ಬೆಂಗಳೂರು,ಜೂ.23- ಐಶ್ವರ್ಯಗೌಡ ಅವರ ವಂಚನೆ ಪ್ರಕರಣದಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ ಇಂದು ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾದರು. ಜಾರಿನಿರ್ದೇಶನಾಲಯದ ನೋಟಿಸ್ ಹಿನ್ನೆಲೆಯಲ್ಲಿ ಇಂದು ಡಿ.ಕೆ.ಸುರೇಶ್ ವಿಚಾರಣೆಗೆ ಹಾಜರಾಗುವ ಹಿನ್ನೆಲೆಯಲ್ಲಿ ಶಾಂತಿನಗರದ ಇ.ಡಿ ಕಚೇರಿ ಬಳಿ ಬಿಗಿ ಬಂದೋಬಸ್ತ್ ಆಯೋಜಿಸಲಾಗಿತ್ತು.
ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಸುರೇಶ್, ಇ.ಡಿ ಈ ಪ್ರಕರಣದಲ್ಲಿ ನನಗೆ ಏಕೆ ನೋಟಿಸ್ ಕೊಟ್ಟಿದೆ ಎಂದು ಅರ್ಥವಾಗಿಲ್ಲ. ಐಶ್ವರ್ಯ ಗೌಡ ತನ್ನ ಸಹೋದರಿ ಎಂದು ಹೇಳಿಕೊಂಡು ಬೇರೆಯವರಿಗೆ ವಂಚನೆ ಮಾಡಿರುವುದರ ವಿರುದ್ಧ ನಾನೇ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದೆ. ಆಕೆ ಮಾಡಿರುವ ವಂಚನೆಗೂ, ನನಗೂ ಯಾವುದೇ ಸಂಬಂಧವಿಲ್ಲ ಎಂದರು.
ವಿಚಾರಣೆಗೆ ಹಾಜರಾಗುತ್ತಿದ್ದು, ಸಂಪೂರ್ಣ ಸಹಕಾರ ನೀಡಿದ್ದೇನೆ. ಈ ಪ್ರಕರಣದ ಹಿಂದೆ ರಾಜಕೀಯ ಷಡ್ಯಂತ್ರ ಇದೆಯೋ, ಇಲ್ಲವೋ ಎಂಬುದು ವಿಚಾರಣೆಯ ಬಳಿಕ ಗೊತ್ತಾಗುತ್ತದೆ. ಇ.ಡಿ ಅಧಿಕಾರಿಗಳು ಯಾವ ರೀತಿಯ ಪ್ರಶ್ನೆ ಕೇಳುತ್ತಾರೆ ಎಂಬುದನ್ನು ಆಧರಿಸಿ ರಾಜಕೀಯ ಹಸ್ತಕ್ಷೇಪದ ಬಗ್ಗೆ ನಿರ್ಧರಿಸಬಹುದು ಎಂದು ಹೇಳಿದರು.
ನನ್ನ ಮತ್ತು ಐಶ್ವರ್ಯ ಅವರ ನಡುವೆ ಯಾವುದೇ ಹಣಕಾಸಿನ ವ್ಯವಹಾರವಿಲ್ಲ. ಕೆಲ ಕಾರ್ಯಕ್ರಮಗಳಿಗೆ ಭೇಟಿ ಕೊಟ್ಟಿದ್ದೆ. ಅದನ್ನು ಹೊರತುಪಡಿಸಿದರೆ, ಬೇರೆ ಯಾವುದೇ ಸಂಬಂಧವಿಲ್ಲ. ನನ್ನ ಕಚೇರಿಗೆ ಅವರು ಮೂರ್ನಾಲ್ಕು ಬಾರಿ ಭೇಟಿ ನೀಡಿ ಕೆಲ ವಿಚಾರಗಳನ್ನು ಚರ್ಚೆ ಮಾಡಿದ್ದಾರೆ. ಅದಕ್ಕೂ, ವಂಚನೆಗೂ ಸಂಬಂಧವಿಲ್ಲ. ನನ್ನ ಕ್ಷೇತ್ರದವರು ಎಂಬ ಕಾರಣಕ್ಕೆ ಭೇಟಿಯಾಗಿದ್ದೇನೆ ಎಂದರು.
ನಟರೊಬ್ಬ ನನ್ನ ಧ್ವನಿಯನ್ನು ಮಿಮಿಕ್ರಿ ಮಾಡಿರುವುದನ್ನು ಸಾಮಾಜಿಕ ಜಾಲತಾಣದಲ್ಲಿರುವ ವಿಡಿಯೋದಲ್ಲಿ ಗಮನಿಸಿದ್ದೇನೆ. ಈ ಬಗ್ಗೆ ಪೊಲೀಸರು ಸಾಕಷ್ಟು ತನಿಖೆ ನಡೆಸಿದ್ದಾರೆ. ಠಾಣೆಯಲ್ಲೂ ಹಲವು ಪ್ರಕರಣಗಳು ದಾಖಲಾಗಿವೆ. ಅವುಗಳ ಪ್ರಗತಿ ಏನು? ಎಂದು ಮಾಹಿತಿ ಇಲ್ಲ. ಯಾವ ಮಾನದಂಡದ ಆಧಾರದ ಮೇಲೆ ತಮನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಕರೆದಿದೆ ಎಂದು ಪ್ರಶ್ನಿಸುವುದಾಗಿ ಹೇಳಿದರು.
ಜಾರಿ ನಿರ್ದೇಶನಾಲಯ ಎಲ್ಲೆ ಮೀರಿ ನಡೆಯುತ್ತಿದೆ ಎಂದು ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ಗಳೇ ಎಚ್ಚರಿಕೆ ನೀಡಿವೆ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತದೆ. ಜಾರಿ ನಿರ್ದೇಶನಾಲಯದವರು ತಮ ವ್ಯಾಪ್ತಿಯನ್ನು ಮೀರಿ ನಡೆದುಕೊಳ್ಳುವ ಮೂಲಕ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
- ಬಂಜೆತನ ಸಮಸ್ಯೆಗಳಿಗೆ ಉಚಿತ ಮಾರ್ಗದರ್ಶನ ನೀಡಲು ಬಂತು ಟೋಲ್-ಫ್ರೀ ಸಂಖ್ಯೆ
- ರಾಜ್ಯದಲ್ಲಿ ಶೀಘ್ರವೇ ಜಲಾಶಯಗಳು ಭರ್ತಿ.!
- ಇರಾನ್-ಇಸ್ರೇಲ್ ಯುದ್ಧಕ್ಕೆ ಅಮೆರಿಕ ರಂಗಪ್ರವೇಶ ಬೆನ್ನಲ್ಲೇ ಜಾಗತಿಕ ಷೇರು ಮಾರುಕಟ್ಟೆ ತಲ್ಲಣ
- ಶಾಸಕರ ಅಸಮಾಧಾನ ಬಗೆಹರಿಸುವೆ:ಸಿಎಂ
- ಗುಜರಾತ್ ವಿಧಾನಸಭೆಉಪಚುನಾವಣೆ ಫಲಿತಾಂಶ : ಬಿಜೆಪಿ,ಎಎಪಿ ಸಮಬಲ