Saturday, June 14, 2025
Homeರಾಜ್ಯಸಮಾಜಘಾತಕ ಶಕ್ತಿಗಳನ್ನು ಸಹಿಸುವುದಿಲ್ಲ : DGP ಸಲೀಂ ಎಚ್ಚರಿಕೆ

ಸಮಾಜಘಾತಕ ಶಕ್ತಿಗಳನ್ನು ಸಹಿಸುವುದಿಲ್ಲ : DGP ಸಲೀಂ ಎಚ್ಚರಿಕೆ

ಬೆಂಗಳೂರು,ಜೂ.13- ಕರಾವಳಿ ಪ್ರದೇಶಗಳಲ್ಲಿ ಶಾಂತಿ ಪಾಲನೆಗೆ ಪೊಲೀಸ್‌‍ ವ್ಯವಸ್ಥೆ ಸಿದ್ಧವಿದೆ. ಸಮಾಜಘಾತುಕ ಶಕ್ತಿಗಳನ್ನು ಸಹಿಸುವುದಿಲ್ಲ ಎಂದು ಪೊಲೀಸ್‌‍ ಮಹಾ ನಿರ್ದೇಶಕ ಎಂ.ಎ.ಸಲೀಂ ಎಚ್ಚರಿಕೆ ನೀಡಿದರು. ಕೋಮು ಸಂಘರ್ಷ ನಿಗ್ರಹಕ್ಕಾಗಿ ನೂತನವಾಗಿ ಆರಂಭಿಸಲಾಗಿರುವ ವಿಶೇಷ ಕಾರ್ಯಪಡೆಯ ಉದ್ಘಾಟನಾ ಸಮಾರಂಭ ಮಂಗಳೂರಿನ ಎಸ್‌‍ಎಎಫ್‌ ಕಚೇರಿಯಲ್ಲಿಂದು ನಡೆಯಿತು.ಪ್ರಾಸ್ತಾವಿಕ ಮಾತುಗಳನ್ನಾಡಿದ ಪೊಲೀಸ್‌‍ ಮಹಾನಿರ್ದೇಶಕರು, ಕರಾವಳಿ ಜಿಲ್ಲೆಗಳಲ್ಲಿ ಪೊಲೀಸ್‌‍ ಬೆಳವಣಿಗೆ ಅಪಾರವಾಗಿದೆ, ಹೆಚ್ಚುವರಿಯಾಗಿ ಇಂದು ಕೋಮು ಹಿಂಸೆ ನಿಗ್ರಹ ವಿಶೇಷ ಪಡೆಯನ್ನು ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಆರಂಭಿಸಲಾಗುತ್ತಿದೆ ಎಂದು ಹೇಳಿದರು.

ಈ ಕಾರ್ಯಕ್ರಮ ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತಲಾ ಒಂದು ಕಂಪನಿಯಂತೆ ಮೂರು ಕಂಪನಿಗಳಿರಲಿದ್ದು ಪ್ರತಿ ಕಂಪನಿಯಲ್ಲಿ 26 ಅಧಿಕಾರಿಗಳು ಮತ್ತು ಸಿಬ್ಬಂದಿಗಳಿರಲಿದ್ದು, ಪಶ್ಚಿಮ ವಲಯ ಐಜಿಪಿ ಮುಖ್ಯಸ್ಥಿಕೆಯಲ್ಲಿ 1 ಎಸ್ಪಿ, 1 ಡಿವೈಎಸ್ಪಿ, 1 ಸಹಾಯಕ ಕಮಾಂಡೆಂಟ್‌, 4 ಟಿಐ, 4 ಆರ್‌ಪಿಐ, 14 ಪಿಎಸ್‌‍ವೈ ಅಥವಾ ಆರ್‌ಎಸ್‌‍ಐಗಳು, 210 ಪೊಲೀಸ್‌‍ ಸಿಬ್ಬಂದಿಗಳು ಸೇರಿ ಒಟ್ಟು 288 ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆ ನಡೆಸಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಖ್ಯೆಯಲ್ಲಿ ಸಿಬ್ಬಂದಿಗಳನ್ನು ಹೆಚ್ಚಿಸಲಾಗುವುದು ಎಂದರು.

ಮತೀಯ ಸಂಬಂಧಿತ ಧೋರಣೆ ಹಾಗೂ ಚಟುವಟಿಕೆಗಳ ಮೇಲೆ ನಿಗಾ ಇರಿಸುವುದು, ಸ್ಥಳೀಯ ಪೊಲೀಸರಿಗೆ ಸಹಾಯ ಮಾಡುವುದು, ಸೂಕ್ಷ್ಮ ಪ್ರದೇಶಗಳಲ್ಲಿ ಜನರಲ್ಲಿ ಆತವಿಶ್ವಾಸ ಹೆಚ್ಚಿಸುವುದು, ಮತೀಯ ಗಲಭೆ ಹಾಗೂ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ನಿಭಾಯಿಸಲು ಪಶ್ಚಿಮ ವಲಯ ಐಜಿಪಿಯವರು ಈ ಪಡೆಯನ್ನು ನಿಯೋಜಿಸುವ ಅಧಿಕಾರ ಹೊಂದಿದ್ದಾರೆ ಎಂದು ಹೇಳಿದರು. ಗುಪ್ತದಳ ಮಾಹಿತಿ ಸಂಗ್ರಹಣೆ, ಸಮುದಾಯಗಳ ನಡುವೆ ವಿಶ್ವಾಸ ಮೂಡಿಸುವುದು, ಕಾನೂನು ಚೌಕಟ್ಟಿನಲ್ಲಿ ನಡೆದುಕೊಳ್ಳಲು ಜನರನ್ನು ಪ್ರೇರೇಪಿಸುವುದು ಸೇರಿದಂತೆ ಅನೇಕ ಜವಾಬ್ದಾರಿಗಳನ್ನು ನೂತನ ಪಡೆಗೆ ವಹಿಸಲಾಗಿದೆ ಎಂದರು.

RELATED ARTICLES

Latest News