Friday, September 20, 2024
Homeರಾಜ್ಯಬಿಜೆಪಿ ಅವಧಿ ಹಗರಣಗಳ ತನಿಖೆ ಶೀಘ್ರ ಸಮಿತಿ ಸಭೆ : ಡಾ.ಜಿ.ಪರಮೆಶ್ವರ್

ಬಿಜೆಪಿ ಅವಧಿ ಹಗರಣಗಳ ತನಿಖೆ ಶೀಘ್ರ ಸಮಿತಿ ಸಭೆ : ಡಾ.ಜಿ.ಪರಮೆಶ್ವರ್

Committee meeting soon for Investigation of BJP scams

ಬೆಂಗಳೂರು, ಸೆ.11- ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಎಲ್ಲಾ ಹಗರಣಗಳನ್ನು ಪರಿಶೀಲನೆ ನಡೆಸಿ, ಸಚಿವ ಸಂಪುಟಕ್ಕೆ ವರದಿ ನೀಡಲು ರಚಿಸಲಾಗಿರುವ ಸಮಿತಿಯ ಸಭೆಯನ್ನು ಶೀಘ್ರವೇ ನಡೆಸುವುದಾಗಿ ಗೃಹ ಸಚಿವ ಡಾ. ಜಿ ಪರಮೆಶ್ವರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಮತ್ತು ತನಿಖಾ ಸಂಸ್ಥೆಗಳ ಹಂತದಲ್ಲಿ ಚಾಲ್ತಿಯಲ್ಲಿರುವ ವಿವಿಧ ಹಗರಣಗಳ ತನಿಖೆ ಪ್ರಗತಿ, ಸಮನ್ವಯ ಮುಂತಾದ ಕಾರ್ಯ ಗಳಿಗೆ ಕ್ರಮವಹಿಸಲು ತಮ ನೇತೃತ್ವದಲ್ಲಿ ಇತರ ನಾಲ್ವರ ಸಚಿವರನ್ನೊಳಗೊಂಡ ಸಮಿತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ರಚಿಸಿದ್ದಾರೆ.

ಸಮಿತಿಯ ಸಭೆ ಇನ್ನೊಂದು ವಾರದೊಳಗಾಗಿ ನಡೆಯಲಿದೆ ಎಂದು ಹೇಳಿದರು.ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಹಗರಣಗಳನ್ನು ಗುರುತಿಸಿ, ಪಟ್ಟಿ ಮಾಡಲಾಗಿದೆ. ಕೆಲವು ತೀರ್ಮಾನವಾಗಿದ್ದು, ಇನ್ನೂ ಕೆಲವು ಬಾಕಿ ಇವೆ. ವಿವಿಧ ಹಂತಗಳಲ್ಲಿರುವ ಅವುಗಳನ್ನು ಪರಿಶೀಲಿಸಿ ಸಚಿವ ಸಂಪುಟ ಸಭೆಗೆ ವರದಿ ನೀಡಲಾಗುವುದು. ಸಚಿವ ಸಂಪುಟ ಸಭೆಯೇ ಹಿಂದಿನ ಸರ್ಕಾರದ ಹಗರಣಗಳ ತನಿಖೆಯನ್ನು ನೇರ ನಿಗಾವಣೆ ವಹಿಸಬೇಕೆಂದು ಚರ್ಚಿಸಿ ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಮಿತಿ ರಚಿಸಲಾಗಿದೆ ಎಂದರು.

ಬಹಳಷ್ಟು ಪ್ರಕರಣಗಳು ದೂಳು ಹಿಡಿದಿವೆ. ಈಗಾಗಲೇ ಇಲಾಖಾವಾರು ವಿಚಾರಣೆ ನಡೆಯುತ್ತಿದೆ. ಪೊಲೀಸ್ ಇಲಾಖೆಯಲ್ಲಿ ಬಾಕಿಯಿರುವ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ತಾವು ಸೂಚನೆ ನೀಡಿದ್ದು, ಪ್ರತಿ ಮೂರು ತಿಂಗಳಿಗೊಮೆ ಪ್ರಗತಿ ಪರಿಶೀಲನೆ ನಡೆಸುವಾಗ ಬಾಕಿ ಪ್ರಕರಣಗಳನ್ನು ಗಮನಿಸಲಾಗುತ್ತಿದೆ ಎಂದು ಹೇಳಿದರು.
ಸಮಿತಿ ರಚನೆಯನ್ನು ದ್ವೇಷದ ರಾಜಕಾರಣ ಎಂದು ಬಿಜೆಪಿ ನಾಯಕರು ಟೀಕೆ ಮಾಡುತ್ತಾರೆ, ಅದು ಅವರ ಹಕ್ಕು. ಆಡಳಿತ ಮಾಡುವ ನಮಗೆ ಹೆಚ್ಚಿನ ಜವಾಬ್ದಾರಿ ಇದೆ. ಜನರಿಗೆ ನಾವು ಉತ್ತರ ನೀಡಬೇಕು. ಹೀಗಾಗಿ ನಮ ಕೆಲಸವನ್ನು ನಾವು ಮಾಡುತ್ತೇವೆ ಎಂದರು.

ಮಹರ್ಷಿ ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಹಣ ವರ್ಗಾವಣೆ ಪ್ರಕರಣದಲ್ಲಿ ಸಚಿವ ನಾಗೇಂದ್ರ ಅವರ ಪಾತ್ರ ಇಲ್ಲ ಎಂದು ನಾವು ಹೇಳಿದ್ದೇವೆ. ತನಿಖೆ ನಡೆಸಿದ ಕೇಂದ್ರ ಸರ್ಕಾರದ ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದೆ. ತನಿಖಾ ಸಂಸ್ಥೆ ನಾಗೇಂದ್ರ ಅವರ ಪಾತ್ರ ಇದೆ ಎಂದು ಹೇಳಿದೆ. ಆದರೆ ಅಂತಿಮವಾಗಿ ಆರೋಪವನ್ನು ಸಾಬೀತುಪಡಿಸಬೇಕಿದೆ ಎಂದರು.

ಹಲವಾರು ಬಾರಿ ನಾವು ಹೇಳಿದಕ್ಕೆ ಸಾಕ್ಷ್ಯ ಸಿಕ್ಕಿರುವುದಿಲ್ಲ, ಹಲವು ಬಾರಿ ಅವರು ಹೇಳಿರುವುದಕ್ಕೂ ಸಾಕ್ಷ್ಯ ಸಿಕ್ಕಿರುವುದಿಲ್ಲ. ಇದೇ ಹಗರಣದಲ್ಲಿ ಎಸ್ಐಟಿ ನಡೆಸಿರುವ ತನಿಖೆಯ ಆದ್ಯತೆಯೇ ಬೇರೆ, ಇಡಿ ತನಿಖೆಯ ಆದ್ಯತೆಯೇ ಬೇರೆ. ಎರಡು ತನಿಖೆಗಳು ನಡೆಯಲಿದ್ದು, ಅಂತಿಮವಾಗಿ ಎರಡನ್ನು ಪರಿಗಣಿಸಲಾಗುವುದು. ಎರಡು ತನಿಖಾ ಸಂಸ್ಥೆಗಳು ಒಂದೇ ಪ್ರಕರಣದ ವಿಚಾರಣೆ ನಡೆಸಿದಾಗ ಭಿನ್ನ ರೀತಿಯ ಮಾಹಿತಿಗಳು ಹೊರಬರುತ್ತವೆ ಎಂದು ಹೇಳಿದರು.

ಮುಖ್ಯಮಂತ್ರಿ ಬದಲಾವಣೆಯ ವಿಚಾರವಾಗಿ ಅನಗತ್ಯ ಹೇಳಿಕೆಗಳು ಬರುತ್ತಿರುವುದು ಸರಿಯಲ್ಲ. ನಮಗೆ ಜನ ಮತ ನೀಡಿ ಗೆಲ್ಲಿಸಿದ್ದಾರೆ. ಉತ್ತಮ ಆಡಳಿತ ನಡೆಸುವತ್ತಾ ಗಮನ ಹರಿಸಬೇಕು. ಬಿಜೆಪಿ ಅವರು ಸರ್ಕಾರ ಅಸ್ಥಿರಗೊಳಿಸುವ ಅಥವಾ ಜನಪರ ಯೋಜನೆಗಳ ಅನುಷ್ಠಾನವನ್ನು ತಡೆಯುವ ಹುನ್ನಾರ ನಡೆಸಿದ್ದಾರೆ. ಇದನ್ನು ಬದಿಗೊತ್ತಿ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಪ್ರಸ್ತುತ ದಿನಗಳಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಕೇಳಿ ಬರುತ್ತಿರುವ ಹೇಳಿಕೆಗಳ ಕುರಿತು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿದೇಶದಿಂದ ವಾಪಸ್ ಬಂದ ಬಳಿಕ ಕ್ರಮ ಕೈಗೊಳ್ಳಬಹುದು ಎಂದರು.
ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂಬುದು ಕೆಲವರ ವೈಯಕ್ತಿಕ ಅಭಿಪ್ರಾಯ ಎಂದ ಪರಮೇಶ್ವರ್, ಪಡಿತರ ಚೀಟಿಗಳನ್ನು ಕಡಿತ ಮಾಡುವುದು ಸರ್ಕಾರದ ಉದ್ದೇಶವಲ್ಲ.

ಆದಾಯ ಪಾವತಿ ಮಾಡುವವರು ಬಡವರಿಗೆ ತಲುಪಬೇಕಾದ ಯೋಜನೆಗಳಿಗೆ ಸುಳ್ಳು ದಾಖಲೆ ಸಲ್ಲಿಸಿ, ಫಲಾನುಭವಿಗಳಾಗುವುದು ಸರಿಯಲ್ಲ. ಅಂತವರ ಸೌಲಭ್ಯಗಳನ್ನು ಕಡಿತ ಮಾಡುವುದು ತಪ್ಪಲ್ಲ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಏನೇನೊ ಹೇಳುತ್ತಾರೆ. ಅದನ್ನು ಬಿಟ್ಟು ರಾಜ್ಯದ ಅಭಿವೃದ್ಧಿಗೆ ದೊಡ್ಡ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.

ಅಮೆರಿಕಾದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ಗಾಂಧಿ ಮತ್ತು ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಪರಸ್ಪರ ಭೇಟಿಯಾಗಿರುವುದು ಆಕಸಿಕ. ಫೋಟೋ ನೋಡಿ ನನಗೆ ಖುಷಿಯಾಯಿತು. ಒಂದೇ ಹೋಟೆಲ್ನಲ್ಲಿದ್ದಾರೆ, ಪರಸ್ಪರ ಎದುರಾದಾಗ ಮಾತನಾಡಿಸದೆ ಓಡಿಹೋಗಲು ಸಾಧ್ಯವೇ? ಎಂದು ಪ್ರಶ್ನಿಸಿದರು.

RELATED ARTICLES

Latest News