Wednesday, June 25, 2025
Homeರಾಜ್ಯದೆಹಲಿಯಿಂದ ಮರಳುತ್ತಿದ್ದಂತೆ ಶಾಸಕರೊಂದಿಗೆ ಸಿಎಂ ಸರಣಿ ಸಭೆ

ದೆಹಲಿಯಿಂದ ಮರಳುತ್ತಿದ್ದಂತೆ ಶಾಸಕರೊಂದಿಗೆ ಸಿಎಂ ಸರಣಿ ಸಭೆ

CM holds series of meetings with MLAs as he returns from Delhi

ಬೆಂಗಳೂರು,ಜೂ.25- ದೆಹಲಿಯಿಂದ ಮರಳುತ್ತಿದ್ದಂತೆ ಶಾಸಕರ ಜೊತೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸರಣಿ ಸಭೆಗಳನ್ನು ನಡೆಸಲು ಮುಂದಾಗಿದ್ದಾರೆ.ಅಳಂದ ಕ್ಷೇತ್ರದ ಶಾಸಕ ಬಿ.ಆರ್‌.ಪಾಟೀಲ್‌, ಸಾಗರ ಕ್ಷೇತ್ರದ ಶಾಸಕ ವೇಣುಗೋಪಾಲ್‌, ಮೊಳಕಾಲುರು ಕ್ಷೇತ್ರದ ಶಾಸಕ ಎನ್‌.ವೈ.ಗೋಪಾಲಕೃಷ್ಣ, ಕಾಗವಾಡ ಕ್ಷೇತ್ರದ ರಾಜು ಕಾಗೆ ಅವರ ಜೊತೆ ಪ್ರತ್ಯೇಕ ಚರ್ಚೆ ನಡೆಸಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.

ಇಷ್ಟೂ ಮಂದಿ ಶಾಸಕರು ಸರ್ಕಾರದ ವಿರುದ್ಧ ಬಹಿರಂಗ ಅಸಮಾಧಾನ ವ್ಯಕ್ತಪಡಿಸುವ ಮೂಲಕ ಸಚಿವರು ಹಾಗೂ ಅಧಿಕಾರಿಗಳ ನಡವಳಿಕೆಗೆ ಕಿಡಿಕಾರಿದ್ದಾರೆ.ಇದು ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿದ್ದು, ವಿರೋಧಪಕ್ಷ ಬಿಜೆಪಿ ಪ್ರತಿಭಟನೆಯ ಹಾದಿ ಹಿಡಿಯುವಂತೆ ಮಾಡಿದೆ.

ಬಿ.ಆರ್‌.ಪಾಟೀಲ್‌ ಹಾಗೂ ರಾಜು ಕಾಗೆ ತಮ ಹೇಳಿಕೆಗಳನ್ನು ಪದೇಪದೇ ಪುನರುಚ್ಚರಿಸುತ್ತಿದ್ದು, ನಡೆಯುತ್ತಿರುವುದನ್ನೇ ಹೇಳಿದ್ದೇವೆ, ಸತ್ಯ ಮಾತನಾಡಿದ್ದೇವೆ, ಈ ಸರ್ಕಾರದಲ್ಲಿ ಶಾಸಕರಿಗೆ ಬೆಲೆ ಇಲ್ಲ ಎಂಬೆಲ್ಲಾ ಟೀಕೆಗಳನ್ನು ಮಾಡಿದ್ದಾರೆ. ಮೊಳಕಾಲುರು ಕ್ಷೇತ್ರದ ಶಾಸಕ ಎನ್‌.ವೈ.ಗೋಪಾಲಕೃಷ್ಣ, ಗೃಹಸಚಿವ ಡಾ.ಜಿ.ಪರಮೇಶ್ವರ್‌ ಕಾಂಗ್ರೆಸ್‌‍ ಸರ್ಕಾರದಲ್ಲಿ ಹಣ ಇಲ್ಲ ಎಂದು ಹೇಳಿಕೆ ನೀಡಿ ಮುಜುಗರ ಉಂಟು ಮಾಡಿದ್ದರು. ಮಾರನೇ ದಿನವೇ ಯು-ಟರ್ನ್‌ ಪಡೆದಿದ್ದು, ನಾವು ಆ ರೀತಿ ಹೇಳಲಿಲ್ಲ ಎಂದಿದ್ದಾರೆ.

ಬೇಳೂರು ಗೋಪಾಲಕೃಷ್ಣ, ಸಚಿವ ಜಮೀರ್‌ ಅಹಮದ್‌ ಖಾನ್‌ ರಾಜೀನಾಮೆ ನೀಡಬೇಕು ಎಂದಿದ್ದರು. ಮಾರನೇ ದಿನ ಅವರೂ ಕೂಡ ತಮ ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ. ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜರಾಯರೆಡ್ಡಿ ಭ್ರಷ್ಟಾಚಾರ ಎಲ್ಲಾ ಕಾಲದಲ್ಲೂ ಇದೆ, ನಮ ಕಾಲದಲ್ಲೂ ಇದೆ ಎಂದು ಹೇಳುವ ಮೂಲಕ ಮತ್ತೊಂದು ರೀತಿಯ ಗೊಂದಲ ಹುಟ್ಟುಹಾಕಿದ್ದರು.

ಈ ಎಲ್ಲಾ ವಿಚಾರಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕರು, ಸಚಿವರ ಜೊತೆ ವೈಯಕ್ತಿಕವಾಗಿ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.ಮೊದಲಿಗೆ ಬಿ.ಆರ್‌.ಪಾಟೀಲರನ್ನು ಕರೆಸಿ ಮಾತುಕತೆ ನಡೆಸುವ ಸಾಧ್ಯತೆಯಿದೆ. ಎರಡು ದಿನಗಳಿಂದ ದೆಹಲಿ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಇಂದು ವಾಪಸ್‌‍ ಮರಳಲಿದ್ದಾರೆ.

ಬಿ.ಆರ್‌.ಪಾಟೀಲ್‌ ಕೂಡ ತಾವು ಜೂ.25 ರಂದು ಸಿದ್ದರಾಮಯ್ಯನವರನ್ನು ಭೇಟಿ ಮಾಡುವುದಾಗಿ ಹೇಳಿದ್ದರು. ಹೀಗಾಗಿ ಇಂದು ಸಂಜೆಯಿಂದಲೇ ಶಾಸಕರೊಂದಿಗಿನ ಸರಣಿ ಸಮಾಲೋಚನೆ ಸಭೆಗಳು ಆರಂಭವಾಗುವ ಸಾಧ್ಯತೆಗಳಿವೆ.ಇದಕ್ಕೆ ಪೂರಕವಾಗಿ ಹೈಕಮಾಂಡ್‌ ಕೂಡ ಗೊಂದಲದ ಹೇಳಿಕೆಗಳಿಗೆ ಕಡಿವಾಣ ಹಾಕುವಂತೆ ಮುಖ್ಯಮಂತ್ರಿಯವರಿಗೆ ಹೇಳಿದ್ದು, ಶೀಘ್ರವೇ ಶಾಸಕಾಂಗ ಸಭೆ ಆಯೋಜಿಸುವ ನಿರೀಕ್ಷೆಗಳಿವೆ.

RELATED ARTICLES

Latest News