Tuesday, July 1, 2025
Homeರಾಜ್ಯಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ಸಂಸ್ಥೆಯಲ್ಲಿ ಕೋಟ್ಯಾಂತರ ರೂ. ಗೋಲ್‌ಮಾಲ್‌

ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ಸಂಸ್ಥೆಯಲ್ಲಿ ಕೋಟ್ಯಾಂತರ ರೂ. ಗೋಲ್‌ಮಾಲ್‌

Crores of rupees Scam in Karnataka Rural Infrastructure Development Corporation

ಬೆಂಗಳೂರು,ಜೂ.30: ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳ ಹಿನ್ನಡೆಯ ನಡುವೆಯೇ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ಸಂಸ್ಥೆಯಲ್ಲಿ ಕೋಟ್ಯಾಂತರ ರೂ. ಗೋಲ್‌ಮಾಲ್‌ ನಡೆದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ತನಿಖಾ ಸಮಿತಿ ರಚಿಸಿ, ಪರಿಶೀಲಿಸಿದಾಗ ಕೋಟ್ಯಾಂತರ ರೂ. ದುರ್ಬಳಕೆಯಾಗಿರುವುದು ಪತ್ತೆಯಾಗಿದೆ.

ಪ್ರಕರಣವೊಂದರಲ್ಲಿ ಕಾಮಗಾರಿಗೆ ಆದೇಶವಿಲ್ಲದಿದ್ದರೂ ಅಧಿಕೃತವಾಗಿ ಅನುದಾನ ಬಿಡುಗಡೆಯಾಗದಿದ್ದರೂ, ನಕಲಿ ದಾಖಲೆ ಸೃಷ್ಟಿಸಿ 16.2 ಕೋ. ರೂ.ಗಳನ್ನು ಗುತ್ತಿಗೆದಾರರೊಬ್ಬರ ಖಾತೆಗೆ ಸಂದಾಯವಾಗಿರುವುದು ಬೆಳಕಿಗೆ ಬಂದಿದೆ.

ಕೆಆರ್‌ಐಡಿಎಲ್‌ ಬಿಬಿಎಂಪಿಯ ಐದು ವಿಭಾಗಗಳಲ್ಲಿ ಸಿಮೆಂಟ್‌ ಕಾಂಕ್ರಿಟ್‌ ರಸ್ತೆ ಕಾಮಗಾರಿಗೆ ಅನುಮೋದನೆ ನೀಡಿದ್ದು, ಇದರಲ್ಲಿ ಬೆಂ. ಪೂರ್ವವಲಯ ಒಂದು, ಮಹಾದೇವಪುರ ಉಪವಿಭಾಗ ಮತ್ತು ಕೊಪ್ಪಳ ವಿಭಾಗದ ನೆಲೋಗಿಪುರ ಉಪ ವಿಭಾಗದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಹಣ ಪಡೆದಿರುವುದು ಗೊತ್ತಾಗಿದೆ.

ಅಧಿಕೃತ ಅಭಿಯಂತರ ಕೆ.ಸಿ. ರವಿಶಂಕರ್‌ ಅಧ್ಯಕ್ಷತೆಯಲ್ಲಿ ನಾಲ್ಕು ಸದಸ್ಯರನ್ನೊಳಗೊಂಡ ಸಮಿತಿ ಪರಿಶೀಲನೆ ವೇಳೆ ಅವ್ಯವಹಾರ ಬಯಲಾಗಿದೆ. ಕಳೆದ 2022-23ನೇ ಸಾಲಿನಲ್ಲಿ ನಡೆದಿರುವ ಕೋಟ್ಯಾಂತರ ರೂ. ಹಗರಣದಲ್ಲಿ ಬಿಬಿಎಂಪಿ ವಲಯದಲ್ಲಿ 7 ಕೋ. , ಕೊಪ್ಪಳ ವಿಭಾಗದಲ್ಲಿ 9.2 ಕೋ. ದುರ್ಬಳಕೆಯಾಗಿದೆ.

ಅಂದಿನ ಹಣಕಾಸು ಇಲಾಖೆ ಅಧಿಕಾರಿಗಳು ಹಣ ಸಂದಾಯ ಮಾಡಿದ್ದಾರೆ. ಇದರಲ್ಲಿ ಮೋಲಾಧಿಕಾರಿಗಳ ಪಾತ್ರವೂ ಇದೆಯೆಂದು ಹೇಳಲಾಗುತ್ತಿದೆ. ವರ್ಕ್‌ ಆರ್ಡರ್‌ ಆಗಿ, ಕಾಮಗಾರಿ ಪೂರ್ಣಗೊಂಡ ನಂತರ ಜಿ.ಪಂ.ನಿಂದ ಆಡಳಿತಾತಕವಾಗಿ ಅನುದಾನ ಬಿಡುಗಡೆಯಾಗಬೇಕು. ಆದರೆ ಕಾಮಗಾರಿಗೆ ಸಂಬಂಧಿಸಿದ ಇಲಾಖೆಗಳಿಂದ ಆದೇಶವಾಗಿ ಅನುದಾನ ಬಿಡುಗಡೆಯಾಗಬೇಕು. ಆದರೆ ಇದನ್ನು ಉಲ್ಲಂಘಿಸಲಾಗಿದೆ.

ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ, ಲಿಖಿತ ದೂರು ಬಂದರೆ ತನಿಖೆ ನಡೆಸಿ ಆದೇಶ ನೀಡುವುದಾಗಿ ಕೆಆರ್‌ಐಡಿಎಲ್‌ ನ ಅಧ್ಯಕ್ಷ ಡಿ.ಕೆ. ಸಂಗಮೇಶ್‌ ತಿಳಿಸಿದ್ದಾರೆ.

RELATED ARTICLES

Latest News