Friday, September 20, 2024
Homeರಾಜ್ಯರಾಜ್ಯಪಾಲರಿಗೆ ಬುಲೆಟ್‌ ಪ್ರೂಫ್‌ ಕಾರಿನ ಜೊತೆ ಹೆಚ್ಚಿನ ಭದ್ರತೆ

ರಾಜ್ಯಪಾಲರಿಗೆ ಬುಲೆಟ್‌ ಪ್ರೂಫ್‌ ಕಾರಿನ ಜೊತೆ ಹೆಚ್ಚಿನ ಭದ್ರತೆ

ಬೆಂಗಳೂರು,ಆ.21- ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಮೇಲೆ ಕೆಲವು ಸಮಾಜಘಾತುಕ ಶಕ್ತಿಗಳು ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ತಕ್ಷಣವೇ ಅವರಿಗೆ ಬುಲೆಟ್‌ ಪ್ರೂಫ್‌(ಗುಂಡು ನಿರೋಧಕ) ಕಾರು ಒದಗಿಸುವಂತೆ ಕೇಂದ್ರ ಗುಪ್ತಚರ ವಿಭಾಗ ರಾಜ್ಯ ಗೃಹ ಇಲಾಖೆಗೆ ಸೂಚಿಸಿದೆ.ಈ ಹಿನ್ನೆಲೆಯಲ್ಲಿ ಥಾವರ್‌ಚಂದ್‌ ಗೆಹ್ಲೋಟ್‌ ಅವರಿಗೆ ಇದೀಗ ಬುಲೆಟ್‌ಪ್ರೂಫ್‌ ಕಾರು ಒದಗಿಸಲಾಗಿದ್ದು, ಹೆಚ್ಚಿನ ಭದ್ರತೆಯನ್ನು ಸಹ ತತ್‌ಕ್ಷಣದಿಂದಲೇ ಜಾರಿ ಬರುವಂತೆ ನೀಡಲಾಗಿದೆ.

ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿಗೆ ಕೇಂದ್ರ ಗುಪ್ತಚರ ವಿಭಾಗದ ಮುಖ್ಯಸ್ಥರು ಪತ್ರ ಬರೆದಿದ್ದು, ರಾಜ್ಯಪಾಲರ ಮೇಲೆ ಕೆಲವು ಕಾರಣಗಳನ್ನಿಟ್ಟುಕೊಂಡು ಸಮಾಜಘಾತುಕ ಶಕ್ತಿಗಳು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ಕೊಟ್ಟಿದೆ.

ಆ. 20ರಂದು ಅವರು ಇಂದೋರ್‌ಗೆ ಕಾರ್ಯನಿಮಿತ್ತ ಹೋಗಿದ್ದ ಅವರು, ಆ. 21ರಂದು ಅಲ್ಲಿಂದ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಅಲ್ಲಿಂದ ಬರುತ್ತಲೇ ಅವರು ಬುಲೆಟ್ ಪ್ರೂಫ್‌ ಕಾರನ್ನು ತರಿಸಿಕೊಂಡು ಅದರಲ್ಲಿ ಪ್ರಯಾಣ ಬೆಳೆಸಿದ್ದಾರೆ. ಕರ್ನಾಟಕ ಪೊಲೀಸ್‌‍ ನ ಗುಪ್ತಚರ ಇಲಾಖೆಯಿಂದ ಅವರಿಗೆ ಬುಲೆಟ್‌ ಕಾರನ್ನು ನೀಡಲಾಗಿದೆ.

ಸಾಮಾನ್ಯವಾಗಿ ರಾಜ್ಯಪಾಲರಿಗೆ ಬುಲೆಟ್‌ ಪ್ರೂಫ್ ಕಾರಿನಲ್ಲಿ ಓಡಾಡಲು ಅವಕಾಶವಿರುತ್ತದೆ. ಅದನ್ನು ಗುಪ್ತಚರ ಇಲಾಖೆಯಿಂದ ಯಾವಾಗ ಬೇಕಾದರೂ ತರಿಸಿಕೊಂಡು ಅವರು ಅದರಲ್ಲಿ ಓಡಾಡಬಹುದು. ಆದರೆ, ಗೆಹ್ಲೋಟ್‌ ಅವರು, ಕರ್ನಾಟಕಕ್ಕೆ ರಾಜ್ಯಪಾಲರಾಗಿ ಬಂದಾಗಿನಿಂದ ಸಾಮಾನ್ಯ ಕಾರಿನಲ್ಲೇ ಓಡಾಡುತ್ತಿದ್ದರು. ಆದರೀಗ, ಆ. 21ರಿಂದ ಬುಲೆಟ್‌ ಪೂ್‌ ಕಾರಿನಲ್ಲಿ ಓಡಾಡಲು ಆರಂಭಿಸಿದ್ದಾರೆ. ಇದು ಈಗ ಕುತೂಹಲಕ್ಕೆ ಕಾರಣವಾಗಿದೆ.

ಮುಡಾ ಹಗರಣದಡಿ ಸಿದ್ದರಾಮಯ್ಯನವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆ. 16ರಂದು ಆದೇಶವನ್ನು ರಾಜ್ಯಪಾಲರು ಹೊರಡಿಸಿದರು. ಅಂದಿನಿಂದಲೇ ರಾಜ್ಯಾದ್ಯಂತ ಕಾಂಗ್ರೆಸ್‌‍ ಕಾರ್ಯಕರ್ತರು, ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಸೋಮವಾರದಂದು (ಆ. 19) ಕರ್ನಾಟಕ ಹೈಕೋರ್ಟ್‌ನಲ್ಲಿ ಸಿದ್ದರಾಮಯ್ಯನವರು ರಾಜ್ಯಪಾಲರ ಆದೇಶಕ್ಕೆ ಪ್ರತಿಯಾಗಿ ಎರಡು ರಿಟ್‌ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅಂದಿನಿಂದ ಅವರ ಕಾನೂನು ಹೋರಾಟ ಆರಂಭವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್‌‍ ಕಾರ್ಯಕರ್ತರು ಮತ್ತಷ್ಟು ಉಗ್ರ ಸ್ವರೂಪದಲ್ಲಿ ಪ್ರತಿಭಟನೆ ನಡೆಸಿದ್ದು, ಅದಾಗಿ ಎರಡು ದಿನವಾದರೂ ಪ್ರತಿಭಟನೆಗಳು ನಿಂತಿಲ್ಲ.

ಆ ಹಿನ್ನೆಲೆಯಲ್ಲಿ ರಾಜ್ಯಪಾಲರು ಗಾಬರಿಯಾಗಿದ್ದಾರೆಯೇ ಅಥವಾ ಅವರಿಗೆ ಯಾರಿಂದಾದರೂ ಪ್ರಾಣಭೀತಿ ಆವರಿಸಿದೆಯೇ ಎಂಬುದಿನ್ನೂ ಖಚಿತವಾಗಿಲ್ಲ. ಆದರೂ, ಆ. 21ರವರೆಗೆ ಸಾಮಾನ್ಯ ಕಾರಿನಲ್ಲಿ ಓಡಾಡುತ್ತಿದ್ದ ರಾಜ್ಯಪಾಲರು, ಈಗ ದಿಢೀರನೆ ಬುಲೆಟ್‌ ಪೂ್‌ ಕಾರಿನಲ್ಲಿ ಓಡಾಡುತ್ತಿರುವುದು ಅಚ್ಚರಿ ಮೂಡಿಸಿದೆ.

ರಾಜಭವನದ ಮೇಲೆ ದಾಳಿ ನಡೆಯುವ ಭೀತಿ :
ರಾಜ್ಯಪಾಲರ ವಿರುದ್ಧ ರೊಚ್ಚಿಗೆದ್ದಿದ್ದ ಕಾಂಗ್ರೆಸ್‌‍ ನಾಯಕರು, ರಾಜಭವನಕ್ಕೆ ನುಗ್ಗುವುದಾಗಿ ಬೆದರಿಕೆ ಹಾಕಿದ್ದರು. ಅದನ್ನು ಬಿಜೆಪಿ ತೀವ್ರವಾಗಿ ಖಂಡಿಸಿತ್ತು. ರಾಜಭವನದ ಮೇಲೆ ದಾಳಿ ನಡೆಸುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿರುವ ಕಾಂಗ್ರೆಸ್ಸಿಗರದ್ದು ಎಂಥಾ ಮನಸ್ಥಿತಿ ಎಂಬುದನ್ನು ಈ ರಾಜ್ಯದ ಜನರು ನಿರ್ಧರಿಸುತ್ತಾರೆ ಎಂದು ಬಿಜೆಪಿ ನಾಯಕರು ಆಕೋಶ ವ್ಯಕ್ತಪಡಿಸಿದ್ದರು. ಈ ಕುರಿತಂತೆ ಟ್ವೀಟ್‌ ಮಾಡಿದ್ದ ಬಿಜೆಪಿ ಕರ್ನಾಟಕ, ಸಿಎಂ ಸಿದ್ದರಾಮಯ್ಯ ಮತ್ತವರ ಪಟಾಲಂ ಕಡು ದಲಿತ ವಿರೋಧಿ ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ ಎಂದು ಪ್ರಶ್ನಿಸಿತ್ತು.

ಅಪರೂಪದ ಸಂದರ್ಭದಲ್ಲಿ ಮಾತ್ರ ಅತಿ ಗಣ್ಯ ವ್ಯಕ್ತಿಗಳಿಗೆ ಬುಲೆಟ್‌ ಪ್ರೂಫ್‌ ಕಾರು ಒದಗಿಸಲಾಗುತ್ತಿದೆ. ರಾಜ್ಯಕ್ಕೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ, ಸುಪ್ರಿಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಹಾಗೂ ಪ್ರಾಣ ಬೆದರಿಕೆ ಇರುವ ಗಣ್ಯರಿಗೆ ಮಾತ್ರ ಇದನ್ನು ನೀಡಲಾಗುತ್ತದೆ. ರಾಜ್ಯಪಾಲರ ವಿರುದ್ದ ಕೆಲವು ಸಂಘಟನೆಗಳು ತೀವ್ರ ಆಕ್ರೋಶಗೊಂಡಿರುವ ಹಿನ್ನಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಒದಗಿಸಲಾಗಿದೆ ಎಂದು ತಿಳಿದುಬಂದಿದೆ.

ಕಾರ್ಯಕ್ರಮ ನಿಮಿತ್ತ ತಮ ತವರು ಜಿಲ್ಲೆ ಮಧ್ಯಪ್ರದೇಶದ ಇಂದೋರ್‌ಗೆ ತೆರಳಿದ ರಾಜ್ಯಪಾಲರು ಕಳೆದ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದಾರೆ.ವಿಶ್ವವಿದ್ಯಾನಿಲಯಗಳ ಕುಲಪತಿಗಳೂ ಆಗಿರುವ ರಾಜ್ಯಪಾಲರು ವಿಶ್ವವಿದ್ಯಾನಿಲಯಗಳ ಘಟಿಕೋತ್ಸವ, ಪ್ರಶಸ್ತಿ, ಪದವಿ ಪ್ರದಾನ ಕಾರ್ಯಕ್ರಮಗಳಿಗೆ ತೆರಳುತ್ತಾರೆ. ಹೀಗಾಗಿ ಭದ್ರತಾ ಕಾರಣಕ್ಕಾಗಿ ಬುಲೆಟ್‌ ಪ್ರೂಫ್‌ ಕಾರು ಒದಗಿಸಲಾಗಿದೆ.

ಇನ್ನು ರಾಜ್ಯಪಾಲರು ಯಾವುದಾದರೂ ಸಭೆ ಸಮಾರಂಭ, ಮತ್ತಿತರ ಕಾರ್ಯಕ್ರಮಗಳಿಗೆ ತೆರಳುವ ಸಂದರ್ಭದಲ್ಲಿ ಅವರಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸುವಂತೆಯೂ ಸೂಚನೆ ನೀಡಲಾಗಿದೆ. ರಾಜ್ಯಪಾಲರಾಗಿ ಥಾವರ್‌ಚಂದ್‌ ಗೆಹ್ಲೋಟ್‌ ಅಧಿಕಾರ ವಹಿಸಿಕೊಂಡ ನಂತರ ಈವರೆಗೂ ಬುಲೆಟ್‌ ಪ್ರೂಫ್‌ ಕಾರು ಬಳಸುತ್ತಿರಲಿಲ್ಲ. ಇದೇ ಮೊದಲ ಬಾರಿಗೆ ಇದಕ್ಕೆ ಮೊರೆ ಹೋಗಿದ್ದಾರೆ.

RELATED ARTICLES

Latest News