯನ್ನು ತಿದ್ದುಕೊಳ್ಳುವುದಾಗಿ ಹೇಳಿದ್ದ ಯತ್ನಾಳ್, ಎಂದಿನಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬದ ವಿರುದ್ಧ ನಾಲಿಗೆ ಹರಿಬಿಟ್ಟಿದ್ದರು.
ಇದೀಗ ಯತ್ನಾಳ್ ನೋಟೀಸ್ಗೆ ಯಾವ ಉತ್ತರ ನೀಡಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ. ಎಂದಿನಂತೆ ಅವರು ಅದೇ ವಿಜಯೇಂದ್ರ, ಯಡಿಯೂರಪ್ಪ, ಕುಟುಂಬ ರಾಜಕಾರಣ, ಹೊಂದಾಣಿಕೆ ಮತ್ತಿತರ ಕ್ಷಣಿಕ ಕಾರಣಗಳನ್ನು ನೀಡಿದರೆ, ಶಿಸ್ತು ಸಮಿತಿ ಸಹಿಸುವುದಿಲ್ಲ. ಬದಲಾಗಿ ಮುಲಾಜಿಲ್ಲದೆ, ಶಿಸ್ತುಕ್ರಮ ಕೈಗೊಳ್ಳಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಷೋಕಾಸ್ ನೋಟಿಸ್ಗೆ ಯತ್ನಾಳ್ ಉತ್ತರವನ್ನು ಸಿದ್ಧಪಡಿಸಿಕೊಂಡಿದ್ದರಾದರೂ, ಕಳೆದ ಬಾರಿಯಂತೆ ನೀವು ನೀಡಿದ ಉತ್ತರವನ್ನೇ ನೀಡಬೇಡಿ. ಬದಲಿಗೆ ಸರಿಯಾದ ಸಮರ್ಥನೆಯನ್ನು ನೀಡಬೇಕು. ಇಲ್ಲದಿದ್ದರೆ ನಿಮ ವರ್ತನೆಯನ್ನು ಅಶಿಸ್ತು ಎಂದು ಪರಿಗಣಿಸಲಾಗುತ್ತದೆ ಎಂದು ನೋಟೀಸ್ನಲ್ಲಿ ಶಿಸ್ತು ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯ ಓಂ ಪಾಠಕ್ ಎಚ್ಚರಿಕೆ ಕೊಟ್ಟಿದ್ದಾರೆ.