ಬೆಂಗಳೂರು,ಜೂ.11- ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಲಾಗಿರುವ ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆಯ ವರದಿಯನ್ನು ಪ್ರಾಥಮಿಕವಾಗಿ ಅಂಗೀಕರಿಸಲಾಗಿದೆ. ಜನಸಂಖ್ಯೆಗೆ ಸಂಬಂಧಪಟ್ಟಂತಹ ಮಾಹಿತಿಯನ್ನು ಮಾತ್ರ ಮರು ಸಮೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬೊಮಸಂದ್ರ ಗ್ರಾಮದ ಹೆಲಿಪ್ಯಾಡ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿಯ ವಿಚಾರವಾಗಿ ಕೆಲ ದೂರುಗಳಿವೆ ಎಂದು ಹೈಕಮಾಂಡ್ ಸೂಚನೆ ನೀಡಿದೆ.
ಸಮೀಕ್ಷೆ ನಡೆದು 9 ವರ್ಷಗಳ ಹಳೆಯದಾಗಿದೆ. 60-70 ದಿನಗಳಲ್ಲಿ ಮರು ಸರ್ವೆ ಮಾಡಲಾಗುವುದು ಎಂದರು. ಹೈಕಮಾಂಡ್ ಸೂಚನೆಯಿಂದ ಸಿದ್ದರಾಮಯ್ಯನವರಿಗೆ ನಿರಾಶೆಯಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವರದಿಯ ವಿಚಾರದಲ್ಲಿ ನನ್ನ ನಿರ್ಧಾರ ಮುಖ್ಯ ಅಲ್ಲ. ಹೈಕಮಾಂಡ್ ಹೇಳಿದಂತೆ ಮರು ಸಮೀಕ್ಷೆ ನಡೆಸುತ್ತೇವೆ ಎಂದು ಹೇಳಿದರು. ಶೈಕ್ಷಣಿಕ ಸಂಸ್ಥೆಗಳಲ್ಲಿ ಅಗತ್ಯವಿರುವ ಕಡೆ ಅತಿಥಿ ಉಪನ್ಯಾಸಕರನ್ನು ನೇಮಿಸಲಾಗುತ್ತಿದೆ. ಅವರ ಸಂಖ್ಯೆಯನ್ನು ಹೆಚ್ಚಿಸಲಿದೆ. ಈಗಾಗಲೇ ಅವರ ಗೌರವಧನ ಹೆಚ್ಚಿಸಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಪ್ರಾಥಮಿಕದಿಂದ ಹಿಡಿದು ಉನ್ನತ ಶಿಕ್ಷಣದವರೆಗೂ ಹೆಚ್ಚಿನ ಆದ್ಯತೆ ನೀಡಿದ್ದೇವೆ ಎಂದರು.
ದೇಶದಲ್ಲಿ ಬಡತನ ಕಡಿಮೆಯಾಗಲು ಬಿಜೆಪಿಯ ನರೇಂದ್ರ ಮೋದಿ ಸರ್ಕಾರ ಮಾತ್ರ ಕಾರಣವಲ್ಲ. ಕಾಂಗ್ರೆಸ್ ಗರೀಬಿ ಹಠಾವೊ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಅದರಿಂದಾಗಿ ಬಡತನ ತಗ್ಗುತ್ತಿದೆ ಎಂದು ಹೇಳಿದರು. ಜಾರಿ ನಿರ್ದೇಶನಾಲಯ ಕಾನೂನು ಪ್ರಕಾರ, ಯಾವುದೇ ಕ್ರಮಗಳನ್ನು ಕೈಗೊಂಡರೂ ನಮ ವಿರೋಧ ಇಲ್ಲ. ಕಾನೂನು ಉಲ್ಲಂಘನೆಗೆ ನಾವು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಪ್ರಕರಣದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಜನರ ಮುಂದೆ ಸುಳ್ಳು ಹೇಳಿ ದಾರಿ ತಪ್ಪಿಸುವುದು, ರಾಜೀನಾಮೆ ಕೇಳುವುದು ಸಾಮಾನ್ಯವಾಗಿ ಹೋಗಿದೆ.
ಕುಂಭಮೇಳದಲ್ಲಿ 40 ರಿಂದ 50 ಮಂದಿ ಜೀವಹಾನಿಯಾಗಿತ್ತು. ಆಗ ರಾಜೀನಾಮೆ ಕೇಳಿದ್ದರೆ?, ಪ್ರಧಾನಮಂತ್ರಿ ಉದ್ಘಾಟಿಸಿದ ಸೇತುವೆ ಅದೇ ದಿನ ಬಿದ್ದು 140 ಮಂದಿ ಸಾವನ್ನಪ್ಪಿದ್ದರು. ಆಗ ನರೇಂದ್ರ ಮೋದಿಯವರ ರಾಜೀನಾಮೆ ಕೇಳಲಾಗಿತ್ತೇ?, ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಗೋದ್ರಾ ಘಟನೆಯಲ್ಲಿ ಸಾವಿರಾರು ಜನ ಸಾವನ್ನಪ್ಪಿದ್ದರು. ಮೋದಿ ರಾಜೀನಾಮೆ ಕೊಟ್ಟಿದ್ದರೇ?, ಕೋವಿಡ್ ವೇಳೆ ಆಮ್ಲಜನಕ ದುರಂತದಲ್ಲಿ 23 ಜನ ಸಾವನ್ನಪ್ಪಿದ್ದರು. ಆಗ ಬಿಜೆಪಿಯ ಮುಖ್ಯಮಂತ್ರಿ ರಾಜೀನಾಮೆ ಕೊಟ್ಟಿದ್ದರೇ? ಎಂದು ತಿರುಗೇಟು ನೀಡಿದರು.
ಬಿಜೆಪಿಯವರು ರಾಜಕೀಯಕ್ಕಾಗಿ ರಾಜೀನಾಮೆ ಕೇಳುತ್ತಿದ್ದಾರೆ. ಅದರಲ್ಲಿ ಯಾವುದೇ ಸತ್ಯಾಂಶ ಇಲ್ಲ. ಘಟನೆಯ ತನಿಖೆಗಾಗಿ ನ್ಯಾಯಮೂರ್ತಿ ಮೈಕಲ್ ಕುನ್ಹಾ ನೇತೃತ್ವದಲ್ಲಿ ಏಕಸದಸ್ಯ ಆಯೋಗ ರಚನೆ ಮಾಡಲಾಗಿದೆ. ಈ ಹಂತದಲ್ಲಿ ತಾವು ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ಹೇಳಿದರು. ತುಮಕೂರು ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆಯೆಂದು ಘೋಷಿಸುವಂತೆ ಗೃಹಸಚಿವ ಡಾ.ಜಿ.ಪರಮೇಶ್ವರ್ ನೀಡಿರುವ ಹೇಳಿಕೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬಂದ ನಂತರ ಪರಿಶೀಲನೆ ನಡೆಸಲಾಗುವುದು ಎಂದರು.
ಜಲಜೀವನ್ ಮಿಷನ್, ಕುಸುಮ್-ಸಿ ಯೋಜನೆಗಳಲ್ಲಿ ರಾಜ್ಯಸರ್ಕಾರದ ಪಾಲು ಶೇ.50 ರಷ್ಟು ಕೇಂದ್ರ ಸರ್ಕಾರ ಕೇವಲ 30 ರಷ್ಟು ಮಾತ್ರ ನೀಡುತ್ತಿದೆ. ಶೇ.20 ರಷ್ಟನ್ನು ಫಲಾನುಭವಿಗಳು ಭರಿಸುತ್ತಾರೆ. ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಲ್ಲೂ ನಮ ಪಾಲು ಹೆಚ್ಚಿದೆ. ಆದರೂ ಈ ಯೋಜನೆಗಳಿಗೆ ಪ್ರಧಾನಮಂತ್ರಿ ಯೋಜನೆಗಳು ಎಂಬ ಹೆಸರನ್ನು ನಾಮಕರಣ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರಿಗೆ, ಜನಸಾಮಾನ್ಯರಿಗೆ ಒಳ್ಳೆಯದಾಗಲಿ ಎಂಬ ಕಾರಣಕ್ಕಾಗಿ ನಮ ಪಾಲು ಹೆಚ್ಚಿದ್ದರೂ ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ಒಪ್ಪಿಕೊಳ್ಳುತ್ತಿದ್ದೇವೆ ಎಂದು ಹೇಳಿದರು. ಎತ್ತಿನಹೊಳೆ ಯೋಜನೆೆ ಯಾವಾಗ ಮುಗಿಯಲಿದೆ ಎಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಯೋಜನಾ ವ್ಯಾಪ್ತಿಯ ಜಿಲ್ಲೆಗಳ ಸಚಿವರು, ಶಾಸಕರು, ಸಂಸದರು ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳ ಸಭೆ ಕರೆಯಲಾಗಿದೆ. ಇದೇ 19 ರಂದು ಸಚಿವ ಸಂಪುಟ ಸಭೆ ಇದೆ. ಅಂದು ಸೂಕ್ತ ನಿರ್ಧಾರ ಪ್ರಕಟಿಸಲಾಗುವುದು. ಬಹುತೇಕ 2 ವರ್ಷಗಳಲ್ಲಿ ಯೋಜನೆ ಮುಕ್ತಾಯವಾಗಬಹುದು ಎಂದರು.
ರಾಜ್ಯದ ಆರ್ಥಿಕ ಪರಿಸ್ಥಿತಿ ಸದೃಢವಾಗಿದೆ. ಗ್ಯಾರಂಟಿ ಯೋಜನೆಗಳಲ್ಲಿ ಹಣ ಒದಗಿಸಿದ್ದೇವೆ. ಅಭಿವೃದ್ಧಿ ಯೋಜನೆಗಳಿಗೂ ಅನುದಾನ ಹೆಚ್ಚಿಸಲಾಗಿದೆ. ಬಂಡವಾಳ ವೆಚ್ಚವನ್ನು 31 ಸಾವಿರ ಕೋಟಿ ರೂ.ಗಳಷ್ಟು ಹೆಚ್ಚಿಸಲಾಗಿದೆ. ರಾಜ್ಯಸರ್ಕಾರ ದಿವಾಳಿಯಾಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ 593 ಭರವಸೆಗಳಲ್ಲಿ 143 ಅನ್ನು ಈಡೇರಿಸಿದ್ದೇವೆ. ಬಿಜೆಪಿಯವರು ಕೇಂದ್ರದಲ್ಲಿ 600 ಭರವಸೆ ನೀಡಿದ್ದರು. ಅದರಲ್ಲಿ ಶೇ.10ರಷ್ಟನ್ನು ಈಡೇರಿಸಿಲ್ಲ. ಹೀಗಾಗಿ ಕೇಂದ್ರ ಮತ್ತು ರಾಜ್ಯಸರ್ಕಾರಗಳಿಗೆ ಎಷ್ಟು ಅಂಕ ನೀಡಬೇಕು ಎಂದು ಜನರೇ ತೀರ್ಮಾನಿಸಲಿ ಎಂದು ಹೇಳಿದರು.