ಬೆಂಗಳೂರು,ಜೂ.23– ವಸತಿ ಮನೆಗಳ ಮಂಜೂರಾತಿಗೆ ಲಂಚ ಪಡೆಯುತ್ತಿರುವ ಪ್ರಕರಣವನ್ನು ವಿಶೇಷ ತನಿಖಾ ದಳದ ಮೂಲಕ ವಿಚಾರಣೆಗೊಳಪಡಿಸಲು ಆದೇಶಿಸಬೇಕು ಮತ್ತು ಆರೋಪಕ್ಕೆ ಗುರಿಯಾಗಿರುವ ಸಚಿವರ ವಿರುದ್ಧ ಅಭಿಯೋಜನೆಗೆ ಅವಕಾಶ ನೀಡಬೇಕು ಎಂದು ರಾಜ್ಯಪಾಲರಿಗೆ ದೂರು ನೀಡಲಾಗಿದೆ.
ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ಅವರು ರಾಜಪಾಲ ಥಾವರ್ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದ್ದು, ಶಾಸಕ ಹಾಗೂ ರಾಜ್ಯನೀತಿ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.
ಲಂಚ ನೀಡಿದವರಿಗಷ್ಟೇ ಮನೆ ನೀಡಲಾಗುತ್ತಿದೆ ಎಂದು ಶಾಸಕರು ಹೇಳಿಕೆ ನೀಡಿದ್ದಾರೆ. ಇದು ನಿಜವೇ ಆಗಿದ್ದರೆ ಸಂವಿಧಾನದ ಉಲ್ಲಂಘನೆ ಮತ್ತು ಸಾರ್ವಜನಿಕ ಹಕ್ಕುಗಳ ಹರಣವಾಗುತ್ತದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಗಂಭೀರ ಸ್ವರೂಪದ ಅಪರಾಧವಾಗಿದೆ ಎಂದಿದ್ದಾರೆ.
ಬಡವರ ವಾಸಕ್ಕೆ ರಾಜೀವ್ ಗಾಂಧಿ ವಸತಿ ನಿಗಮ ಯೋಜನೆಯಡಿ ಮನೆಗಳನ್ನು ಮಂಜೂರು ಮಾಡಲು ಲಂಚ ಪಡೆಯುವುದಾದರೆ ನಾಗರಿಕರ ಹಕ್ಕುಗಳಿಗೆ ಧಕ್ಕೆಯಾಗುತ್ತದೆ. ರಾಜಕೀಯ ಪ್ರಭಾವ ಇಲ್ಲದ ಹಾಗೂ ಹಣ ನೀಡಲಾಗದವರು ವಸತಿ ಸೌಲಭ್ಯಗಳಿಂದ ವಂಚಿತರಾಗುತ್ತಾರೆ ಎಂದು ಹೇಳಿದ್ದಾರೆ.
ಹೀಗಾಗಿ ಭಾರತದ ಸಂವಿಧಾನ ಕಲಂ 153 ರಿಂದ 162 ಹಾಗೂ 163(1) ಅಡಿ ರಾಜ್ಯಪಾಲರು ಕ್ರಮ ತೆಗೆದುಕೊಳ್ಳಬೇಕು. ಸಚಿವರು ಸಾರ್ವಜನಿಕ ಹಿತಾಸಕ್ತಿಯ ವಿರುದ್ಧವಾಗಿ ನಡೆಯುತ್ತಿದ್ದು, ಹಣ ದುರುಪಯೋಗ, ಭ್ರಷ್ಟಾಚಾರದ ಆರೋಪಗಳಿಗೆ ಗುರಿಯಾಗಿದ್ದಾರೆ. ಅದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಒತ್ತಾಯಿಸಿದ್ದಾರೆ.
ಆರೋಪಗಳನ್ನು ಏಕಪಕ್ಷೀಯವಾಗಿ ನಿರಾಕರಿಸುವುದು ಅಥವಾ ರಾಜಕೀಯ ದೃಷ್ಟಿಕೋನದಿಂದ ನೋಡುವುದು ಸಾಂವಿಧಾನಿಕ ವಿರೋಧಿ ನಡೆಯಾಗಿದೆ. ಸರ್ಕಾರದ ಅಂಗ ಸಂಸ್ಥೆಗಳೇ ಭ್ರಷ್ಟಾಚಾರಕ್ಕೆ ಸಿಲುಕಿರುವ ಆರೋಕ್ಕೆ ಗುರಿಯಾಗಿವೆ. ಹೀಗಾಗಿ ಸ್ವತಂತ್ರ್ಯ ಹಾಗೂ ನ್ಯಾಯಾತಕ ತನಿಖೆಯ ಅಗತ್ಯವಿದೆ. ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಬಲ್ಲ ಎಸ್ಐಟಿಯನ್ನು ಲೋಕಾಯುಕ್ತದ ಮೇಲ್ವಿಚಾರಣೆಯಲ್ಲಿ ನಿಯೋಜಿಸಿ ತನಿಖೆ ನಡೆಸಬೇಕು. ಭ್ರಷ್ಟಾಚಾರದ ಆಳ ಹಾಗೂ ಹಸ್ತಕ್ಷೇಪಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
- ಬಂಜೆತನ ಸಮಸ್ಯೆಗಳಿಗೆ ಉಚಿತ ಮಾರ್ಗದರ್ಶನ ನೀಡಲು ಬಂತು ಟೋಲ್-ಫ್ರೀ ಸಂಖ್ಯೆ
- ರಾಜ್ಯದಲ್ಲಿ ಶೀಘ್ರವೇ ಜಲಾಶಯಗಳು ಭರ್ತಿ.!
- ಇರಾನ್-ಇಸ್ರೇಲ್ ಯುದ್ಧಕ್ಕೆ ಅಮೆರಿಕ ರಂಗಪ್ರವೇಶ ಬೆನ್ನಲ್ಲೇ ಜಾಗತಿಕ ಷೇರು ಮಾರುಕಟ್ಟೆ ತಲ್ಲಣ
- ಶಾಸಕರ ಅಸಮಾಧಾನ ಬಗೆಹರಿಸುವೆ:ಸಿಎಂ
- ಗುಜರಾತ್ ವಿಧಾನಸಭೆಉಪಚುನಾವಣೆ ಫಲಿತಾಂಶ : ಬಿಜೆಪಿ,ಎಎಪಿ ಸಮಬಲ