Tuesday, June 24, 2025
Homeರಾಜ್ಯ"ಸರ್ಕಾರಕ್ಕೆ ಜನ ಯಾವಾಗ ಕಾಲಲ್ಲಿ ಇರುವುದನ್ನು ಬಿಚ್ಚಿ ಹೊಡೆಯುತ್ತಾರೋ ಗೊತ್ತಿಲ್ಲ" : ಸಿ.ಟಿ.ರವಿ

“ಸರ್ಕಾರಕ್ಕೆ ಜನ ಯಾವಾಗ ಕಾಲಲ್ಲಿ ಇರುವುದನ್ನು ಬಿಚ್ಚಿ ಹೊಡೆಯುತ್ತಾರೋ ಗೊತ್ತಿಲ್ಲ” : ಸಿ.ಟಿ.ರವಿ

CT Tavi Attack On Congress Govt

ಬೆಂಗಳೂರು,ಜೂ.24- ನಾವು ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತಿನಲ್ಲಿ ಟೀಕೆ ಮಾಡುತ್ತಿದ್ದೇವೆ. ಸರ್ಕಾರಕ್ಕೆ ಜನ ಯಾವಾಗ ಕಾಲಲ್ಲಿ ಇರುವುದನ್ನು ಬಿಚ್ಚಿ ಹೊಡೆಯುತ್ತಾರೋ ಗೊತ್ತಿಲ್ಲ ಎಂದು ವಿಧಾನಪರಿಷತ್‌ ಸದಸ್ಯ ಹಾಗೂ ಬಿಜೆಪಿ ಮುಖಂಡ ಸಿ.ಟಿ.ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಮ ಆಕ್ರೋಶ ಕೇವಲ ಬಾಯಿ ಮಾತಿನಲ್ಲಿದೆ. ಸರ್ಕಾರದ ವಿರುದ್ಧ ಜನರ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನರು ಕಾಲಲ್ಲಿರುವುದನ್ನು ಕೈಗೆ ತೆಗೆದುಕೊಂಡು ಹೊಡೆಯುವ ಕಾಲ ಸನಿಹದಲ್ಲಿದೆ. ಈ ಸರ್ಕಾರಕ್ಕೆ ಕಾಲಲ್ಲಿ ಇರುವುದನ್ನು ಬಿಚ್ಚಿ ಹೊಡೆದಾಗಲೇ ಬುದ್ಧಿ ಬರುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನಮ ಶಕ್ತಿ ಮೀರಿ ನಾವು ಹೋರಾಟ ಮಾಡುತ್ತಿದ್ದೇವೆ. ಸರ್ಕಾರದ ಭಂಡತನಕ್ಕೆ ಯಾರ ಹತ್ತಿರವೂ ಉತ್ತರ ಇಲ್ಲ. ಸಾರ್ವಜನಿಕವಾಗಿ ಬೆತ್ತಲಾದ ಮೇಲೂ ಮರ್ಯಾದೆ ಇಲ್ಲದವರ ತರಹ ಓಡಾಡುತ್ತಿರುವವರಿಗೆ ಏನು ಹೇಳುವುದು ಎಂದು ಪ್ರಶ್ನೆ ಮಾಡಿದರು.

ಸರ್ಕಾರದಲ್ಲಿ ಹಣ ಇಲ್ಲ ಎಂಬ ಗೃಹಸಚಿವ ಪರಮೇಶ್ವರ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಷ್ಟೊಂದು ಬೆಲೆ ಏರಿಕೆ ಮಾಡಿದ್ದೀರಿ? ಹಣ ಎಲ್ಲಿಗೆ ಹೋಗುತ್ತ್ತಿದೆ? ಈ ಹಣ ಹೆಗ್ಗಣಗಳಿಗೆ ಹೋಗುತ್ತಿದೆಯಾ? ಇಲಾಖೆಗಳಲ್ಲಿ ಲೂಟಿ ಆಗುತ್ತಿದೆ. ಸಿದ್ದರಾಮಯ್ಯ ಆಡಳಿತದಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೋ? ನಿಯಂತ್ರಣ ಕಳ್ಕೊಂಡಿದ್ದಾರೋ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌‍ನ ಬಿ.ಆರ್‌.ಪಾಟೀಲ್‌, ರಾಜು ಕಾಗೆಯವರನ್ನು ಕರೆದು ಮಾತನಾಡುತ್ತೇನೆ ಅಂತಾರಲ್ಲ ಸಿಎಂ, ಅದೇನು ಅವರಿಬ್ಬರ ವೈಯಕ್ತಿಕ ವಿಚಾರನಾ? ರಾಜ್ಯದ ವಿಚಾರ ಅದು, ಮೊದಲು ಭ್ರಷ್ಟಾಚಾರಿಗಳನ್ನು ಸಂಪುಟದಿಂದ ವಜಾ ಮಾಡಿ, ಸಚಿವ ಜಮೀರ್‌ ಖಾನ್‌ರಿಂದ ರಾಜೀನಾಮೆ ಪಡೆಯಿರಿ ಎಂದು ಒತ್ತಾಯಿಸಿದರು.

ಕೃಷಿ ಸಚಿವ ಕೃಷ್ಣಬೈರೇಗೌಡ ಹೇಳಿದ ಹಾಗೆ ಸಚಿವರಿಗಿಷ್ಟು, ಅಧಿಕಾರಿಗಳಿಗಿಷ್ಟು ಎಂದು ರೇಟ್‌ ಕಾರ್ಡ್‌ ಹಾಕಿಸಲಿ. ಮೋಹನ್‌ ದಾಸ್‌‍ ಪೈ ಅವರೂ ಇದನ್ನೇ ಹೇಳಿದ್ದು, ಭ್ರಷ್ಟಾಚಾರ ಈಗಾಗಲೇ ಇದೆ, ಅದನ್ನ ಶಾಸನಬದ್ಧ ಮಾಡಿ ಅಂದಿದ್ದಾರೆ ಎಂದು ಉಲ್ಲೇಖಿಸಿದರು.

ಮುಖ್ಯಮಂತ್ರಿಗಳು ಶಾಸಕರನ್ನು ಕರೆದು ಮಾತನಾಡುವುದಲ್ಲ, ಕ್ರಮ ತಗೊಳ್ಳಿ, ಯಾವ ಇಲಾಖೆಯಲ್ಲಿ ಎಷ್ಟು ವಸೂಲಿ ಆಗುತ್ತಿದೆ ಎಂದು ಸಿಎಂಗೆ ಗೊತ್ತಿಲ್ಲವೇ? ಭ್ರಷ್ಟಾಚಾರ ಸಿಎಂ ಅರಿವಿಲ್ಲದೇ ನಡೆಯುತ್ತಿದೆ ಎಂದರೆ ಸಿಎಂ ಸ್ಥಾನದಲ್ಲಿ ಮುಂದುವರೆಯಲು ಸಿದ್ದರಾಮಯ್ಯ ಅನರ್ಹರು ಎಂದರು.

ಕಳೆದ ಎರಡು ವರ್ಷದಲ್ಲಿ ಈ ಸರ್ಕಾರ ಒಳ್ಳೇ ಕಾರಣಕ್ಕೆ ಸುದ್ದಿಯಾಗಿಲ್ಲ. ಭ್ರಷ್ಟಾಚಾರ, ದರ ಏರಿಕೆ, ಅಧಿಕಾರಿಗಳ ಆತಹತ್ಯೆಗೆ ಸರ್ಕಾರ ಸುದ್ದಿ ಆಗುತ್ತಿದೆ. ಭ್ರಷ್ಟಾಚಾರದ ಪಾತ್ರಧಾರಿಗಳು, ಸೂತ್ರಧಾರಿಗಳಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.

ಯಡಿಯೂರಪ್ಪ ಪಕ್ಷದ ಕಚೇರಿಗೆ ನಿತ್ಯ ಭೇಟಿ ನೀಡುತ್ತಿದ್ದಾರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಯಡಿಯೂರಪ್ಪ ನಮ ಪಕ್ಷದ ಹಿರಿಯರು. ಹೋರಾಟ ಮಾಡಿ ಪಕ್ಷ ಕಟ್ಟಿದವರು. ಅವರ ಮಾರ್ಗದರ್ಶನವನ್ನು ಎಲ್ಲ ಕಾಲದಲ್ಲೂ ಪಡೆಯುತ್ತೇವೆ ಎಂದರು.
ಯಡಿಯೂರಪ್ಪ ಪ್ರವಾಸ ಬಗ್ಗೆ ಪಕ್ಷ ಏನು ತೀರ್ಮಾನ ಮಾಡುತ್ತೋ ಅದಕ್ಕೆ ಬದ್ಧ. ಪಕ್ಷ ವಿಫಲ ಆಗಿಲ್ಲ, ಯಾವ ಕಾಲಕ್ಕೂ ಆಗಿಲ್ಲ. ಪ್ರತಿಪಕ್ಷದ ಸ್ಥಾನದಲ್ಲಿದ್ದುಕೊಂಡು ಎಷ್ಟು ಸಾಧ್ಯವೋ ಅಷ್ಟು ಹೋರಾಟ ಮಾಡುತ್ತಿದ್ದೇವೆ ಎಂದರು.

ಪುತ್ರನಿಗಾಗಿ ಯಡಿಯೂರಪ್ಪ ಪಕ್ಷದ ಕಚೇರಿಗೆ ಬರುತ್ತಿದ್ದಾರೆ. ಪಕ್ಷ ದುರ್ಬಲ ಆಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಆ ಬಗ್ಗೆ ನಾನು ಕಾಮೆಂಟ್‌ ಮಾಡಲು ಹೋಗುವುದಿಲ್ಲ. ಬಿಜೆಪಿ ಸೈದ್ಧಾಂತಿಕವಾಗಿ ಕಟ್ಟಿರುವ ಪಕ್ಷ. ಬಿಜೆಪಿ ಯಾವುದೇ ಕಾರಣಕ್ಕೂ ದುರ್ಬಲ ಅಲ್ಲ ಎಂದು ಸಮರ್ಥಿಸಿಕೊಂಡರು.

ಮೈತ್ರಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌‍ ಕಾರ್ಯಶೈಲಿ ಭಿನ್ನವಾಗಿದ್ದರೂ ಉದ್ದೇಶ ಒಂದೇ ಇದೆ. ಕೆಲವು ಸಲ ಒಟ್ಟಾಗಿ ಹೋರಾಟ ಮಾಡಿದ್ದೇವೆ, ಸಂಘಟನಾತಕವಾಗಿಯೂ ಕೆಲಸ ಮಾಡಿದ್ದೇವೆ ಎಂದು ರವಿ ಹೇಳಿದರು.

RELATED ARTICLES

Latest News