ನವದೆಹಲಿ, ಮೇ 11– ಪಹಲ್ಗಾಮ್ ಭಯೋತ್ಪಾದಕ ದಾಳಿ, ಆಪರೇಷನ್ ಸಿಂಧೂರ, ಭಾರತ ಮತ್ತು ಪಾಕ್ ನಡುವಿನ ಕದನ ವಿರಾಮ ಕುರಿತು ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ಕರೆಯಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಜೊತೆಗೆ ಸಂಸತ್ತಿನಲ್ಲಿ ವಿಶೇಷ ಅಧಿವೇಶನ ನಡೆಸಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಮ್ಮ ಎಕ್್ಸ ಖಾತೆಯಲ್ಲಿ ಆಗ್ರಹಿಸಿದ್ದಾರೆ. ಕೂಡಲೇ ಮೋದಿ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ಹಾಗೂ ಸಂಸತ್ನಲ್ಲಿ ವಿಶೇಷ ಅಧಿವೇಶನ ಕರೆದರೆ ಈ ಎಲ್ಲ ವಿಷಯಗಳ ಬಗ್ಗೆ ಸಮಗ್ರವಾಗಿ ಚರ್ಚಿಸಬಹುದು ಎಂದು ಹೇಳಿದ್ದಾರೆ.
ಮುಂದುವರಿದು ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮ ಕುರಿತ ಚರ್ಚೆಗೆ ತಟಸ್ಥ ವೇದಿಕೆಯ ಬಗ್ಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಪ್ರಸ್ತಾಪಿಸಿರುವುದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ ನಂಬುತ್ತದೆ. ನಾವು ಶಿಮ್ಲಾ ಒಪ್ಪಂದವನ್ನು ಕೈಬಿಟ್ಟಿದ್ದೇವೆಯೇ? 3ನೇ ವ್ಯಕ್ತಿಯ ಮಧ್ಯಸ್ಥಿಕೆಗೆ ಆಹ್ವಾನ ಕೊಟ್ಟಿದ್ದೇವೆ ಎಂಬ ಅನುಮಾನ ಮೂಡಿದೆ ಅಂತ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವೆ ರಾಜತಾಂತ್ರಿಕ ಮಾರ್ಗಗಳನ್ನು ಮತ್ತೆ ತೆರೆಯಲಾಗುತ್ತಿದೆಯೇ? ಎಂದು ಕಾಂಗ್ರೆಸ್ ಕೇಳಲು ಬಯಸುತ್ತದೆ. ನಾವು ಪಾಕಿಸ್ತಾನದಿಂದ ಯಾವ ಬದ್ಧತೆ ಬಯಸಿದ್ದೇವೆ, ಅದರಿಂದ ನಮಗೆ ಏನು ಸಿಕ್ಕಿದೆ? ಈ ಇಡೀ ಪರಿಸ್ಥಿತಿಯ ಕುರಿತು ದೇಶದ ಇಬ್ಬರು ಮಾಜಿ ಸೇನಾ ಮುಖ್ಯಸ್ಥರು ನೀಡಿದ ಹೇಳಿಕೆಗಳ ಬಗ್ಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಗಮನ ಸೆಳೆಯಲು ಬಯಸುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು, ಪ್ರಧಾನ ಮಂತ್ರಿಗಳೇ ಪ್ರತಿಕ್ರಿಯಿಸಬೇಕು ಎಂದು ಮನವಿ ಮಾಡಿದ್ದಾರೆ.
ಕೊನೆಯದ್ದಾಗಿ, 1971 ರಲ್ಲಿ ಇಂದಿರಾ ಗಾಂಧಿಯವರು ಪ್ರದರ್ಶಿಸಿದ ಅಸಾಧಾರಣ ದಿಟ್ಟ ಮತ್ತು ದೃಢನಿಶ್ಚಯದ ನಾಯಕತ್ವವನ್ನು ದೇಶವು ನೆನಪಿಸಿಕೊಳ್ಳುವುದು ಸ್ವಾಭಾವಿಕ ಎಂದು ರಾಷ್ಟ್ರೀಯ ಕಾಂಗ್ರೆಸ್ ನಂಬುತ್ತದೆ ಎಂದು ಜೈರಾಮ್ ರಮೇಶ್ ಬರೆದುಕೊಂಡಿದ್ದಾರೆ. ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ದಾಳಿ ಉದ್ದೇಶಿಸಿ ನಡೆದ ಮೊದಲ ಸರ್ವಪಕ್ಷ ಸಭೆ ಹಾಗೂ ಆಪರೇಷನ್ ಸಿಂಧೂರ ಬಗ್ಗೆ ನಡೆದ ಸರ್ವಪಕ್ಷ ಸಭೆಗಳಿಗೆ ಮೋದಿ ಗೈರಾಗಿದ್ದರು.