ಬೆಂಗಳೂರು,ಜೂ.25- ಶಾಸಕರ ಅಸಮಾಧಾನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಗೆಹರಿಸುತ್ತಾರೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಚಿವರ ವಿರುದ್ಧ ಶಾಸಕರ ಅಸಮಾಧಾನ ಎಲ್ಲಾ ಸರ್ಕಾರಗಳಲ್ಲೂ ಸಾಮಾನ್ಯ. ಶಾಸಕರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದು ಕಷ್ಟಸಾಧ್ಯ. ಹಾಗಾಗಿ ಸಣ್ಣಪುಟ್ಟ ಸಮಸ್ಯೆಗಳು ಇದ್ದೇ ಇರುತ್ತವೆ. ಮುಖ್ಯ ಮಂತ್ರಿಯವರು ಶಾಸಕರ ಜೊತೆ ಚರ್ಚೆ ಮಾಡಿ
ಬಗೆಹರಿಸುತ್ತಾರೆ ಎಂದರು.
ಈ ಮೊದಲು ಶಾಸಕಾಂಗ ಸಭೆಯಲ್ಲಿ ತಮ ಅಭಿಪ್ರಾಯಗಳನ್ನು ಹೇಳಿಕೊಳ್ಳಲು ಶಾಸಕರಿಗೆ ಅವಕಾಶ ನೀಡಲಾಗಿತ್ತು. ಸಾಕಷ್ಟು ಚರ್ಚೆಗಳೂ ಆಗಿವೆ. ಇದೆಲ್ಲಾ ಸಣ್ಣಪುಟ್ಟ ಸಮಸ್ಯೆ, ಬಗೆಹರಿಯುತ್ತದೆ. ಹೈಕಮಾಂಡ್ ಮುಖ್ಯಮಂತ್ರಿಯವರಿಗೆ ಯಾವ ರೀತಿಯ ಸೂಚನೆ ನೀಡಿದೆಯೋ ಗೊತ್ತಿಲ್ಲ. ಒಂದು ವೇಳೆ ಸೂಚನೆ ನೀಡಿದ್ದರೆ ಅದರಂತೆ ನಡೆದುಕೊಳ್ಳುತ್ತಾರೆ ಎಂದರು.
ಶಾಸಕರು ತಮ ಕ್ಷೇತ್ರದ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಅದು ರಾಜ್ಯದ ಸಮಸ್ಯೆ ಅಲ್ಲ. ಕ್ಷೇತ್ರದ ಅಭಿವೃದ್ಧಿಗೆ ಪ್ರತಿಯೊಂದಕ್ಕೂ ತಲಾ 50 ಕೋಟಿ ರೂ.ಗಳ ಅನುದಾನ ನೀಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಎಲ್ಲಾ ಸಮಸ್ಯೆಗಳು ಇತ್ಯರ್ಥವಾಗುತ್ತವೆ ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಹಣ ಇಲ್ಲ ಎಂದು ನಾನು ಹೇಳಿಲ್ಲ. ಬಾದಾಮಿಯಲ್ಲಿ 1500 ವರ್ಷಗಳ ಇತಿಹಾಸವಿರುವ ಗುಹೆಗಳಿವೆ. ವಿಶ್ವದಲ್ಲಿ ಎಲ್ಲಿಯೂ ಈ ರೀತಿ ಇಲ್ಲ. ಅದನ್ನು ರಕ್ಷಣೆ ಮಾಡಲು 1 ಸಾವಿರ ಕೋಟಿ ರೂ.ಗಳಷ್ಟು ಯೋಜನಾ ವೆಚ್ಚ ತಯಾರಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ರಾಜ್ಯಸರ್ಕಾರಕ್ಕೆ ಅಷ್ಟು ದೊಡ್ಡ ಪ್ರಮಾಣದ ಹಣ ಕೊಡಲು ಸಾಧ್ಯವಿಲ್ಲ. ಕೇಂದ್ರದಿಂದ ಹಣ ತೆಗೆದುಕೊಳ್ಳಲಿ ಎಂದು ಸಲಹೆ ನೀಡಿದ್ದೆ. ಅದನ್ನು ಹಣ ಇಲ್ಲ ಎಂದು ಹೇಳಿರುವುದಾಗಿ ತಿರುಚುವುದು ಸರಿಯಲ್ಲ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ 4.9 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದ್ದಾರೆ. ಹಿಂದಿನ ವರ್ಷ 3.80 ಲಕ್ಷ ಕೋಟಿ ರೂ. ಇದ್ದ ಬಜೆಟ್ ಏರಿಕೆಯಾಗಿದೆ. ನೀರಾವರಿ ಸೇರಿದಂತೆ ಹಲವಾರು ಬಾಬ್ತುಗಳಿಗೆ ಸಾಕಷ್ಟು ಅನುದಾನ ನೀಡಲಾಗಿದೆ. ನಾನು ಮಾತನಾಡಿದ ವೇದಿಕೆಯಲ್ಲಿ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜರಾಯರೆಡ್ಡಿ ಕೂಡ ಇದ್ದರು. ಸಾವಿರ ಕೋಟಿ ಕೊಡಲಾಗುವುದಿಲ್ಲ ಎಂದು ಹೇಳಿದ್ದನ್ನೇ ಖುದ್ದು ಇಲ್ಲ ಎಂದು ಹೇಳಿದ್ದಾಗಿ ಬಿಂಬಿಸುತ್ತಿರುವುದು ಸರಿಯಲ್ಲ. ಈ ರೀತಿ ಹೇಳಲು ನನಗೆ ಪ್ರಜ್ಞೆ ಇಲ್ಲವೇ?, ಸರ್ಕಾರದಲ್ಲಿದ್ದುಕೊಂಡು ಆ ರೀತಿ ಮಾತನಾಡಲು ಸಾಧ್ಯವಿದೆಯೇ?, ಆ ರೀತಿ ಮಾತನಾಡುವುದೂ ಇಲ್ಲ. ನನಗೆ ವಸ್ತುಸ್ಥಿತಿ ತುಂಬಾ ಚೆನ್ನಾಗಿ ಗೊತ್ತಿದೆ. ರಾಜ್ಯದ ಆರ್ಥಿಕ ಸ್ಥಿತಿ ಸದೃಢವಾಗಿದೆ ಎಂದರು.
ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ಹಲ್ಲೆ ಮಾಡಿಲ್ಲ ಎಂದು ಅಧಿಕಾರಿಗಳು ಪ್ರಥಮ ಹಂತದ ಮಾಹಿತಿಯನ್ನು ನಮಗೆ ತಿಳಿಸಿದರು. ಪೊಲೀಸರು ಅನಂತರ ಪರಿಶೀಲನೆ ನಡೆಸುತ್ತಾರೆ. ವಾಸ್ತವತೆ ಆಧಾರದ ಮೇಲೆ ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.
ಸಂಪಿಗೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯಿಸಿ ಗುಂಪೊಂದು ಅನ್ಯಧರ್ಮದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಇಂತಹ ಘಟನೆಗಳಲ್ಲಿ ಸ್ಥಳೀಯ ಪೊಲೀಸರು ಚಾಲ್ತಿಯಲ್ಲಿರುವ ಕಾನೂನುಗಳನ್ನು ಆಧರಿಸಿ ಕ್ರಮ ಕೈಗೊಳ್ಳುತ್ತಾರೆ. ಸರ್ಕಾರದಿಂದ ನಾವು ಯಾವುದೇ ರೀತಿಯ ಸೂಚನೆಗಳನ್ನು ನೀಡುವುದಿಲ್ಲ. ಸ್ಥಳೀಯ ಪೊಲೀಸರೇ ಪ್ರಕರಣವನ್ನು ನಿಭಾಯಿಸುತ್ತಾರೆ ಎಂದು ಸ್ಪಷ್ಟಪಡಿಸಿದರು.
ತುರ್ತು ಪರಿಸ್ಥಿತಿಯ ಕರಾಳ ದಿನಾಚರಣೆ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಅದು ನಡೆದು 50 ವರ್ಷಗಳಾಗಿವೆ. ಇತಿಹಾಸ ಪುಟ ಸೇರಿದೆ. ಬಿಜೆಪಿಯವರು ಜೀವಂತ ಇಡುವ ಪ್ರಯತ್ನ ಮಾಡುತ್ತಿದ್ದಾರೆ. ಇದರ ಹಿಂದೆ ರಾಜಕೀಯ ದುರುದ್ದೇಶವಿದೆ. ಹಿಂದೆ ತಿರುಗಿ ನೋಡುವ ಬದಲು ಭವಿಷ್ಯದತ್ತ ನೋಡಬೇಕಿದೆ. ಮೋದಿಯವರು ಏನು ಮಾಡುತ್ತಿದ್ದಾರೆ, ಏನು ಮಾಡುತ್ತಾರೆ ಎಂಬುದರ ಚರ್ಚೆಯಾಗಿ ಮುಂದಿನ 50 ವರ್ಷದ ನೀಲನಕ್ಷೆ ಸಿದ್ಧಗೊಳ್ಳಲಿ ಎಂದು ಹೇಳಿದರು.