ಬೆಂಗಳೂರು,ಜೂ.12- ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದಿಂದ ಹೊಸದಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
ಸಚಿವ ಸಂಪುಟ ವಿಶೇಷ ಸಭೆಯ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ 2015ರ ಏ.11 ರಿಂದ ಮೇ 30 ರವರೆಗೂ ನಡೆದಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಹತ್ತು ವರ್ಷ ಪೂರ್ಣಗೊಂಡಿದೆ. ಹಿಂದುಳಿದ ವರ್ಗಗಳ ಆಯೋಗದ ಅಧಿನಿಯಮದ ಪ್ರಕಾರ, ಸಮೀಕ್ಷೆ ನಡೆದು 10 ವರ್ಷದ ಬಳಿಕ ಪರಿಷ್ಕರಣೆಗೆ ಅವಕಾಶವಿದೆ. ಹೀಗಾಗಿ ಆಯೋಗದ ಸಲಹೆ ಪಡೆದು ಮರು ಸಮೀಕ್ಷೆ ನಡೆಸಲಾಗುವುದು ಎಂದು ಪ್ರಕಟಿಸಿದರು.
ಈ ಹಿಂದಿನ ವರದಿಗೆ 10 ವರ್ಷ ಪೂರ್ಣಗೊಂಡಿರುವುದರಿಂದ ಹೊಸ ಸಮೀಕ್ಷೆ ನಡೆಸಲು ಸಂಪುಟ ಸಭೆ ಸರ್ವಾನುಮತದಿಂದ ನಿರ್ಧರಿಸಿದೆ. ಹೈಕಮಾಂಡ್ ಕೂಡ ಇದಕ್ಕೆ ಸಲಹೆ ನೀಡಿದೆ ಎಂದರು.
ಕರ್ನಾಟಕ ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಈ ಹಿಂದೆ ಅಡ್ವಕೇಟ್ ಜನರಲ್ ಆಗಿದ್ದ ಮಧುಸೂದನ್ ನಾಯಕ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಸದಸ್ಯರನ್ನು 2-3 ದಿನಗಳಲ್ಲಿ ನೇಮಿಸಲಾಗುವುದು ಎಂದು ಹೇಳಿದರು. ಕೇಂದ್ರ ಸರ್ಕಾರ ಜನಗಣತಿಯ ಜೊತೆ ಜಾತಿಗಣತಿಯನ್ನು ನಡೆಸುವುದಾಗಿ ಹೇಳಿದೆ. ಆದರೆ ಎಲ್ಲಿಯೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುವುದಾಗಿ ಹೇಳಿಲ್ಲ. ನಮ ಸರ್ಕಾರ ಸಾಮಾಜಿಕ ನ್ಯಾಯಕ್ಕಾಗಿ ಈ ಸಮೀಕ್ಷೆ ನಡೆಸುತ್ತದೆ ಎಂದು ತಿಳಿಸಿದರು.
ಹೊಸ ಸಮೀಕ್ಷೆಯನ್ನು 90 ದಿನಗಳಲ್ಲಿ ಪೂರ್ಣಗೊಳಿಸಬೇಕು ಎಂದು ಆಯೋಗಕ್ಕೆ ಗಡುವು ನೀಡಲಾಗುವುದು. ನೆರೆಯ ತೆಲಂಗಾಣದಲ್ಲಿ 70 ದಿನಗಳಲ್ಲಿ ಸಮೀಕ್ಷೆ ನಡೆಸಿದೆ. ನಮಲ್ಲಿ ಸಮೀಕ್ಷೆಯನ್ನು 90 ದಿನಗಳಲ್ಲಿ ಪೂರೈಸಲು ಸಾಧ್ಯವಿದೆ ಎಂದರು. ಹತ್ತು ವರ್ಷದಲ್ಲಿ ಜನಗಣತಿ ಹೆಚ್ಚಾಗುತ್ತದೆ. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಬದಲಾವಣೆಗಳಾಗುತ್ತವೆ. ಆಯೋಗದ ಅಧಿನಿಯಮದಲ್ಲಿ ಹತ್ತು ವರ್ಷದ ಬಳಿಕ ಸಮೀಕ್ಷೆ ನಡೆಸಬೇಕು ಎಂಬುದು ಸ್ಪಷ್ಟವಾಗಿದೆ. ನಮ ಸರ್ಕಾರ ಕಾನೂನು ರೀತಿಯಲ್ಲಿ ನಿರ್ಧಾರ ತೆಗೆದುಕೊಂಡಿದೆ. ಹೈಕಮಾಂಡ್ ಸಲಹೆ ನೀಡಿದೆ. ಆದರೆ ಹೈಕಮಾಂಡ್ ನಿರ್ಧಾರಕ್ಕೆ ಮಣಿದಿಲ್ಲ. ಕಾನೂನು ರೀತಿಯ ಕ್ರಮ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.
ಬಿಜೆಪಿಯವರ ಆರೋಪಗಳು ಸಾಮಾನ್ಯ. ಅದನ್ನು ಆಧರಿಸಿ ನಾವು ನಿರ್ಧಾರ ತೆಗೆದುಕೊಳ್ಳಲಾಗುವುದಿಲ್ಲ. ಇಲ್ಲಿ ಲಿಂಗಾಯತ, ಒಕ್ಕಲಿಗ, ಹಿಂದುಳಿದ ವರ್ಗಗಳ ಜಾತಿಯ ವಿಚಾರದಲ್ಲಿ ಚರ್ಚೆಯಿಲ್ಲ. ನಿಯಮಾವಳಿಗಳನ್ನು ಮಾತ್ರ ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಇಲ್ಲಿ ಎಲ್ಲಾ ಜಾತಿಗಳ ಅಭಿಪ್ರಾಯಗಳು ಮುಖ್ಯವಾಗಿರುತ್ತದೆ ಎಂದರು. ಈ ಹಿಂದಿನ ವರದಿಯಲ್ಲಿನ ಶಿಫಾರಸ್ಸುಗಳ ಬಗ್ಗೆ ಪ್ರತಿಕ್ರಿಯಿಸದ ಮುಖ್ಯಮಂತ್ರಿಗಳು, ಹೊಸ ಸಮೀಕ್ಷೆಯ ಬಳಿಕ ನಿರ್ಧಾರಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಿದರು.
ಕಾಯ್ದೆಯಲ್ಲಿ ಸಾಮಾಜಿಕ ನ್ಯಾಯ ನೀಡಲು ಸೂಚಿಸಲಾಗಿದೆ. ಅದರಂತೆ ನಾವು ನಡೆದುಕೊಳ್ಳುತ್ತೇವೆ. ಖರ್ಚು ವೆಚ್ಚಗಳ ಬಗ್ಗೆ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಮತ್ತಿತರರು ಉಪಸ್ಥಿತರಿದ್ದರು.