ಬೆಂಗಳೂರು, ಜೂ.2-ಮದುವೆ ಹೆಣ್ಣಿನ ಕೊಠಡಿಯಿಂದ ನಗದು ಸೇರಿದಂತೆ 25 ಲಕ್ಷ ರೂ.ಗೂ ಹೆಚ್ಚು ಬೆಲೆ ಬಾಳುವ ಚಿನ್ನಾಭರಣಗಳು ಹಾಗೂ ಉಡುಗೊರೆಗಳನ್ನು ಕಳ್ಳತನ ಮಾಡಿರುವ ಘಟನೆ ನಗರದ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ನಡೆದಿದೆ.
ನಗರದ ಗವಿಪುರ ಬಡಾವಣೆಯ ನಿವಾಸಿ, ಅಭಿಮಾನಿ ಸಂಘದ ಕಾರ್ಯದರ್ಶಿ ಎಲ್. ಶಿವಶಂಕರ್ ಅವರು ಈ ಬಗ್ಗೆ ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶಿವಶಂಕರ್ ಅವರು ತಮ ಮಗಳು ದಿವ್ಯಾ ಅವರ ಮದುವೆಗಾಗಿ ರಾಜಾಜಿನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿನ ಸಪ್ತಪದಿ ಕಲ್ಯಾಣ ಮಂಟಪವನ್ನು ಎರಡು ದಿನ ಬುಕ್ ಮಾಡಿದ್ದರು.
ಕಳೆದ ಮೇ 29ರ ಸಂಜೆ ನಡೆದ ಆರತಕ್ಷತೆಗೆ ಅನೇಕ ಗಣ್ಯರು ಆಗಮಿಸಿ ಮಧು-ವರರನ್ನು ಆಶೀರ್ವಧಿಸಿ ಉಡುಗೊರೆಗಳನ್ನು ನೀಡಿದ್ದರು. ಆರತಕ್ಷತೆ ಮುಗಿದ ನಂತರ ತಡ ರಾತ್ರಿ ಮಧು ಮಗಳು ತನ್ನ ಕೊಠಡಿಯಲ್ಲಿ ನಗದು,ಚಿನ್ನದ ಆಭರಣಗಳು ಹಾಗೂ ಬೆಲೆ ಬಾಳುವ ಉಡುಗೊರೆಗಳನ್ನು ಸೂಟ್ಕೇಸ್ ಹಾಗೂ ಬ್ಯಾಗ್ಗಳಲ್ಲಿ ತುಂಬಿ ಭದ್ರಪಡಿಸಿ ಮಲಗಿದ್ದರು.ಮಾರನೇ ದಿನ ಮೇ 30 ರಂದು ಮುಹೂರ್ತ ಇದ್ದುದ್ದರಿಂದ ಮುಂಜಾನೆಯೇ ಎದ್ದು ರೆಡಿಯಾಗಿ ಕೊಠಡಿಗೆ ಬೀಗ ಹಾಕಿ ಹೋಗಿದ್ದರು.
ಮುಹೂರ್ತ ನಡೆಯುತ್ತಿದ್ದ ಸಂದರ್ಭದಲ್ಲಿ ಹೆಣ್ಣಿನ ಕೊಠಡಿಗೆ ಹಾಕಿದ್ದ ಬೀಗವನ್ನು ಕಳ್ಳ ನಕಲಿ ಕೀಯಿಂದ ತೆಗೆದು ಒಳ ಹೋಗಿ 3 ಲಕ್ಷಕ್ಕೂ ಹೆಚ್ಚು ನಗದು ಹಾಗೂ 4 ಗ್ರಾಂ ತೂಕದ ಎರಡು ಚಿನ್ನದ ಉಂಗುರಗಳು,120 ಗ್ರಾಂ ತೂಕದ ಎರಡು ಚಿನ್ನದ ಲಾಂಗ್ ಚೈನುಗಳು, 20 ಗ್ರಾಂ ತೂಕದ ಒಂದು ಜೊತೆ ಚಿನ್ನದ ಕಿವಿಯೋಲೆ, 55 ಗ್ರಾಂ ತೂಕದ ಎರಡು ಚಿಕ್ಕ ಚಿಕ್ಕ ಚೈನುಗಳು ಹಾಗೂ ಬೆಲೆ ಬಾಳುವ ಉಡುಗೊರೆಗಳು ಮತ್ತು ಇನ್ನಿತರ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾನೆ.
ವಧು ಮುಹೋರ್ತ ಮುಗಿಸಿ,ಊಟ ಮಾಡಿ ಮಧ್ಯಾಹ್ನ ಸುಮಾರು ಎರಡು ಗಂಟೆಗೆ ಕೊಠಡಿಗೆ ಬಂದು ನೋಡಿದಾಗ ಹಣ,ಆಭರಣಗಳು ಹಾಗೂ ಬೆಲೆ ಬಾಳುವ ಉಡುಗೊರೆಗಳು ಕಳ್ಳತನವಾಗಿರುವುದು ಕಂಡು ಬಂದಿದೆ. ತಕ್ಷಣ ಅವರು ತಂದೆ ಶಿವಶಂಕರ್ ಅವರಿಗೆ ಈ ವಿಷಯ ತಿಳಿಸಿದ್ದಾರೆ.
ಸುದ್ದಿ ತಿಳಿದು ಅವರು ಧಾವಿಸಿ ಬಂದು ಕೊಠಡಿಯನ್ನು ಪರಿಶೀಲಿಸಿ ನಂತರ ಕಲ್ಯಾಣ ಮಂಟಪದ ಸಿಸಿ ಕ್ಯಾಮರ ನೋಡಿ ಪೊಲೀಸರಿಗೆ ದೂರು ನೀಡಿದ್ದಾರೆ.ನಂತರ ಮಾಗಡಿ ರಸ್ತೆ ಠಾಣೆ ಪೊಲೀಸರು ಕಲ್ಯಾಣ ಮಂಟಪಕ್ಕೆ ಭೇಟಿ ನೀಡಿ ಅಲ್ಲಿನ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿ ಮಾಹಿತಿ ಪಡೆದುಕೊಂಡು ಪರಾರಿಯಾಗಿರುವ ಕಳ್ಳನ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ.
ಬಹುತೇಕ ಕಲ್ಯಾಣ ಮಂಟಪಗಳಲ್ಲಿ ವಧು-ವರ ಹಾಗೂ ಅತಿಥಿಗಳು ಉಳಿದುಕೊಳ್ಳುವ ಕೊಠಡಿಗಳಿಗೆ ಮದುವೆ ಕಾರ್ಯ ಮಾಡುವವರೇ ತಾವೇ ತಂದಿರುವ ಬೀಗಗಳನ್ನು ಹಾಕಿಕೊಳ್ಳುವುದು ವಾಡಿಕೆ. ಆದರೆ ಈ ಕಲ್ಯಾಣ ಮಂಟಪದಲ್ಲಿ ಭಿನ್ನ. ಕೊಠಡಿಗಳಿಗೆ ಅವರದೇ ಆದ ಬೀಗಗಳನ್ನು ಹಾಕಬೇಕಂತೆ.
ವಧು-ವರ ಕೊಠಡಿಗಳ ಬಳಿ ಸಿಸಿ ಕ್ಯಾಮರಾಗಳು ಇಲ್ಲದಿರುವುದೇ ಹಾಗೂ ಕಲ್ಯಾಣ ಮಂಟಪದ ಮ್ಯಾನೇಜರ್ ಅವರು ಉಸ್ತುವಾರಿಯನ್ನು ಸರಿಯಾಗಿ ನೋಡಿಕೊಳ್ಳದೇ ಬೇಜವಾಬ್ದಾರಿತನ ತೋರಿರುವುದೇ ಈ ಕಳ್ಳತನಕ್ಕೆ ಕಾರಣ ಎಂಬುವುದು ಹೆಣ್ಣಿನ ಕಡೆಯವರ ಆರೋಪವಾಗಿದೆ.