ನವದೆಹಲಿ,ಜೂ.24- ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ರಾಜಭವನ ಮತ್ತು ಸರ್ಕಾರದ ನಡುವಿನ ಸಂಘರ್ಷದ ಕುರಿತು ವಿವರಣೆ ನೀಡಿದ್ದಾರೆ.
ಬೆಳಿಗ್ಗೆ 11.20 ಕ್ಕೆ ರಾಷ್ಟ್ರಪತಿ ಭವನಕ್ಕೆ ತೆರಳಿ ರಾಷ್ಟ್ರಪತಿಯವರನ್ನು ಭೇಟಿ ಮಾಡಿದ ಸಿದ್ದರಾಮಯ್ಯನವರು, ರಾಜ್ಯಸರ್ಕಾರ ವಿಧಾನಮಂಡಲದಲ್ಲಿ ಅಂಗೀಕರಿಸಿ ರಾಜಭವನಕ್ಕೆ ಕಳುಹಿಸಿದ ಬಹುತೇಕ ವಿಧೇಯಕಗಳು ನೆನೆಗುದಿಗೆ ಬೀಳುತ್ತಿವೆ. ಇನ್ನೂ ಕೆಲವು ವಿಧೇಯಕಗಳು ರಾಷ್ಟ್ರಪತಿ ಭವನಕ್ಕೆ ತಲುಪಿವೆ. ಅವುಗಳಿಗೆ ಕೂಡಲೇ ಅಂಕಿತ ಹಾಕಬೇಕು ಎಂದು ಮನವಿ ಮಾಡಿದ್ದಾರೆ.
ಮಕ್ಕಳ ಮುಕ್ತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ತಿದ್ದುಪಡಿ ಕಾಯಿದೆ-2015, ಕರ್ನಾಟಕ ಅದಿರು ಹಕ್ಕು ಮತ್ತು ಅದಿರಿಗೆ ಸಂಬಂಧಪಟ್ಟ ಭೂಮಿ ತಿದ್ದುಪಡಿ ಕಾಯಿದೆ-2024, ಕರ್ನಾಟಕ ನೋಂದಣಿ ತಿದುಪಡಿ ಮಸೂದೆ-2024, ಕರ್ನಾಟಕ ನೋಟರಿ ತಿದ್ದುಪಡಿ ಮಸೂದೆ-2025, ಕರ್ನಾಟಕ ಸಾರ್ವಜನಿಕ ಖರೀದಿಯಲ್ಲಿ ಪಾರದರ್ಶಕತೆ ತಿದ್ದುಪಡಿ ಮಸೂದೆ-2025, ಕರ್ನಾಟಕ ಹಿಂದೂ ಕಾರ್ಮಿಕರ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿ ತಿದ್ದುಪಡಿ ಮಸೂದೆ-2024 ರಾಷ್ಟ್ರಪತಿಗಳ ಅಂಕಿತಕ್ಕೆ ಬಾಕಿ ಉಳಿದಿದ್ದು, ಇವುಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ.
ರಾಜ್ಯಸರ್ಕಾರದ ಮಹತ್ವಾಕಾಂಕ್ಷೆಯ ಕೆಟಿಪಿಟಿ ಮಸೂದೆ, ಮುಸ್ಲಿಂ ಸಮುದಾಯ ಹಾಗೂ ಹಿಂದುಳಿದ ವರ್ಗಗಳಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡುವ ಮಹದುದ್ದೇಶ ಹೊಂದಿದೆ. ವಿಧಾನಸಭೆ ಹಾಗೂ ವಿಧಾನಪರಿಷತ್ನಲ್ಲಿ ಅನುಮೋದನೆ ಪಡೆದಿರುವ ಕರ್ನಾಟಕ ಸಾರ್ವಜನಿಕ ಖರೀದಿಯಲ್ಲಿ ಪಾರದರ್ಶಕತೆ ತಿದ್ದುಪಡಿ ಮಸೂದೆಗೆ ರಾಜ್ಯಪಾಲರು ಸಹಿ ಹಾಕದೆ ರಾಷ್ಟ್ರಪತಿಯವರಿಗೆ ರವಾನಿಸಿದ್ದಾರೆ.

ಮಸೂದೆಯಲ್ಲಿ ಅಲ್ಪಸಂಖ್ಯಾತರ ತುಷ್ಟೀಕರಣವಿದೆ. ಹಿಂದೂ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದ್ದಲ್ಲದೆ, ಮಸೂದೆಗೆ ಕೈ ಹಾಕಬಾರದು ಎಂದು ರಾಜ್ಯಪಾಲರ ಮೇಲೆ ಒತ್ತಡ ಹಾಕಿತ್ತು. ಕೊನೆಗೂ ಮಸೂದೆ ರಾಷ್ಟ್ರಪತಿ ಭವನ ತಲುಪಿದೆ. ಇದು ಸಿದ್ದರಾಮಯ್ಯ ಅವರ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದ್ದು, ರಾಜಕೀಯ ಲೆಕ್ಕಾಚಾರಗಳಿಂದಲೂ ಸಾಕಷ್ಟು ಚರ್ಚೆಗೆ ಒಳಗಾಗಿದೆ.
ಮಕ್ಕಳ ಮುಕ್ತ ಹಾಗೂ ಕಡ್ಡಾಯ ಶಿಕ್ಷಣ ತಿದ್ದುಪಡಿ ಮಸೂದೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆ ಅಥವಾ ಕನ್ನಡದಲ್ಲೇ ನೀಡಬೇಕು ಎಂಬ ಒತ್ತಾಸೆ ಇದೆ. 2015 ರಿಂದಲೂ ಈ ಮಸೂದೆ ನೆನೆಗುದಿಗೆ ಬಿದ್ದಿದೆ. ಸಿದ್ದರಾಮಯ್ಯನವರು ಮೊದಲ ಅವಧಿಯಲ್ಲೇ ಈ ಮಸೂದೆಯನ್ನು ರೂಪಿಸಿದ್ದರು. ಭಾಷಾ ಮಾಧ್ಯಮ ವಿವಾದ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಹೀಗಾಗಿ ರಾಷ್ಟ್ರಪತಿ ಅಂಗಳದಲ್ಲಿ 10 ವರ್ಷಗಳಿಂದಲೂ ಮಸೂದೆ ನೆನೆಗುದಿಗೆ ಬಿದ್ದಿದೆ. ಕನ್ನಡ ಭಾಷಾ ಮಾಧ್ಯಮಕ್ಕೆ ಪರ-ವಿರೋಧ ಚರ್ಚೆಗಳು ತೀವ್ರವಾಗಿ ನಡೆದಿದ್ದವು.
ಜೊತೆಗೆ ಕೇಂದ್ರ ಸರ್ಕಾರದ ಅಪರಾಧ ಸಂಹಿತೆ ಸುಗ್ರೀವಾಜ್ಞೆ 1944, ನೋಂದಣಿ ಕಾಯಿದೆ, ಕರ್ನಾಟಕ ಅದಿರು ಹಕ್ಕು ಮತ್ತು ಅದಿರಿಗೆ ಸಂಬಂಧಪಟ್ಟ ಭೂಮಿಯ ಮಾಲಿಕತ್ವದ ತಿದ್ದುಪಡಿ ಕಾಯಿದೆಯ ಬಗ್ಗೆಯೂ ಮುಖ್ಯಮಂತ್ರಿಯವರು ಕೇಂದ್ರ ಸರ್ಕಾರದಿಂದ ಸ್ಪಷ್ಟನೆ ಬಯಸಿದ್ದಾರೆ.
ಇತ್ತೀಚೆಗೆ ತಮಿಳುನಾಡು ಸರ್ಕಾರ ಮತ್ತು ಅಲ್ಲಿನ ರಾಜ್ಯಪಾಲರ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದ್ದು, ಒಕ್ಕೂಟ ವ್ಯವಸ್ಥೆಯನ್ನು ಗೌರವಿಸಬೇಕು. ತಾರತಮ್ಯ ಮಾಡಬಾರದು ಎಂದು ಸೂಚಿಸಿದೆ. ಇದನ್ನು ಸಿದ್ದರಾಮಯ್ಯ ರಾಷ್ಟ್ರಪತಿಯವರ ಗಮನಕ್ಕೆ ತಂದಿದ್ದಾರೆ.
ಸಂಜೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಭದ್ರಾ ಮೇಲ್ದಂಡೆ ಯೋಜನೆಯ 5,400 ಕೋಟಿ ರೂ.ಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು. 15ನೇ ಹಣಕಾಸು ಆಯೋಗದ ಮಧ್ಯಂತರ ಶಿಫಾರಸಿನಂತೆ 11 ಸಾವಿರ ಕೋಟಿ ರೂ.ಗಳನ್ನು ಮಂಜೂರು ಮಾಡಬೇಕು. ತೆರಿಗೆ ಹಂಚಿಕೆಯಲ್ಲಿ ರಾಜ್ಯಗಳಿಗೆ ಅನ್ಯಾಯವಾಗದಂತೆ 16ನೇ ಹಣಕಾಸು ಆಯೋಗದ ಶಿಫಾರಸಿನಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಲಿದ್ದಾರೆ. ದೆಹಲಿ ಭೇಟಿಯಲ್ಲಿರುವ ಸಿದ್ದರಾಮಯ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭೇಟಿಗೆ ಸಮಯ ಕೇಳಿದ್ದರು. ಆದರೆ ಪ್ರಧಾನಿ ಕಚೇರಿ ಸಕಾರಾತಕವಾಗಿ ಸ್ಪಂದಿಸಿಲ್ಲ ಎಂದು ದೂರುಗಳು ಕೇಳಿಬಂದಿವೆ.
- ಮರಕ್ಕೆ ಅಪ್ಪಳಿಸಿ ರಸ್ತೆ ವಿಭಜಕ ಹತ್ತಿ ನಿಂತ ಲಾರಿ, ತಪ್ಪಿದ ಅನಾಹುತ
- ಕಾಲ್ನಡಿಗೆಯಲ್ಲಿ ಗಸ್ತು ಕರ್ತವ್ಯ ನಿರ್ವಸುವಂತೆ ಪೊಲೀಸರಿಗೆ ಸೀಮಂತ್ಕುಮಾರ್ಸಿಂಗ್ ಸೂಚನೆ
- ಬೆಂಗಳೂರಲ್ಲಿ ಪುಂಡರ ಹಾವಳಿ ಹೆಚ್ಚಳ : ದೌರ್ಜನ್ಯ ಸಹಿಸುವುದಿಲ್ಲ ಎಂದ ಗೃಹ ಸಚಿವ ಪರಮೇಶ್ವರ್
- ಜು.7ರಂದು ಸಾಮೂಹಿಕ ಪ್ರತಿಭಟನೆಗೆ ಮಹಾನಗರ ಪಾಲಿಕೆಗಳ ನೌಕರರ ನಿರ್ಧಾರ
- ಸಿದ್ದರಾಮಯ್ಯನವರಿಗೆ ಕಿಂಚಿತ್ತಾದರೂ ಮಾನ-ಮರ್ಯಾದೆ ಇದ್ರೆ ತಕ್ಷಣವೇ ರಾಜೀನಾಮೆ ನೀಡಲಿ : ವಿಜಯೇಂದ್ರ ಸವಾಲು