Thursday, June 12, 2025
Homeರಾಜ್ಯಕುಸುಮ್‌ ಸಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ

ಕುಸುಮ್‌ ಸಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ

ಬೆಂಗಳೂರು,ಜೂ.11- ಸ್ಥಳೀಯವಾಗಿ ಸೌರಶಕ್ತಿ ಉತ್ಪಾದಿಸುವ ಮೂಲಕ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲಿನ ವೇಳೆ 7 ಗಂಟೆ ವಿದ್ಯುತ್‌ ಪೂರೈಸುವ ಕುಸುಮ್‌-ಸಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಚಾಲನೆ ನೀಡಿದರು. ಗೌರಿಬಿದನೂರು ತಾಲೂಕಿನ ಹನುಮೇನಹಳ್ಳಿಯಲ್ಲಿ ತೊಂಡೆಬಾವಿ ವಿದ್ಯುತ್‌ ಉಪಸ್ಥಾವರಕ್ಕೆ ಸೌರಶಕ್ತಿ ಪೂರೈಕೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಯವರು
ಇದೇ ವೇಳೆ ರಾಜ್ಯದ ನಾನಾ ಭಾಗಗಳಿಂದ ವಿದ್ಯುನಾನ ಮಾದರಿಯಲ್ಲಿ ಸಂಪರ್ಕದಲ್ಲಿದ್ದ ರೈತರೊಂದಿಗೆ ಸಂವಾದ ನಡೆಸಿದರು.

ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ವಿದ್ಯುತ್‌ ಸ್ಥಾವರದಲ್ಲಿನ ಫಲಾನುಭವಿ ರೈತರ ಜೊತೆ ಸಂವಾದ ನಡೆಸಿದ ಮುಖ್ಯಮಂತ್ರಿಯವರು, ಕುಸುಮ್‌-ಬಿ ಯೋಜನೆಗೆ ರಾಜ್ಯಸರ್ಕಾರ ಶೇ.50 ರಷ್ಟು ಹಣ ನೀಡುತ್ತಿದೆ. ಕೇಂದ್ರ ಸರ್ಕಾರ ಶೇ.30 ರಷ್ಟು, ಉಳಿದ ಶೇ.20 ರಷ್ಟನ್ನು ಹೂಡಿಕೆದಾರರು ಭರಿಸಲಿದ್ದಾರೆ ಎಂದರು. ಕುಸುಮ್‌-ಸಿ ಯೋಜನೆಗೆ ಕೇಂದ್ರ ಸರ್ಕಾರ ಒಂದು ವೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಗೆ 1 ಕೋಟಿ 3 ಲಕ್ಷ ರೂ.ಗಳನ್ನು ಒದಗಿಸುತ್ತದೆ. ಉಳಿದ ಸುಮಾರು 3 ಕೋಟಿ ರೂ.ಗಳನ್ನು ರಾಜ್ಯಸರ್ಕಾರ ಭರಿಸುತ್ತಿದೆ ಎಂದರು.

ರೈತರ ಜಮೀನುಗಳನ್ನು ಬೋಗ್ಯಕ್ಕೆ ಪಡೆದು 25 ಸಾವಿರ ರೂ. ಭೂ ಬಳಕೆ ದರ ನೀಡಲಾಗುತ್ತಿದೆ ಎಂದಾಗ ತಿಪಟೂರು ಕ್ಷೇತ್ರದ ಶಾಸಕ ಕೆ.ಷಡಾಕ್ಷರಿ, ಈ ಮೊತ್ತವನ್ನು ಹೆಚ್ಚಿಸುವಂತೆ ಸಲಹೆ ನೀಡಿದರು. ಪ್ರತಿ ಎಕರೆಯಿಂದ ಕೃಷಿ ಮಾಡಿ 25 ಸಾವಿರ ರೂ. ಗಳಿಸಲಾಗುತ್ತಿದೆಯೇ ಎಂದು ಪ್ರಶ್ನಿಸಿದರು. ತಮ ತಾಲೂಕಿನ ಇನ್ನೂ ಐದಾರು ಕಡೆಗಳಲ್ಲಿ ಈ ಘಟಕಗಳನ್ನು ಆರಂಭಿಸುವಂತೆ ಶಾಸಕರು ಬೇಡಿಕೆಯಿಟ್ಟಾಗ ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಯಾಗಿರುವುದರಿಂದ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಗದಗ ಜಿಲ್ಲೆಯ ಫಲಾನುಭವಿಗಳ ಜೊತೆ ಮುಖ್ಯಮಂತ್ರಿಗಳು ಸಂವಾದ ನಡೆಸುವ ವೇಳೆ ಬಿಜೆಪಿಯ ವಿಧಾನಪರಿಷತ್‌ ಸದಸ್ಯ ಎಸ್‌‍.ವಿ.ಸಂಕನೂರು, 2019 ರಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಯೋಜನೆಯನ್ನು ಉದ್ಘಾಟಿಸಿದ್ದು, ನಿಮ ಸರ್ಕಾರ ಅದನ್ನು ಜಾರಿಗೊಳಿಸಿದೆ. ಯಾವುದೇ ಯೋಜನೆ ಅನುಷ್ಠಾನಗೊಳ್ಳಬೇಕಾದರೆ ಭೂಸ್ವಾಧೀನ ಹಾಗೂ ಇತರ ಪ್ರಕ್ರಿಯೆಗಳಿಂದಾಗಿ ವಿಳಂಬವಾಗುತ್ತದೆ ಎಂದು ಹೇಳಿದರು.
ಹಿಂದಿನ ಸರ್ಕಾರ ಯೋಜನೆಯನ್ನು ಆರಂಭಿಸಿಯೇ ಇರಲಿಲ್ಲ . ನಾವು ಅರ್ಧಕ್ಕಿಂತಲೂ ಹೆಚ್ಚಿನ ಹಣವನ್ನು ಭರಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿಯವರು ಹೇಳಿದಾಗ, ಹಿಂದಿನ ಸರ್ಕಾರ ಆರಂಭಿಸಿಲ್ಲ ಎಂದು ಹೇಳಬೇಡಿ. ಯೋಜನೆ ಅನುಷ್ಠಾನಕ್ಕೆ ಆಯಾ ಕಾಲಘಟ್ಟಗಳು ಬೇಕಾಗುತ್ತದೆ. ಕೇಂದ್ರದ ಪಾಲನ್ನು ಹೆಚ್ಚಿಸಲು ನಾವೂ ಕೂಡ ಮನವಿ ಮಾಡುತ್ತೇವೆ ಎಂದರು.

ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್‌.ಕೆ.ಪಾಟೀಲ್‌ ಆನ್‌ಲೈನ್‌ ಮೂಲಕವೇ ಸಂವಾದದಲ್ಲಿ ಭಾಗವಹಿಸಿ ಭೂಬಳಕೆ ದರ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ಮುಖ್ಯಮಂತ್ರಿ ಜಾರಿಕೊಂಡರು. ಶಿರಾ, ಚಾಮರಾಜನಗರ ಜಿಲ್ಲೆಗಳ ರೈತರು ಸಂವಾದದಲ್ಲಿ ಭಾಗವಹಿಸಿ ಈ ಮೊದಲು ರಾತ್ರಿ ವೇಳೆ ವಿದ್ಯುತ್‌ ಪೂರೈಸುತ್ತಿದ್ದುದರಿಂದಾಗಿ ಕಾಡುಪ್ರಾಣಿಗಳ ಹಾವಳಿಯಿಂದ ಹೊಲಗಳಿಗೆ ಹೋಗಲು ಕಷ್ಟವಾಗುತ್ತಿತ್ತು. ಈಗ ಹಗಲು ವೇಳೆ ವಿದ್ಯುತ್‌ ಪೂರೈಕೆಯಾಗುತ್ತಿದ್ದು, ಜಮೀನಿಗೆ ನೀರು ಹರಿಸಿ ರಾತ್ರಿ ನೆಮದಿಯಾಗಿ ನಿದ್ರೆ ಮಾಡುತ್ತಿದ್ದೇವೆ. ಇದಕ್ಕಾಗಿ ಸರ್ಕಾರಕ್ಕೆ ಧನ್ಯವಾದಗಳು ಎಂದರು.

ಮುಂದಿನ ದಿನಗಳಲ್ಲಿ ಏಳು ಗಂಟೆ ಹಗಲಿನ ವೇಳೆಯಲ್ಲಿ ಗುಣಮಟ್ಟದ ವಿದ್ಯುತ್‌ ಪೂರೈಸುತ್ತೇವೆ. ರೈತರಿಗೆಂದು ಜಾರಿಗೊಳಿಸಿರುವ ಹಲವಾರು ಯೋಜನೆಗಳಲ್ಲಿ ಇದೂ ಒಂದು ಎಂದು ಹೇಳಿದರು.
ಇಂಧನ ಸಚಿವ ಕೆ.ಜೆ.ಜಾರ್ಜ್‌ ಮಾತನಾಡಿ, ಈ ವರ್ಷ ನೂರು ಉಪಸ್ಥಾವರಗಳನ್ನು ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉಪಸ್ಥಾವರಗಳನ್ನು ಹಾಗೂ ಅದಕ್ಕೆ ಪೂರಕ ವಿದ್ಯುತ್‌ ಮಾರ್ಗಗಳನ್ನು ನಿರ್ಮಿಸಲಾಗುವುದು ಎಂದರು.

ಕೃಷಿ ಪಂಪ್‌ಸೆಟ್‌ಗಳಿಗೆ 19 ಸಾವಿರ ವಿದ್ಯುತ್‌ ಸಬ್ಸಿಡಿ ನೀಡಲಾಗುತ್ತಿದೆ. ಸಾರ್ಟ್‌ ಮೀಟರ್‌ ಯೋಜನೆಯಲ್ಲಿ ದೇಶದ ಎಲ್ಲಾ ರಾಜ್ಯಗಳಲ್ಲೂ ಆರ್‌ಡಿಎಸ್‌‍ಎಸ್‌‍ ಯೋಜನೆ ಜಾರಿಗೊಳಿಸಲಾಗಿದೆ. ಕರ್ನಾಟಕ ಮತ್ತು ರಾಜ್ಯಗಳನ್ನು ಕೈಬಿಡಲಾಗಿದೆ. ಇದರಿಂದ ಆರ್ಥಿಕ ಹೊರೆ ಹೆಚ್ಚಾಗಿದೆ. ಕೇಂದ್ರ ಸರ್ಕಾರಕ್ಕೆ ಇದಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಕೇಂದ್ರ ಆರ್‌ಡಿಎಸ್‌‍ಎಸ್‌‍ಗೆ ಒಪ್ಪಿಕೊಂಡರೆ ಶೇ. 60 ರಷ್ಟು ಅನುದಾನ ಬರಲಿದೆ ಎಂದು ಹೇಳಿದರು.

ಈವರೆಗೂ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವಿದ್ಯುತ್‌ ಬಿಲ್‌ ಪಾವತಿ ಬಾಕಿ ಇತ್ತು. ಅದಕ್ಕಾಗಿ ಹಲವು ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಇನ್ನು ಮುಂದೆ ಸರ್ಕಾರಿ ಸಂಸ್ಥೆಗಳಿಗೆ ಹೊಸ ವಿದ್ಯುತ್‌ ಸಂಪರ್ಕ ನೀಡಲು ಮುಂಗಡ ಪಾವತಿ ಪದ್ಧತಿ ಅನುಸರಿಸುವಂತೆ ಕೇಂದ್ರ ಸರ್ಕಾರ ಷರತ್ತು ವಿಧಿಸಿದೆ. ಮುಂದೆ ಅದನ್ನು ಅನುಷ್ಠಾನಕ್ಕೆ ತರಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌, ಶಾಸಕರಾದ ಪ್ರದೀಪ್‌ ಈಶ್ವರ್‌, ವಿಧಾನಪರಿಷತ್‌ ಸದಸ್ಯರಾದ ಅನಿಲ್‌ಕುಮಾರ್‌, ಬಿ.ಟಿ.ಶ್ರೀನಿವಾಸ್‌‍, ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

Latest News