ಬೆಂಗಳೂರು, ಮೇ 31- ಹೊಸಕೆರೆಹಳ್ಳಿ ಜಂಕ್ಷನ್ ಮೇಲ್ಸೇತುವೆ ಕಾಮಗಾರಿಯನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಲು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಇಂದಿಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಇಂದು ಪರಿಶೀಲನೆ ನಡೆಸಿ, ಹೊರ ವರ್ತುಲ ರಸ್ತೆಯ ಪಿಇಎಸ್ ಕಾಲೇಜು ಬಳಿಯ ಹೊಸಕೆರೆಹಳ್ಳಿ ಜಂಕ್ಷನ್ ನಲ್ಲಿ ಕೈಗೆತ್ತಿಕೊಂಡಿರುವ ಮೇಲ್ಸೇತುವೆ ಕಾಮಗಾರಿಗೆ ವೇಗ ನೀಡಿ 3 ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು. ಹೊಸರೆರೆಹಳ್ಳಿ ಜಂಕ್ಷನ್ ನಲ್ಲಿ 500 ಮೀ. ಉದ್ದದ ಮೇಲ್ಸೇತುವೆ ಕಾಮಗಾರಿ ಪ್ರಗತಿಯಲ್ಲಿದ್ದು, ಈಗಾಗಲೇ ಶೇ. 75 ರಷ್ಟು ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ.
ಇನ್ನು ಒಂದು ಭಾಗದಲ್ಲಿ ಡೌನ್ ರ್ಯಾಂಪ್ ಕಾಮಗಾರಿ ಪ್ರಗತಿಯಲಿದ್ದು, ಸರ್ವೀಸ್ ರಸ್ತೆಯ ಅಗಲೀಕರಣ ಮಾಡುವ ವಿಚಾರವಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಿಕೊಂಡು ಸಂಚಾರ ಪೊಲೀಸ್ ವಿಭಾಗದ ಜೊತೆ ಮಾತನಾಡಿ ತ್ವರಿತಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಾಯಂಡಹಳ್ಳಿ ಜಂಕ್ಷನ್ ಪರಿಶೀಲನೆ:ನಾಯಂಡಹಳ್ಳಿ ಜಂಕ್ಷನ್ ಬಳಿಯ ಸರ್ವೀಸ್ ರಸ್ತೆಯಲ್ಲಿ ಬರುವ ಪಾದಚಾರಿ ಮಾರ್ಗವನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ಅನುಪಯುಕ್ತ ವಸ್ತುಗಳಿರುವುದನ್ನು ಕಂಡು ಅದನ್ನು ಕೂಡಲೆ ತೆರವು ಮಾಡಲು ಸೂಚಿಸಿದರು. ಆ ಬಳಿಕ ಮೇಲ್ಸೇತುವೆಯ ಕೆಳಭಾಗದಲ್ಲಿ ಅನಧಿಕೃತವಾಗಿ ಪಾರ್ಕಿಂಗ್ ಮಾಡಿರುವುದನ್ನು ಕಂಡು ಅದನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವುವಾಗುವಂತೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇನ್ನು ನಾಯಂಡಹಳ್ಳಿ ಜಂಕ್ಷನ್ ಬಳಿ ವೃಷಭಾವತಿ ವ್ಯಾಲಿ ಮೇಲ್ಬಾಗದಲ್ಲಿ ಹೆಚ್ಚುವರಿಯಾಗಿ ಬ್ರಿಡ್ಜ್ ವೆಂಟ್ ನಿರ್ಮಿಸುವ ವಿಚಾರವಾಗಿ, ವರ್ಲ್್ಡ ಬ್ಯಾಂಕ್ ನಿಂದ ನೀಡುತ್ತಿರುವ ಅನುದಾನದಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಸಂಬಂಧ ಅನುದಾನ ಬಂದ ಕೂಡಲೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿಕೊಂಡು ಕಾಮಗಾರಿಯನ್ನು ಪ್ರಾರಂಭಿಸಿ ನಿಗದಿತ ಸಮಯದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜಕಾಲುವೆ ಹಾಗೂ ಸೈಡ್ ಡ್ರೆನ್ಗಳಲ್ಲಿ ಹೂಳು ಸ್ವಚ್ಛಗೊಳಿಸಿ ಸರಾಗವಾಗಿ ನೀರು ಹೋಗುವ ವ್ಯವಸ್ಥೆ ಮಾಡಲು ನಿರ್ದೇಶನ ನೀಡಿದರು. ನಾಯಂಡಹಳ್ಳಿ ಜಂಕ್ಷನ್ ಬಳಿ ರಾಜಕಾಲುವೆ ಪಕ್ಕದಲ್ಲಿರುವ ಖಾಲಿ ಜಾಗವು ಪಾಲಿಕೆಯದ್ದಾಗಿದ್ದರೆ ಅದನ್ನು ಸ್ವಚ್ಛಗೊಳಿಸಿ ಸುಂದರೀರಣ ಮಾಡಲು ಸೂಚಿಸಿದರು.
ಸೀವೇಜ್ ಲೈನ್ ಸೋರಿಕೆಯನ್ನು ತಪ್ಪಿಸಿ:ವೃಷಭಾವತಿ ವ್ಯಾಲಿಯಲ್ಲಿ ದೊಡ್ಡದಾದ ಸೀವೇಜ್ ಪೈಪ್ ಲೈನ್ ಆದು ಹೋಗುತ್ತಿದ್ದು, ಪೈಪ್ ಲೈನ್ ನಿಂದ ಸೋರಿಕೆ ಆಗುತ್ತಿರುವುದನ್ನು ಗಮನಿಸಿ ಕೂಡಲೆ ಜಲಮಂಡಳಿ ಅಧಿಕಾರಿಗಳ ಜೊತೆ ಮಾತನಾಡಿ ಸೀವೇಜ್ ರಾಜಕಾಲುವೆಗೆ ಹೋಗದಂತೆ ಸೋರಿಕೆಯನ್ನು ತಡೆಯಲು ಅಧಿಕಾರಿಗಳಿಗೆ ಸೂಚಿಸಿದರು.
ಗೋಪಾಲನ್ ಆರ್ಚ್ ಬಳಿಯ ಮೇಲ್ಸೇತುವೆ ಪರಿಶೀಲನೆ: ಮೈಸೂರು ರಸ್ತೆ ಗೋಪಾಲನ್ ಆರ್ಚ್ ಬಳಿ ಮೇಲ್ಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಸದ್ಯ 33 ಆಸ್ತಿಗಳ ಭೂಸ್ವಾಧೀನ ಪ್ರಕ್ರಿಯಿಂದಾಗಿ ಕಾಮಗಾರಿ ಸ್ಥಗಿತವಾಗಿರುತ್ತದೆ. ಈ ಸಂಬಂಧ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಇತ್ಯರ್ಥಮಾಡಿಕೊಂಡು ಕಾಮಗಾರಿಯನ್ನು ಪುನರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ಸ್ಥಳದಲ್ಲಿ ರಾಜಕಾಲುವೆ ಒತ್ತುವರಿ ಆಗಿದಿಯೇ ಇಲ್ಲವೇ ಎಂದು ಸರ್ವೇ ಮಾಡಿ, ಒತ್ತುವರಿಯಾಗಿದ್ದರೆ ಕೂಡಲೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲು ರಾಜಕಾಲುವೆ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.
ಬಿಹೆಚ್ಇಎಲ್ ಜಂಕ್ಷನ್ ಪರಿಶೀಲನೆ:
ಮೈಸೂರು ರಸ್ತೆ ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದ ಬಳಿ ಇರುವ ಬಿಹೆಚ್ಇಎಲ್ ಜಂಕ್ಷನ್ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡು, ಸ್ಥಳ ಪರಿಶೀಲನೆ ನಡೆಸಿ ಶೀಘ್ರಗತಿಯಲ್ಲಿ ಬಾಕಿಯಿರುವ ಕಾಮಗಾರಿಯನ್ನು ಪೂರ್ಣಗೊಳುಸಲು ಸೂಚಿಸಿದರು. ಈ ವೇಳೆ ವಲಯ ಆಯುಕ್ತರಾದ ಸತೀಶ್, ಮುಖ್ಯ ಅಭಿಯಂತರರಾದ ಲೋಕೇಶ್, ರಾಜೇಶ್, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.