ಬೆಂಗಳೂರು, ಮೇ 27- ಸದ್ಯ ರಾಜ್ಯದಲ್ಲಿ ಒಟ್ಟು 80 ಕೋವಿಡ್ ಸಕ್ರಿಯ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 73 ಪ್ರಕರಣಗಳು ಬೆಂಗಳೂರಲ್ಲಿ ದಾಖಲಾಗಿರುವುದು ದಿಗಿಲು ಹುಟ್ಟಿಸಿದೆ. ಮಾತ್ರವಲ್ಲ ಕೊರೊನಾ ನಾಲ್ಕನೆ ಅಲೆ ಕಾಣಿಸಿಕೊಳ್ಳುತ್ತಿದೆಯೇ ಎಂಬ ಅನುಮಾನಗಳನ್ನು ಹುಟ್ಟಿ ಹಾಕಿದೆ.
ಕಳೆದ 24ಗಂಟೆಗಳಲ್ಲಿ ರಾಜ್ಯದಲ್ಲಿ ಒಟ್ಟು 191 ಕೊವಿಡ್ ಟೆಸ್ಟ್ ನಡೆಸಲಾಗಿದೆ. ಒಂದೇ ದಿನ 37 ಜನರಲ್ಲಿ ಕೊವಿಡ್ ಕಾಣಿಸಿಕೊಂಡಿದೆ.80ಜನರಲ್ಲಿ 76ಜನರಿಗೆ ಹೋಮ್ ಐಸೋಲೇಷನ್, ಉಳಿದ ನಾಲ್ವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆನೀಡಲಾಗುತ್ತಿದೆ. ಸದ್ಯ ಇರುವ ಕೊವಿಡ್ ಪಾಸಿಟಿವ್ ರೇಟ್ ಶೇ.19.37ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 4ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆಯಿಂದ ಹೆಲ್ತ್ ಬುಲಿಟಿನ್ ತಿಳಿಸಿದೆ.
ಮೊಳಗಿತಾ ಕೊರೊನಾ ನಾಲ್ಕನೇ ಅಲೆ ಸೈರನ್; ನಗರದಲ್ಲಿ 73 ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದಂತೆ ಬಿಬಿಎಂಪಿಯಲ್ಲಿ ಕೊರೋನಾ ಸಿದ್ಧತೆ ಕ್ರಮಗಳು ಚುರುಕುಗೊಂಡಿವೆ.
ನಗರದಲ್ಲಿರುವ ಎಲ್ಲಾ ಆಸ್ಪತ್ರೆಗಳಿಗೂ ಕೊರೊನಾ ಟೆಸ್ಟಿಂಗ್ ಕಿಟ್ ಹಂಚಿಕೆಗೆ ಪಾಲಿಕೆ ಮುಂದಾಗಿದೆ. ಸದ್ಯ ಪಾಲಿಕೆ ಬಳಿ 12 ಸಾವಿರ ಟೆಸ್ಟಿಂಗ್ ಕಿಟ್ಗಳು ಇದ್ದು, ನಿಮ್ಹಾನ್್ಸ ಆಸ್ಪತ್ರೆ ಹಾಗೂ ನಗರದ ಕೆಲ ಆಸ್ಪತ್ರೆಗಳಲ್ಲಿ ಕೊರೋನಾ ಸ್ಯಾಂಪಲ್ ಟೆಸ್ಟ್ ನಡೆಸಲು ತಯಾರಿ ನಡೆಸಲಾಗಿದೆ.
ಕೊರೊನಾ ಹಾಟ್ಸ್ಪಾಟ್ ಮಹದೇವಪುರ:
ಕೊರೊನಾ ಮೊದಲ ಅಲೆಯಿಂದ ಇಲ್ಲಿಯವರೆಗೆ ಮಹದೇವಪುರ ವೈರಸ್ ನಾ ಹಾಟ್ಸ್ಪಾಟ್ ಆಗಿ ಗುರುತಿಸಿಕೊಂಡಿದೆ. ಈ ವಲಯದಲ್ಲಿ ಈಗಾಗಲೇ 17 ಪ್ರಕರಣಗಳು ಪತ್ತೆಯಾಗಿದೆ.
ಮಹಾದೇವಪುರ ಐಟಿ ಬಿಟಿ ಇರೋ ವಲಯ ಹಾಗೂ ಹೊರ ರಾಜ್ಯದ ಜನ ವಾಸ ಮಾಡೋ ಕ್ಷೇತ್ರ..ಹೀಗಾಗಿ ಹೊರ ರಾಜ್ಯದಿಂದ ಬರುವ ಜನರ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ.
ಇದರ ಜೊತೆಗೆ ಮಹದೇವಪುರ ವಲಯದಲ್ಲಿ ಹೆಚ್ಚು ಕೊರೊನಾ ಟೆಸ್ಟ್ ಮಾಡಲು ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ವಿಕಾಸ್ ಕಿಶೋರ್ ಸುರಲ್ಕರ್ ತಿಳಿಸಿದ್ದಾರೆ.
ಮಕ್ಕಳು, ಶಾಲೆಗಳ ಮೇಲೆ ಒತ್ತಡ ಬೇಡ; ಬೇಸಿಗೆ ರಜೆ ಮುಗಿದು ಶಾಲೆಗಳು ಆರಂಭವಾಗುತ್ತಿರುವ ಸಂದರ್ಭದಲ್ಲೇ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿರುವುದರಿಂದ ಜ್ವರ ಇರುವ ಮಕ್ಕಳಿಗೆ ರಜೆ ನೀಡಿ ಎಂದು ಸಿಎಂ ಸಿದ್ದರಾಮಯ್ಯ ಮಾಡಿಕೊಂಡಿರುವ ಮನವಿಗೆ ಪೋಷಕರ ಸಮನ್ವಯ ಸಮಿತಿ ಕಳವಳ ವ್ಯಕ್ತಪಡಿಸಿದೆ.
ಕೊರೊನಾ ಹೆಸರಿನಲ್ಲಿ ಯಾವುದೇ ರೀತಿ ಒತ್ತಡದ ಕ್ರಮಗಳನ್ನ ಮಕ್ಕಳು ಹಾಗೂ ಶಾಲೆಗಳ ಮೇಲೆ ಏರದಂತೆ ಪೋಷಕರ ಸಮನ್ವಯ ಸಮಿತಿ ಅಧ್ಯಕ್ಷ ಯೋಗಾನಂದ್ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಕಳೆದ ಬಾರಿಯ ಕೊರೊನಾ ಸಮಯದಲ್ಲಿ ಮಕ್ಕಳ ವಿದ್ಯಾಭ್ಯಾಸದ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತು. ಸದ್ಯ ವೇಗವಾಗಿ ಕೊವಿಡ್ ಹರಡುತ್ತಿಲ್ಲ. ಹೀಗಾಗಿ ಮಕ್ಕಳು ಹಾಗೂ ಪೋಷಕರ ಮೇಲೆ ಒತ್ತಡದ ಕ್ರಮ ಹೇರಬೇಡಿ. ಶಾಲೆಗಳ ಆಡಳಿತ ಮಂಡಳಿ ವಾರಕ್ಕೊಂದು ಸಭೆ ನಡೆಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗುತ್ತದೆ.ಮಾಸ್ಕ್ ಅನ್ನ ಸದ್ಯ ಕಡ್ಡಾಯ ಮಾಡುವುದು ಅವಶ್ಯಕತೆ ಇಲ್ಲ. ಮಾಸ್ಕ್ ಧರಿಸುವುದರಿಂದ ಮಕ್ಕಳ ಉಸಿರಾಟದ ಮೇಲೆ ಪರಿಣಾಮ ಬೀರಲಿದೆ ಎಂದು ಅವರು ಹೇಳಿದ್ದಾರೆ.
ಇಂದಿನಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಟೆಸ್ಟ್
ನಗರದ ವಿಕ್ಟೋರಿಯ, ಸಿ.ವಿ.ರಾಮನ್, ಬೌರಿಂಗ್ ಆಸ್ಪತ್ರೆಗಳಲ್ಲಿ ಇಂದಿನಿಂದ ಕೊರೊನಾ ಪರೀಕ್ಷೆ ಪ್ರಾರಂಭಿಸಲಾಗಿದೆ. ಉಸಿರಾಟ ಮತ್ತು ಹೃದಯ ಸಂಬಂಧಿ ಸಮಸ್ಯೆ ಇರುವವರು ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳಲು ಸೂಚಿಸಲಾಗಿದೆ.
ನಿನ್ನೆ ಒಂದೇ ದಿನ ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ 4 ಆರ್ಟಿಪಿಸಿಆರ್ ಪರೀಕ್ಷೆ ಮಾಡಲಾಗಿದೆ. ಇಂದು ನಾಲ್ವರ ವರದಿ ಬರಲಿದೆ. ಕೋವಿಡ್ ಪರೀಕ್ಷೆ ಹಾಗೂ ವಾರ್ಡ್ಗಳನ್ನು ಸಿದ್ಧ ಮಾಡಿಕೊಳ್ಳಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಪ್ರತ್ಯೇಕ ಹಾಸಿಗೆ, ವಾರ್ಡ್ ಹಾಗೂ ಯಂತ್ರೋಪಕರಣಗಳನ್ನು ಸದಾ ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವಂತೆ ಸೂಚಿಸಲಾಗಿದೆ. ಸಾನಿಟೈಸರ್ ಸಹಿತ ಅಗತ್ಯ ವಸ್ತುಗಳು, 8 ವೆಂಟಿಲೇಟರ್ ಬೆಡ್, 20 ಹಾಸಿಗೆಯುಳ್ಳ ಕೋವಿಡ್ ವಾರ್ಡ್ಗಳನ್ನು ಸಿದ್ದಪಡಿಸಿಕೊಳ್ಳಲಾಗಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.