ಬೆಂಗಳೂರು, ಜೂ.7– ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಆಟಗಾರರ ತಂಡವನ್ನು ಸ್ವಾಗತಿಸಿ ಅಭಿನಂದಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿ ರುವುದು ಬೆಳಕಿಗೆ ಬಂದಿದೆ. ಸಚಿವ ಸಂಪುಟ ಸಭೆಯ ಬಳಿಕ ಕಾಲ್ತುಳಿತ ಪ್ರಕರಣ ಕುರಿತು ಚರ್ಚಿಸುವ ಸಲುವಾಗಿ ನಡೆದ ವಿಶೇಷ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಪರಸ್ಪರ ಕಾವೇರಿದ ಮಾತುಕತೆಗಳು ನಡೆದಿವೆ.
ಘಟನೆಯಿಂದಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ಬಂದಿದೆ. ಇದಕ್ಕಾಗಿ ಪೊಲೀಸ್ ಆಯುಕ್ತರೂ ಸೇರಿದಂತೆ ಹಿರಿಯ ಅಧಿಕಾರಿಗಳ ತಲೆದಂಡವಾಗಬೇಕೆಂದು ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದಿದ್ದರು ಎನ್ನಲಾಗಿದೆ.ಈ ವೇಳೆ ಸಿಟ್ಟಾದ ಮುಖ್ಯಮಂತ್ರಿಯವರು ಅಧಿಕಾರಿಗಳನ್ನು ಹೊಣೆ ಮಾಡುವುದು ಸುಲಭ. ಆದರೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನೀವು ಭೇಟಿ ನೀಡಿದ್ದೇಕೆ, ಯಾವುದೇ ಮುನ್ಸೂಚನೆ ಇಲ್ಲದೆ ಪೂರ್ವ ನಿರ್ಧರಿತ ವೇಳಾಪಟ್ಟಿಯೂ ಇಲ್ಲದೆ ಸಾಂವಿಧಾನಿಕ ಹುದ್ದೆಯಲ್ಲಿರುವ ತಾವು ಏಕಾಏಕಿ ಆ ರೀತಿ ಜನಸಂದಣಿಯ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದೇಕೆ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ನೀವು ಅಲ್ಲಿಗೆ ಹೋಗಿ ಶೋ ಮಾಡಿದ್ದರಿಂದಾಗಿಯೇ ವಿರೋಧಪಕ್ಷಗಳು ಸರ್ಕಾರವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಟೀಕೆ ಮಾಡುತ್ತಿವೆ. ವಿಧಾನಸೌಧದ ಮುಂದೆ ಯಾವುದೇ ಸಮಸ್ಯೆಗಳೂ ಆಗಿಲ್ಲ, ಗೊಂದಲಗಳೂ ಉಂಟಾಗಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದ ಕಾರ್ಯಕ್ರಮಕ್ಕೆ ಪೊಲೀಸರು ಅನುಮತಿ ನೀಡಿರಲಿಲ್ಲ. ಹೀಗಿದ್ದಾಗಲೂ ನೀವು ಅಲ್ಲಿಗೆ ಭೇಟಿ ನೀಡಿದ್ದರಿಂದ ಅದು ಸರ್ಕಾರದ ಕಾರ್ಯಕ್ರಮ ಎಂಬ ರೀತಿ ಬಿಂಬಿಸಲಾಗಿದೆ. ಕಾಲ್ತುಳಿತ ಪ್ರಕರಣಕ್ಕೆ ಸಚಿವರ ತಲೆದಂಡವಾಗಬೇಕು. ವಿರೋಧಪಕ್ಷಗಳು ಕೇಳುತ್ತಿವೆ. ಇದಕ್ಕೆ ನಾವು ಯಾವ ರೀತಿ ಉತ್ತರಿಸಲು ಸಾಧ್ಯ ಎಂದು ಮುಖ್ಯಮಂತ್ರಿ ಗರಂ ಆಗಿದ್ದರು ಎನ್ನಲಾಗಿದೆ.
ಲಕ್ಷಾಂತರ ಜನ ಸೇರಿದ್ದರಿಂದಾಗಿ ಕರ್ನಾಟಕ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಕ್ರೀಡಾಂಗಣದ ಒಳಗೆ ಹೋಗಲು ಸಾಧ್ಯವಾಗಿರಲಿಲ್ಲ. ಅವರಿಗೆ ಸಹಾಯ ಮಾಡುವ ದೃಷ್ಟಿಯಿಂದ ನಾನು ನನ್ನದೇ ಕಾರಿನಲ್ಲಿ ಅವರನ್ನು ಕೂರಿಸಿಕೊಂಡು ಕ್ರೀಡಾಂಗಣದ ಒಳಗೆ ಹೋಗಬೇಕಾಯಿತು. ಅಲ್ಲಿ ಹೋಗಿ ವಾಪಸ್ ಬರುವ ಬದಲು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ ಎಂದು ಡಿ.ಕೆ.ಶಿವಕುಮಾರ್ ಸಮರ್ಥನೆ ನೀಡಿದರು ಎನ್ನಲಾಗಿದೆ.
18 ವರ್ಷಗಳ ಬಳಿಕ ಆರ್ಸಿಬಿ ತಂಡ ಐಪಿಎಲ್ ಕಪ್ ಗೆದ್ದಿತ್ತು. ಈ ಸಂಬಂಧ ಜನರಲ್ಲಿ ಅಭಿಮಾನ, ಉತ್ಸಾಹ ಮೇರೆ ಮೀರಿತ್ತು. ಪೊಲಿಸರು, ಗುಪ್ತದಳ ಮುಂಜಾಗ್ರತೆ ವಹಿಸಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ಹೊರ ಜಿಲ್ಲೆಗಳಿಂದ ಮತ್ತು ಸಶಸ್ತ್ರ ಮೀಸಲು ಪಡೆಗಳ ಸಿಬ್ಬಂದಿಗಳನ್ನು ಬಳಸಿಕೊಂಡು ಭದ್ರತೆ ಆಯೋಜಿಸಬೇಕಿತ್ತು. ಅದನ್ನು ಮಾಡುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ನಾನು ಹೋಗದೇ ಇದ್ದರೂ ದುರಂತವಂತೂ ನಡೆಯುತ್ತಲೇ ಇತ್ತು.
ವಿರೋಧಪಕ್ಷಗಳು ಬಾಯಿಗೆ ಬಂದಂತೆ ಮಾತನಾಡುತ್ತಿವೆ. ಅದಕ್ಕೆ ನಾವು ತಲೆಕೆಡಿಸಿಕೊಳ್ಳಲಾಗುವುದಿಲ್ಲ. ಪೊಲೀಸರ ವೈಫಲ್ಯವಂತೂ ಎದ್ದು ಕಾಣುತ್ತಿದೆ. ಹೀಗಾಗಿ ಪೊಲೀಸ್ ಆಯುಕ್ತರ ತಲೆದಂಡ ಆಗಲೇಬೇಕು ಎಂದು ಪಟ್ಟು ಹಿಡಿದಿದ್ದರು ಎನ್ನಲಾಗಿದೆ.ಆರಂಭದಲ್ಲೇ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆಗಳು ಶುರುವಾದಾಗ ಪರಸ್ಪರ ಕಾವೇರಿದ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ ಮುಖ್ಯಮಂತ್ರಿಯವರು ಸಂಪುಟ ಸಭೆಯ ಬಳಿಕ ಎಲ್ಲಾ ಸಚಿವರನ್ನು ಕಳುಹಿಸಿ ಪ್ರಮುಖರನ್ನು ಮಾತ್ರ ಒಳಗೊಂಡಂತೆ ಉಪಮುಖ್ಯಮಂತ್ರಿ ಹಾಗೂ ಗೃಹಸಚಿವರೊಂದಿಗೆ ಮಾತ್ರ ಚರ್ಚೆ ನಡೆಸಿದರು ಎನ್ನಲಾಗಿದೆ. ಅಲ್ಲಿ ಕಾಲ್ತುಳಿತ ಪ್ರಕರಣದ ಬಗ್ಗೆ ವಿಮರ್ಶೆ ನಡೆಸಿದರು. ಅಂತಿಮವಾಗಿ ಪೊಲೀಸ್ ಆಯುಕ್ತರೂ ಸೇರಿದಂತೆ ಹಿರಿಯ ಅಧಿಕಾರಿಗಳ ಅಮಾನತು ನ್ಯಾಯಾಂಗ ತನಿಖೆಯ ನಿರ್ಧಾರ ಮಾಡಲಾಯಿತು ಎಂದು ಉನ್ನತ ಮೂಲಗಳು ತಿಳಿಸಿವೆ.