ನವದೆಹಲಿ,ಜೂ.27– ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದಕ್ಕಾಗಿ ಜನತೆಯ ಕಾಂಗ್ರೆಸ್ ಕ್ಷಮೆಯಾಚಿಸಬೇಕು ಎಂದು ಹೇಳಿರುವ ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಸಂವಿಧಾನದ ಪೀಠಿಕೆಯಲ್ಲಿ ಸೇರಿಸಲಾದ ಸಮಾಜವಾದಿ ಮತ್ತು ಜಾತ್ಯತೀತ ಪದಗಳು ಮುಂದುವರಿಯಬೇಕೇ ಎಂಬುದರ ಕುರಿತು ಚರ್ಚೆಯ ಮೂಲಕ ನಿರ್ಧರಿಸಬೇಕು ಎಂದು ಕರೆ ಕೊಟ್ಟಿದ್ದಾರೆ.
ಇದು ವ್ಯಾಪಕ ಚರ್ಚೆಗೆ ಮುನ್ನುಡಿ ಬರೆದಿದ್ದು, ಬಿಜೆಪಿ, ಸಂಘಪರಿವಾರ ಹಾಗೂ ಕಾಂಗ್ರೆಸ್ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಗಿದೆ.ಭಾರತದ ಸಂವಿಧಾನದ ಪೀಠಿಕೆಯಲ್ಲಿರುವ ಎರಡು ಪದಗಳಾದ ಸಮಾಜವಾದ ಮತ್ತು ಜಾತ್ಯತೀತ ಪದಗಳ ಅಗತ್ಯತೆ ಕುರಿತು, ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ 50 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ತುರ್ತು ಪರಿಸ್ಥಿತಿಯ ಸಮಯದಲ್ಲಿ, ಜಾತ್ಯತೀತ ಮತ್ತು ಸಮಾಜವಾದಿ ಎಂಬ ಎರಡು ಪದಗಳನ್ನು ಸಂವಿಧಾನಕ್ಕೆ ಸೇರಿಸಲಾಯಿತು. ಅವು ಮೂಲ ಪೀಠಿಕೆಯ ಭಾಗವಾಗಿರಲಿಲ್ಲ. ಈ ಎರಡು ಪದಗಳ ಭವಿಷ್ಯವನ್ನು ಚರ್ಚೆಯ ಮೂಲಕ ನಿರ್ಧರಿಸಬೇಕು ಎನ್ನುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.
ಈ ಪದಗಳನ್ನು ತೆಗೆದುಹಾಕಲಾಗಿಲ್ಲ. ಅವು ಹಾಗೆಯೇ ಇರಬೇಕೋ ಬೇಡವೋ ಎಂಬುದರ ಬಗ್ಗೆ ಚರ್ಚೆ ನಡೆಯಬೇಕು. ಈ ಎರಡು ಪದಗಳು ಡಾ. ಅಂಬೇಡ್ಕರ್ ಅವರು ಬರೆದ ಸಂವಿಧಾನದಲ್ಲಿ ಇರಲಿಲ್ಲ. ತುರ್ತು ಪರಿಸ್ಥಿತಿಯ ಸಮಯದಲ್ಲಿ, ದೇಶಕ್ಕೆ ಕಾರ್ಯನಿರ್ವಹಿಸುವ ಸಂಸತ್ತು ಇರಲಿಲ್ಲ, ಹಕ್ಕುಗಳಿರಲಿಲ್ಲ, ನ್ಯಾಯಾಂಗವಿರಲಿಲ್ಲ, ಇನ್ನು ಈ ಎರಡು ಪದಗಳನ್ನು ಸಹ ಸೇರಿಸಲಾಗಿದೆ ಎಂದು ಹೇಳಿದರು.
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಆಗಿನ ಕಾಂಗ್ರೆಸ್ ಆಡಳಿತದ ಸರ್ಕಾರವು ನಾಗರಿಕರ ಮೇಲೆ ನಡೆಸಿದ ದೌರ್ಜನ್ಯಗಳ ಬಗ್ಗೆಯೂ ಆರ್.ಎಸ್ಎಸ್ ನಾಯಕ ರಾಹುಲ್ ಗಾಂಧಿ ಅವರನ್ನು ಪರೋಕ್ಷವಾಗಿ ಟೀಕಿಸಿದ ದತ್ತಾತ್ರೇಯ ಹೊಸಬಾಳೆ, ಇದನ್ನು (ತುರ್ತು ಪರಿಸ್ಥಿತಿ ಹೇರಿದ) ಜನರು ಇಂದು ಸಂವಿಧಾನದ ಪ್ರತಿಗಳೊಂದಿಗೆ ಅಲೆದಾಡುತ್ತಿದ್ದಾರೆ. ಅವರು ಇಲ್ಲಿಯವರೆಗೆ ಇದಕ್ಕಾಗಿ ಭಾರತದ ಜನರಿಗೆ ಕ್ಷಮೆಯಾಚಿಸಿಲ್ಲ ಎಂದು ಹೇಳಿದರು.
ನೀವು 1 ಲಕ್ಷಕ್ಕೂ ಹೆಚ್ಚು ಜನರನ್ನು ಜೈಲಿಗೆ ಹಾಕಿದ್ದೀರಿ, 250 ಕ್ಕೂ ಹೆಚ್ಚು ಪತ್ರಕರ್ತರನ್ನು ಜೈಲಿಗೆ ಹಾಕಿದ್ದೀರಿ, ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದ್ದೀರಿ ಮತ್ತು 60 ಲಕ್ಷ ಭಾರತೀಯರನ್ನು ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದೀರಿ. ನೀವು ನ್ಯಾಯಾಂಗದ ಸ್ವಾತಂತ್ರ್ಯವನ್ನು ಕೊನೆಗೊಳಿಸಿದ್ದೀರಿ. ಇದನ್ನು ಮಾಡಿದವರೆಲ್ಲರೂ ದೇಶಕ್ಕೆ ಕ್ಷಮೆಯಾಚಿಸಿದ್ದಾರೆಯೇ? ಅದು ನೀವಲ್ಲ, ನಿಮ್ಮ ಪೂರ್ವಜರಾಗಿದ್ದರೆ, ನೀವು ಅವರ ಹೆಸರಿನಲ್ಲಿ ಕ್ಷಮೆ ಯಾಚಿಸಬೇಕು ಎಂದು ಹೊಸಬಾಳೆ ಹೇಳಿದರು.
1975 ರಲ್ಲಿ ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿಯ 50 ನೇ ವರ್ಷಾಚರಣೆಯನ್ನು ಬಿಜೆಪಿ ಸಂವಿಧಾನ್ ಹತ್ಯೆ ದಿವಸ್ (ಸಂವಿಧಾನದ ಹತ್ಯಾ ದಿನ) ಎಂದು ಆಚರಿಸಿದೆ. ಇದು ಕಾಂಗ್ರೆಸ್ ಜೊತೆ ತೀವ್ರ ರಾಜಕೀಯ ಘರ್ಷಣೆಗೆ ನಾಂದಿ ಹಾಡಿತು. ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಉನ್ನತ ನಾಯಕರು ತುರ್ತು ಪರಿಸ್ಥಿತಿಯ ಸಮಯದಲ್ಲಿ ಕಾಂಗ್ರೆಸ್ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಿದೆ ಎಂದು ಆರೋಪಿಸಿ ಕಾಂಗ್ರೆಸ್ ಮೇಲೆ ತೀಕ್ಷ್ಮವಾದ ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಹೆಸರು ಪ್ರಸ್ತಾಪಿಸದೆ. ಟೀಕಿಸಿದರು.
ಕಾಂಗ್ರೆಸ್ ವಾಗ್ದಾಳಿ :
ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಭಾರತದ ಸ್ವಾತಂತ್ರ್ಯ ಹೋರಾಟ ಅಥವಾ ಸಂವಿಧಾನ ರಚನೆಯಲ್ಲಿ ಯಾವುದೇ ಪಾತ್ರ ವಹಿಸದವರು ಈಗ ಅದನ್ನು ರಕ್ಷಿಸುವುದಾಗಿ ಹೇಳಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರಲ್ಲದೇ, ಸ್ವಾತಂತ್ರ್ಯ ಹೋರಾಟ ಅಥವಾ ಸಂವಿಧಾನ ರಚನೆಗೆ ಎಂದಿಗೂ ಕೊಡುಗೆ ನೀಡದವರು ಈಗ ಅದನ್ನು ಸಮರ್ಥಿಸಿಕೊಳ್ಳುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ದೇಶವು ಹಿಂದೆ ಸರಿದ ಒಂದು ಅವಧಿಯನ್ನು ಪ್ರಧಾನಿ ಮೋದಿ ಪದೇ ಪದೇ ಉಲ್ಲೇಖಿಸುತ್ತಿದ್ದಾರೆ. ಜನರು ಈಗಾಗಲೇ ಮರೆತಿರುವ ಒಂದು ವಿಷಯವನ್ನು ಅವರು ಸಮಸ್ಯೆಯನ್ನಾಗಿ ಮಾಡುತ್ತಿದ್ದಾರೆ ಎಂದು ಹೇಳಿದರು.