Sunday, September 8, 2024
Homeರಾಜ್ಯಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧಪಡಿಸಲು ಸಿಎಂ ಸೂಚನೆ

ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧಪಡಿಸಲು ಸಿಎಂ ಸೂಚನೆ

ಬೆಂಗಳೂರು,ಜು.9- ರಾಜ್ಯದ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗೆ ನೀಲನಕಾಶೆ ಸಿದ್ಧಪಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು. ವಿಧಾನಸೌಧದಲ್ಲಿಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಎರಡನೇ ದಿನದ ಸಭೆಯಲ್ಲಿ ಮಾತನಾಡಿದ ಅವರು, ಅನೇಕ ರಾಜ್ಯ ಗಳಿಗೆ ಪ್ರವಾಸೋದ್ಯಮವೇ ಪ್ರಮುಖ ಆದಾಯ. ನೆರೆಯ ಕೇರಳದಷ್ಟು ಕೂಡಾ ಪ್ರವಾಸೋದ್ಯಮ ಅಭಿವೃದ್ಧಿ ನಮಗೆ ಸಾಧ್ಯವಾಗಿಲ್ಲ ಎಂದರು.

ಸ್ಥಳೀಯರೊಂದಿಗೆ ಸೇರಿಕೊಂಡು ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಜಿಲ್ಲಾಧಿಕಾರಿಗಳಿಗೆ ಅವರು ಸೂಚನೆ ನೀಡಿದರು. ಪ್ರವಾಸೋದ್ಯಮ ಅಭಿವೃದ್ಧಿಯಿಂದ ಉದ್ಯೋಗ ಸೃಷ್ಟಿ ಸಾಧ್ಯವಿದೆ. ಹೊಸ ಪ್ರವಾಸೋದ್ಯಮ ನೀತಿ ರಚಿಸಲು ನಿರ್ಧರಿಸಲಾಗಿದ್ದು, ಈ ಕುರಿತು ವಿಸ್ತೃತವಾದ ಸಮಾಲೋಚನೆ ನಡೆಸಬೇಕು ಎಂದು ಹೇಳಿದರು.

ಪ್ರವಾಸೋದ್ಯಮ ಮೂಲಸೌಲಭ್ಯಗಳು ಅತ್ಯಂತ ಕಡಿಮೆಯಿದೆ. ಮಧುಗಿರಿಯಲ್ಲಿರುವ ಏಕಶಿಲಾ ಬೆಟ್ಟ ಹಿಂದಿನ ಬಾರಿ ಸರ್ಕಾರ ಇದ್ದಾಗ ಅಭಿವೃದ್ಧಿ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರೂ, ಇದುವರೆಗೆ ಯಾವುದೇ ಅಭಿವೃದ್ಧಿಯಾಗಿಲ್ಲ. ಪ್ರವಾಸೋದ್ಯಮಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಿದರೆ ಮಾತ್ರ ಬಂಡವಾಳ ಹೂಡಿಕೆದಾರರು ಮುಂದೆ ಬರುತ್ತಾರೆ ಎಂದರು.

ಜಿಲ್ಲಾಧಿಕಾರಿಗಳು ಪ್ರವಾಸಿ ತಾಣಗಳ ಅಭಿವೃದ್ಧಿ ಸಾಧ್ಯತೆಗಳನ್ನು ಗುರುತಿಸಬೇಕು. ಖಾಸಗಿ ಸಹಭಾಗಿತ್ವದಲ್ಲಿ ಮಾತ್ರವಲ್ಲ, ಸರ್ಕಾರದ ವತಿಯಿಂದಲೂ ಹೆಜ್ಜೆ ಇರಿಸಬೇಕು. ಹೊಸ ಪ್ರವಾಸೋದ್ಯಮ ನೀತಿಯಲ್ಲಿ ಎಲ್ಲಾ ಅಂಶಗಳನ್ನು ಸೇರಿಸಲಾಗುವುದು. ಇದಕ್ಕೆ ಪೂರಕವಾಗಿ ಅನುದಾನವನ್ನು ಒದಗಿಸಲಾಗುವುದು ಎಂದರು.

ಕರಾವಳಿಯಲ್ಲಿ ಸಿಆರ್‌ಝೆಡ್‌ ಕಾಯ್ದೆಯಿಂದಾಗಿ ಅಭಿವೃದ್ಧಿಗೆ ಕೆಲವು ತೊಡಕುಗಳಿದ್ದು, ಇದನ್ನು ಬಗೆಹರಿಸಲು ಪ್ರಯತ್ನಿಸಬೇಕು. ಪ್ರವಾಸೋದ್ಯಮ ಮಾಸ್ಟರ್‌ ಪ್ಲಾನ್‌ ಸಿದ್ಧಪಡಿಸಲು ಮುಖ್ಯಮಂತ್ರಿ ಸೂಚಿಸಿದರು.

ರಾಜ್ಯದಲ್ಲಿ ಕೆಲವೇ ಪ್ರವಾಸೋದ್ಯಮ ತಾಣಗಳಿಗೆ ಫೋಕಸ್‌‍ ದೊರೆಯುತ್ತಿದೆ. 25 ಸಾವಿರ ಸಾರಕಗಳಿವೆ. ಇವುಗಳ ಪೈಕಿ ಸುಮಾರು 23 ಸಾವಿರ ಸಾರಕಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ ಸೌಲಭ್ಯ ಕಾಯ್ದೆ 2015 ಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿದರೆ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿ ಸಾಧ್ಯವಿದೆ. ಪ್ರವಾಸೋದ್ಯಮತಾಣಗಳ ಸಮೀಕ್ಷೆ, ಸಂರಕ್ಷಣೆ ಇತ್ಯಾದಿಗಳ ಮಾಸ್ಟರ್‌ ಪ್ಲಾನ್‌ ಜಿಲ್ಲಾವಾರು ಸಿದ್ಧಪಡಿಸಬೇಕು. ಮೂರು ತಿಂಗಳ ಒಳಗಾಗಿ ಈ ಕಾರ್ಯವನ್ನು ಪೂರ್ಣಗೊಳಿಸಬೇಕು. ಪ್ರವಾಸಿ ತಾಣಗಳನ್ನು ಹಂತ ಹಂತವಾಗಿ ಪುನರುಜ್ಜೀವನಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಸ್ಥಳೀಯ ಜನರು, ಎನ್‌ಜಿಒಗಳ ಸಹಯೋಗ ಪಡೆದುಕೊಳ್ಳಬೇಕು. ಜಿಲ್ಲಾ ಪ್ರವಾಸೋದ್ಯಮ ಕುರಿತು ಪುಸ್ತಕಗಳನ್ನು ಬಿಡುಗಡೆಗೊಳಿಸಿ. ಸಾರಕ ದತ್ತಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದ್ದು, ಆಸಕ್ತರು ಸಾರಕಗಳನ್ನು ದತ್ತು ಪಡೆದು ಸಂರಕ್ಷಣೆ ಕಾರ್ಯ ಮಾಡಬಹುದಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ 25 ಸಾವಿರ ಸಾರಕಗಳಿವೆ. ಇವುಗಳ ಮಹತ್ವ ಅರಿತು ಗೈಡ್‌ ಗಳನ್ನು ನೇಮಿಸುವುದಾಗಲಿ, ಸಮೀಕ್ಷೆ ನಡೆಸಿ, ಸಂರಕ್ಷಣೆ ಮಾಡಿ ನಿಮ ನಿಮ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಮಾಸ್ಟರ್‌ ಪ್ಲಾನ್‌ ಸಿದ್ಧಪಡಿಸಲು ಅವಕಾಶಗಳಿವೆ. ಇದಕ್ಕೆ ತಕ್ಕಂತೆ ಆಕ್ಷನ್‌ ಪ್ಲಾನ್‌ ಮಾಡಿ, ಬಜೆಟ್‌ ಪ್ಲಾನ್‌ ಸಿದ್ದಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ. ನಿಮ ನಿಮ ಜಿಲ್ಲೆಗಳಲ್ಲಿನ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬಹುದು.

ನಿಮ ಜಿಲ್ಲೆಗಳಲ್ಲಿ ಎಷ್ಟೆಲ್ಲಾ ಉತ್ತಮ ಸಾಹಿತಿ, ಬರಹಗಾರರು, ಕಲಾವಿದರು ಇದ್ದಾರೆ. ಅವರ ನೆರವು ಪಡೆದು 3 ತಿಂಗಳಲ್ಲಿ ಮಾಸ್ಟರ್‌ ಪ್ಲಾನ್‌ ಸಿದ್ಧಪಡಿಸಿ ಪ್ರವಾಸೋದ್ಯಮ ಸಮಿತಿ ಮುಂದೆ ಇಡಿ. ಸಾರಕಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವವರೂ ಇರುತ್ತಾರೆ. ಅವರನ್ನು ಗುರುತಿಸಿ. ನೀವು ಸಿದ್ದಪಡಿಸುವ ಮಾಸ್ಟರ್‌ ಪ್ಲಾನ್‌ ಗೆ ಹಣಕಾಸು ಒದಗಿಸಲಾಗುವುದು ಎಂದು ಸಚಿವ ಹೆಚ್‌.ಕೆ.ಪಾಟೀಲ್‌ ಅಭಿಪ್ರಾಯಪಟ್ಟರು.

ಕಪ್ಪತ್ತಗುಡ್ಡ ನಿಸರ್ಗ ಪ್ರದೇಶವನ್ನು ಪ್ರವಾಸೋದ್ಯಮ ಕ್ಷೇತ್ರವಾಗಿ ಇನ್ನಷ್ಟು ಅಭಿವೃದ್ಧಿ ಪಡಿಸಲು ಸಾಧ್ಯವಿದೆ. ಈ ಬಗ್ಗೆ ಗಮನ ಹರಿಸಿ. ಎಲ್ಲಾ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿದರೆ ರಾಜ್ಯದ ಪ್ರತೀ ಜಿಲ್ಲೆಗಳನ್ನೂ ಪ್ರವಾಸೋದ್ಯಮ ಜಿಲ್ಲೆಗಳನ್ನಾಗಿ ಮಾಡಬಹುದಾಗಿದೆ ಎಂದು ಸಚಿವ ಹೆಚ್‌.ಕೆ.ಪಾಟೀಲ್‌ ಅವರು ಪ್ರಸ್ತಾವನೆ ಮುಂದಿಟ್ಟರು. ಇದಕ್ಕೆ ಧ್ವನಿಗೂಡಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್‌, ರಾಜ್ಯದಲ್ಲಿ ಅತೀ ವಿಸ್ತಾರವಾದ ಕರಾವಳಿ ಪ್ರದೇಶವಿದೆ. ಕರಾವಳಿಯುದ್ದಕ್ಕೂ ನಾವು ಪ್ರವಾಸೋದ್ಯಮ ಬೆಳೆಸುವ, ಅಭಿವೃದ್ಧಿಪಡಿಸುವ ಅವಕಾಶಗಳು ಹೇರಳವಾಗಿವೆ ಎಂದರು.

RELATED ARTICLES

Latest News