ಬೆಂಗಳೂರು,ಮೇ19- ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರೈಸುತ್ತಿದೆ. ನಾಳೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಎರಡು ವರ್ಷಗಳ ಸಂಭ್ರಮ ಆಚರಿಸುತ್ತಿದೆ. ಆದರೆ ವಿಪಕ್ಷವಾಗಿ ಬಿಜೆಪಿ ಕಳೆದ ಎರಡು ವರ್ಷಗಳಲ್ಲಿ ಮಾಡಿದ್ದೇನು? ಎಂಬ ಚರ್ಚೆಗಳು ಶುರುವಾಗಿವೆ. ಆಂತರಿಕ ತಿಕ್ಕಾಟದಿಂದ ಬಳಲುತ್ತಿರುವ ಬಿಜೆಪಿಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಪಕ್ಷದ ರಾಜ್ಯಾ ಧ್ಯಕ್ಷ ಬಿ.ವೈ.ವಿಜಯೇಂದ್ರ
ಅವರ ಕಾರ್ಯವೈಖರಿ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿದೆ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ವಿಪಕ್ಷ ನಾಯಕ ಆರ್.ಅಶೋಕ್ ವೈಫಲ್ಯಗಳೇನು?
- ಆಡಳಿತ ಪಕ್ಷ ಎಡವಿದಾಗ ಅದರ ಕಿವಿ ಹಿಂಡಿ ಸರಿದಾರಿಗೆ ತರುವುದು ವಿಪಕ್ಷದ ಕೆಲಸ. ಅದು ಸದನದಲ್ಲಾಗಲಿ, ಸದನದ ಹೊರಗಾಗಲೀ. ಆದರೆ ವಿಪಕ್ಷ ನಾಯಕ ಆರ್.ಅಶೋಕ್ ಅದರಲ್ಲಿ ಪೂರ್ಣ ಪ್ರಮಾಣದಲ್ಲಿ ಯಶಸ್ಸು ಕಂಡಿಲ್ಲ ಎಂಬ ಅಭಿಪ್ರಾಯಗಳು ಪಕ್ಷದ ಕಾರ್ಯಕರ್ತರಲ್ಲಿದೆ.
- ವಿಧಾನಸಭೆಯಲ್ಲಿ ವಿಪಕ್ಷ ನಾಯಕನಾಗಿ ಅಶೋಕ್ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರದ ವಿರುದ್ಧ ಅಭಿಪ್ರಾಯ ರೂಪಿಸುವಲ್ಲಿ ವಿಫಲವಾಗಿದ್ದಾರೆ ಎಂಬ ಆರೋಪ ಇದೆ. ಬೆಳಗಾವಿ ಅಧಿವೇಶನದಲ್ಲಂತೂ ಈ ಭಿನ್ನಮತ ಎದ್ದು ಕಾಣುತ್ತಿತ್ತು. ಬಜೆಟ್ ಅಧಿವೇಶನದಲ್ಲಿ ವಿಪಕ್ಷವಾಗಿ ಸರ್ಕಾರಕ್ಕೆ ತಕ್ಕ ಬಿಸಿ ಮುಟ್ಟಿಸಿದರೂ ಅದು ಪರಿಣಾಮಕಾರಿ ಆಗಿರಲಿಲ್ಲ.
- ಆರ್.ಅಶೋಕ್ ಬೆಂಗಳೂರು ನಗರದ ಸಮಸ್ಯೆಗಳ ವಿಚಾರಗಳು ಎದುರಾದಗಲೂ ಅದನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿಲ್ಲ ಎಂಬ ಆರೋಪವಿದೆ. ಬೆಂಗಳೂರಿನಲ್ಲಿ ಮೆಟ್ರೋ ದರ ಏರಿಕೆ, ಕಸದ ಸಮಸ್ಯೆ, ಗ್ರೇಟರ್ ಬೆಂಗಳೂರು ಬಿಲ್ ವಿಚಾರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸರ್ಕಾರವನ್ನು ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಹೋರಾಟ ರೂಪಿಸುವಲ್ಲಿ ವಿಫಲವಾಗಿದ್ದಾರೆ.
- ಇನ್ನು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಜೊತೆಗೆ ಹೊಂದಾಣಿಕೆ ಕೊರತೆಯೂ ಬಿಜೆಪಿ ಹಿನ್ನಡೆಗೆ ಕಾರಣವಾಗಿದೆ. ಪಕ್ಷದಲ್ಲಿ ಯತ್ನಾಳ್ ಟೀಂ ಹೇಳಿಕೆಯಿಂದ ಗೊಂದಲ ಸೃಷ್ಟಿಯಾಗಿತ್ತು. ಈ ಸಂದರ್ಭದಲ್ಲಿ ಅಶೋಕ್ ಸ್ಪಷ್ಟ ನಿಲುವು ತೆಗೆದುಕೊಂಡಿರಲಿಲ್ಲ. ತಟಸ್ಥ ಬಣದಲ್ಲಿದ್ದ ಅಶೋಕ್ ಹಾಗೂ ವಿಜಯೇಂದ್ರ ನಡುವೆ ಬಿರುಕು ಸೂಕ್ಷ್ಮವಾಗಿ ಕಾಣಿಸುತ್ತಿತ್ತು.
ಬಿ.ವೈ.ವಿಜಯೇಂದ್ರ ವೈಫಲ್ಯಗಳೇನು?
- ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಅಧ್ಯಕ್ಷ ಸ್ಥಾನ ಸಿಕ್ಕ ಬಳಿಕ ಪಕ್ಷದಲ್ಲೂ ಸೂಕ್ತ ಬೆಂಬಲ ಸಿಕ್ಕಿರಲಿಲ್ಲ. ಯತ್ನಾಳ್ ಟೀಂ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಎಂದು ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಹೀಗಾಗಿ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವಲ್ಲಿ ವಿಫಲವಾಗಿದ್ದಾರೆ.
- ಮುಡಾ ಹಗರಣದಲ್ಲಿ ಬೆಂಗಳೂರು ಟು ಮೈಸೂರು ಪಾದಯಾತ್ರೆ ನಡೆಸಿದ್ದರು. ಇದರ ಹೊರತಾಗಿ ಜನಾಕ್ರೋಶ ಯಾತ್ರೆ ಒಂದಿಷ್ಟು ಗಮನ ಸೆಳೆಯಿತು. ಇದೆರಡರ ಹೊರತಾಗಿ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ರೂಪಿಸುವಲ್ಲಿ ಯಶಸ್ವಿಯಾಗಿಲ್ಲ.
- ವಿಜಯೇಂದ್ರ ವಿರುದ್ಧವೂ ಹೊಂದಾಣಿಕೆ ರಾಜಕೀಯ ಆರೋಪ ಕೇಳಿಬಂದಿತ್ತು. ಸ್ವತಃ ಯತ್ನಾಳ್ ಅವರೇ ಈ ಆರೋಪವನ್ನು ಮಾಡಿದ್ದರು. ಮುಡಾ ಪಾದಯಾತ್ರೆಯ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಸೂಚನೆಯಂತೆ ಪಾದಯಾತ್ರೆ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.
*ಯತ್ನಾಳ್ ಉಚ್ಚಾಟನೆಯ ಬಳಿಕ ವಿಜಯೇಂದ್ರ ಸ್ವಲ್ಪ ಆಕ್ಟೀವ್ ಆಗಿದ್ದರು. ರಾಜ್ಯಾದ್ಯಂತ ಜನಾಕ್ರೋಶ ಯಾತ್ರೆ ನಡೆಸಿದ್ದರು. ಆದರೆ ಸರ್ಕಾರಕ್ಕೆ ಬಿಸಿ ಮುಟ್ಟಿಸುವಲ್ಲಿ ಹಾಗೂ ರಾಜ್ಯದ ಜನರ ಗಮನ ಸೆಳೆಯುವಲ್ಲಿ ಇದು ಯಶಸ್ವಿ ಆಗಿಲ್ಲ.
ವಿಪಕ್ಷವಾಗಿ ಬಿಜೆಪಿಗೆ ರಾಜ್ಯ ಸರ್ಕಾರದ ವಿರುದ್ಧ ಸಾಕಷ್ಟು ಇಶ್ಯೂಗಳಿದ್ದವು. ಆದರೆ ಮತೀಯ ಪ್ರಕರಣಗಳನ್ನು ಬಿಟ್ಟರೆ ಜನರ ಸಮಸ್ಯೆಗಳತ್ತ ಬಿಜೆಪಿ ಹೆಚ್ಚಿನ ಗಮನ ನೀಡುತ್ತಿಲ್ಲ. ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನರಿಗೆ ಸಾಕಷ್ಟು ಸಮಸ್ಯೆ ಆಗಿದೆ. ಇದರ ವಿರುದ್ಧ ಬಿಜೆಪಿ ಹೋರಾಟ ನಡೆಸಿದೆ. ಆದರೆ ಪೂರ್ಣ ಪ್ರಮಾಣದ ಹೋರಾಟ ಎಲ್ಲೂ ಕಾಣಿಸಿಲ್ಲ.