ತುಮಕೂರು, ಜೂ.30- ಕೊಬ್ಬರಿಗೆ ಶುಕ್ರದೆಸೆ ತಿರುಗಿದ್ದು, ನಾಗಾಲೋಟದಲ್ಲಿ ಬೆಲೆ ಏರಿಕೆಯಾಗುತ್ತಿದ್ದು, ಕ್ವಿಂಟಾಲ್ಗೆ ಬರೋಬ್ಬರಿ 30 ಸಾವಿರ ರೂ. ದಾಟಿದೆ.ಏಷ್ಯಾದಲ್ಲೇ ಅತೀ ದೊಡ್ಡ ಮಾರುಕಟ್ಟೆಯಾದ ಕಲ್ಪತರು ನಾಡಿನ ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿ 29,118 ರೂ.ಗೆ ಮಾರಾಟವಾಗಿದೆ.
ಅದೇ ರೀತಿ ನೆರೆಯ ಹಾಸನ ಜಿಲ್ಲೆಯ ಅರಸೀಕೆರೆ ಮಾರುಕಟ್ಟೆಯಲ್ಲಿ ಕ್ವಿಂಟಾಲ್ಗೆ 30,500 ರೂ.ಗೆ ಮಾರಾಟವಾಗಿದ್ದು, ದಾಖಲೆ ನಿರ್ಮಿಸಿದೆ.ಕೊಬ್ಬರಿ ಬೆಲೆ ಏರಿಕೆಯಿಂದ ಬೆಳೆಗಾರರಿಗೆ ಸಂತಸ ತಂದಿದ್ದರೆ, ಗ್ರಾಹಕರಿಗೆ ಬೆಲೆಬಿಸಿ ತಟ್ಟಿದೆ. ಕೇವಲ ಕೊಬ್ಬರಿ ಮಾತ್ರ ಏರಿಕೆಯಾಗುತ್ತಿಲ್ಲ.
ತೆಂಗಿನಕಾಯಿ, ಎಳನೀರು ಬೆಲೆಯಲ್ಲೂ ಸಹ ಗಣನೀಯವಾಗಿ ಏರುತ್ತಲೇ ಇದ್ದು, ಮಾರುಕಟ್ಟೆಯಲ್ಲಿ ದುಡ್ಡು ಕೊಟ್ಟರೂ ಕಾಯಿ ಸಿಗದಂತಾಗಿದೆ.ಹೆಚ್ಚಾಗಿ ತೆಂಗು ಬೆಳೆಯುವ ತುಮಕುರು ಜಿಲ್ಲೆಯಲ್ಲೇ 50 ರೂ.ಗೆ ಒಂದು ತೆಂಗಿನಕಾಯಿ ಮಾರಾಟವಾಗುತ್ತಿದ್ದರೆ, ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಒಂದು ಕಾಯಿಗೆ 70 ರೂ. ತಲುಪಿದ್ದು, ಇತ್ತ ಎಳನೀರು ಬೆಲೆಯೂ ಸಹ ಗಗನಕ್ಕೇರಿದೆ.
ಮಂಡ್ಯ, ಮದ್ದೂರು, ತುಮಕೂರು ಭಾಗದಿಂದ ಅಪಾರ ಪ್ರಮಾಣದ ಎಳನೀರು ಬೆಂಗಳೂರಿಗೆ ಬರುತ್ತಿತ್ತು. ಆದರೆ ಇಳುವರಿ ಕುಂಠಿತವಾದ್ದರಿಂದ ಕಡಿಮೆ ಪ್ರಮಾಣದಲ್ಲಿ ಮಾಲು ಬರುತ್ತಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ. ತಮಿಳುನಾಡು ಹಾಗೂ ಕೇರಳದಿಂದ ಹಳದಿ ಬಣ್ಣದ ಎಳನೀರು ಬೆಂಗಳೂರು ಮಾರುಕಟ್ಟೆಗೆ ಬರುತ್ತಿವೆ. ಬೆಂಗಳೂರಿನಲ್ಲಿ ಕಣ್ಣಾಯಿಸಿದ ಕಡೆಯೆಲ್ಲಾ ಎಳನೀರು ಅಂಗಡಿಗಳು ಕಾಣುತ್ತಿದ್ದವು. ಆದರೆ ಈಗ ಕೆಲವೇ ಕೆಲವು ಜಾಗಗಳಲ್ಲಿ ಮಾತ್ರ ಎಳನೀರು ಮಾರಾಟವಾಗುತ್ತಿದೆ.
ಕೊಬ್ಬರಿ ಬೆಲೆ ಏರಿಕೆಯಾಗುತ್ತಲೇ ಇರುವುದರಿಂದ ಕೊಬ್ಬರಿ ಎಣ್ಣೆ ಧಾರಣೆಯೂ ಕೂಡ ಹೆಚ್ಚಾಗಿದೆ. ಕಳೆದ ಆರು ತಿಂಗಳ ಹಿಂದೆ ಕೆಜಿಗೆ 200 ರೂ. ನಂತೆ ಆಯಿಲ್ ಮಿಲ್ಗಳಲ್ಲಿ ಮಾರಾಟವಾಗುತ್ತಿತ್ತು. ಪ್ರಸ್ತುತ 580 ರಿಂದ 600 ರೂ.ಗೆ ಮಾರಾಟವಾಗುತ್ತಿದೆ.
ಬೆಲೆ ಏರಿಕೆಗೆ ಕಾರಣ :
ಕಳೆದ ಕೆಲವು ವರ್ಷಗಳಿಂದ ಬೆಲೆ ಕುಸಿತದಿಂದ ಕಂಗಾಲಾಗಿದ್ದ ತೆಂಗು ಬೆಳೆಗಾರರು ಅಡಿಕೆಯತ್ತ ಒಲವು ತೋರಿದ್ದು, ತೆಂಗು ಬೆಳೆಯುವ ಪ್ರದೇಶವನ್ನು ಅಡಿಕೆ ಆವರಿಸಿಕೊಂಡಿರುವ ಹಿನ್ನೆಲೆಯಲ್ಲಿ ಉತ್ಪಾದನೆ ಕುಂಠಿತವಾಗಿದೆ. ಜೊತೆಗೆ ರೋಗಬಾಧೆಯಿಂದಲೂ ಸಹ ಇಳುವರಿ ಕುಂಠಿತವಾಗಿ ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಮಾಲು ಬಾರದಿರುವುದರಿಂದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವ್ಯಾಪಾರಿ ಮಲ್ಲಣ್ಣ ತಿಳಿಸಿದ್ದಾರೆ.
ತೆಂಗಿನಚಿಪ್ಪಿಗೂ ಬಂತು ಬೇಡಿಕೆ :
ಕೊಬ್ಬರಿ, ತೆಂಗಿನಕಾಯಿ, ಎಳನೀರು ಬೆಲೆ ಏರಿಕೆ ನಡುವೆ ತೆಂಗಿನಚಿಪ್ಪಿನ ಬೆಲೆಯೂ ಕೂಡ ಏರುತ್ತಲೇ ಇದ್ದು, ಅದೂ ಕೂಡ ದಾಖಲೆ ನಿರ್ಮಿಸಿದೆ.ಸಾಧಾರಣವಾಗಿ ತೆಂಗಿನಚಿಪ್ಪನ್ನು ಉರುವಲಿಗೆ ಬಳಸಲಾಗುತ್ತದೆ. ಆದರೆ ಇತ್ತೀಚೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿಪ್ಪಿಗೆ ಭಾರೀ ಮೌಲ್ಯ ಬಂದಿದೆ. ಕಳೆದ ಜನವರಿ, ಫೆಬ್ರವರಿ ತಿಂಗಳಿನಲ್ಲಿ ಕೆಜಿಗೆ 8 ರಿಂದ 10 ರೂ.ಗೆ ಮಾರಾಟವಾಗುತ್ತಿದ್ದ ಚಿಪ್ಪು ಈಗ ಟನ್ಗೆ 25 ಸಾವಿರ ರೂ. ದಾಟಿದೆ.ತೆಂಗಿನಚಿಪ್ಪನ್ನು ಸೌಂದರ್ಯವರ್ಧಕ ಉತ್ಪನ್ನಗಳ ತಯಾರಿಕೆ, ಇದ್ದಿಲು, ಕರಕುಶಲ ವಸ್ತುಗಳ ತಯಾರಿಕೆಗೆ ಬಳಸಲಾಗುತ್ತಿದ್ದು, ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಚಿಪ್ಪಿಗೂ ಕೂಡ ಉತ್ತಮ ಬೆಲೆ ಬಂದಿದೆ.