ಬೆಂಗಳೂರು, ಜೂ. 10 (ಪಿಟಿಐ)- ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ 11 ಜನರು ಸಾವನ್ನಪ್ಪಿದ ಘಟನೆ ಕುರಿತ ಅರ್ಜಿ ವಿಚಾರಣೆಯನ್ನು ಉಚ್ಛ ನ್ಯಾಯಾಲಯ ಜೂ.12ಕ್ಕೆ ಮುಂದೂಡಿದೆ. ಜೂ.12ರೊಳಗೆ ಮುಚ್ಚಿದ ಲಕೋಟೆಯಲ್ಲಿ ಉತ್ತರ ನೀಡುವಂತೆ ಅಡ್ವೊಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ ಅವರಿಗೆ ನ್ಯಾಯಾಲಯ ಸೂಚನೆ ನೀಡಿದೆ.
ಘಟನೆ ಕುರಿತಂತೆ ಸ್ವಯಂ ಪ್ರೇರಣೆ ಪಿಐಎಲ್ ದಾಖಲಿಸಿಕೊಂಡಿದ್ದ ನ್ಯಾಯಲಯ ಮುಂದಿನ ವಿಚಾರಣೆಯನ್ನು ಇಂದಿಗೆ ಮುಂದೂಡಿತ್ತು. ಆದರೆ, ಇಂದು ನ್ಯಾಯಲಯದ ಮುಂದೆ ಹಾಜರಾದ ಎಜಿ ಶೆಟ್ಟಿ ಅವರು ಇನ್ನೂ ತಮ್ಮ ಉತ್ತರವನ್ನು ಸಲ್ಲಿಸಲು ಸಾಧ್ಯವಾಗಿಲ್ಲ ಎನ್ನುವುದನ್ನು ನ್ಯಾಯಪೀಠದ ಗಮನಕ್ಕೆ ತಂದರು.
ಘಟನೆ ಕುರಿತಂತೆ ವರದಿ ಸಲ್ಲಿಸುವಂತೆ ನ್ಯಾಯಾಂಗ ಆಯೋಗವನ್ನು ರಚಿಸಲಾಗಿದೆ ಜೊತೆಗೆ ಒಂದು ತಿಂಗಳ ಗಡುವುಉ ನೀಡಲಾಗಿದೆ. ನಗರ ಪೊಲೀಸ್ ಆಯುಕ್ತರು ಸೇರಿದಂತೆ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ತಿಳಿಸಿದರು.
ಬಾಕಿ ಇರುವ ಜಾಮೀನು ಅರ್ಜಿಗಳನ್ನು ಏಕಕಾಲದಲ್ಲಿ ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಪ್ರಕರಣದಲ್ಲಿ ಮಾಡಿದ ಯಾವುದೇ ಹೇಳಿಕೆಗಳನ್ನು ಆರೋಪಿಗಳು ಬಳಸುತ್ತಿದ್ದಾರೆ ಎಂದು ಹೇಳುವ ಮೂಲಕ ಶೆಟ್ಟಿ ಸೀಲ್ ಮಾಡಿದ ಲಕೋಟೆ ಸಲ್ಲಿಕೆಯನ್ನು ಕೋರಿದರು.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರು ಸ್ವಯಂಪ್ರೇರಿತ ಅರ್ಜಿಯನ್ನು ಆಲಿಸಿದರು.ವಿಧಾನ ಪರಿಷತ್ತಿನ ಮಾಜಿ ಸದಸ್ಯರೊಬ್ಬರು ಅರ್ಜಿಯಲ್ಲಿ ತಮ್ಮನ್ನು ಒಳಗೊಳ್ಳುವಂತೆ ಕೋರಿಕೆ ಸಲ್ಲಿಸಿದ್ದಾರೆ.ಏತನ್ಮಧ್ಯೆ, ಕಾಲ್ತುಳಿತದ ಕುರಿತು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸುತ್ತಿರುವುದಾಗಿ ವಕೀಲರೊಬ್ಬರು ತಿಳಿಸಿದ್ದಾರೆ.ಜೂನ್ 5 ರಂದು ಕರ್ನಾಟಕ ಹೈಕೋರ್ಟ್ ಕ್ರೀಡಾಂಗಣದ ಕಾಲ್ತುಳಿತದ ಘಟನೆಯನ್ನು ಸ್ವಯಂಪ್ರೇರಿತವಾಗಿ ಸ್ವೀಕರಿಸಿ, ರಾಜ್ಯ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿತ್ತು.