ಬೆಂಗಳೂರು,ಜೂ.17- ಕಸ ವಿಲೇವಾರಿಯಲ್ಲಿ ಗುಂಪು ಕಟ್ಟಿಕೊಂಡು ದೊಡ್ಡ ಮಾಫಿಯವೇ ರಚನೆಯಾಗಿದೆ. ಸರ್ಕಾರವನ್ನು ಬ್ಲಾಕ್ಮೇಲ್ ಮಾಡುವ ಪ್ರಯತ್ನಗಳಾಗುತ್ತಿದ್ದು, ಸರ್ಕಾರ ಇದಕ್ಕೆ ಮಣಿಯುವುದಿಲ್ಲ. ಎಲ್ಲರನ್ನೂ ಕಿತ್ತು ಹಾಕಿ ಹೊಸ ಅವಕಾಶಗಳನ್ನು ಸೃಷ್ಟಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದ ಬಳಿ ಪರಿಸರ ದಿನಾಚರಣೆ ಅಂಗವಾಗಿ ಜಾಥಾಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಕಸ ವಿಲೇವಾರಿ ವ್ಯವಸ್ಥೆಯನ್ನು ಸ್ವಚ್ಛಗೊಳಿಸಬೇಕಿದೆ. ಈ ಮೊದಲು 89 ಟೆಂಡರ್ಗಳಾಗಿತ್ತು. ಮರು ಟೆಂಡರ್ ಮಾಡಲು ಮುಂದಾದಾಗ ಎಲ್ಲರೂ ಗುಂಪುಗೂಡಿಕೊಂಡು ನ್ಯಾಯಾಲಯಕ್ಕೆ ಹೋಗಿದ್ದಾರೆ. ತಡೆಯಾಜ್ಞೆ ನೀಡಿರುವುದಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ. ಆದರೆ ಕಸ ವಿಲೇವಾರಿಯಲ್ಲಿ ದೊಡ್ಡ ಮಾಫಿಯವೇ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದ ಮರು ಟೆಂಡರ್ ಅನ್ನು ತಪ್ಪಿಸಬಹುದು ಎಂದು ಭಾವಿಸಿದ್ದಾರೆ. ನಾವು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುತ್ತೇವೆ. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿ ಅಡ್ಡಿಪಡಿಸುತ್ತಿದ್ದಾರೆ. ಈ ರೀತಿಯ ಬ್ಲಾಕ್ಮೇಲ್ಗಳು ನಮ ಸರ್ಕಾರದಲ್ಲಿ ನಡೆಯುವುದಿಲ್ಲ. ಯಾರ್ಯಾರು ಅಡ್ಡಿಪಡಿಸುತ್ತಿದ್ದಾರೆ ಅವರನ್ನೆಲ್ಲಾ ಕಿತ್ತು ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಐಪಿಎಲ್ ವಿಜಯೋತ್ಸವದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣದಲ್ಲಿ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರದಲ್ಲಾಗಿರುವ ದುರ್ಘಟನೆಗಳು ಹಾಗೂ ಅದರಿಂದ ಜೀವಹಾನಿಯಾಗಿರುವ ದೊಡ್ಡ ಪಟ್ಟಿಯೇ ತಮ ಬಳಿ ಇದೆ ಎಂದು ಆರೋಪಿಸಿದರು.
ಬಿಜೆಪಿ ಹೆಣದ ಮೇಲೆ ರಾಜಕೀಯ ಮಾಡುತ್ತಿದೆ. ಕಾಲ್ತುಳಿತ ಪ್ರಕರಣದಲ್ಲಿ ತಪ್ಪಿತಸ್ಥರನ್ನು ದಂಡಿಸಲಾಗಿದೆ. ಹೆಚ್ಚಿನ ವಿಚಾರಣೆಗೆ ಮೈಕಲ್ ಕುನ್ಹಾ ನೇತೃತ್ವದ ಆಯೋಗ ರಚಿಸಲಾಗಿದೆ. ತಮ ವಿರುದ್ಧ ಹಲವಾರು ಷಡ್ಯಂತ್ರಗಳು ನಡೆದಿವೆ. ವಿಟ್ಲೇನಹಳ್ಳಿ ಪ್ರಕರಣ, ಗಂಗಾಧರ ಕೊಲೆ ಪ್ರಕರಣ ಸೇರಿದಂತೆ ಹಲವಾರು ಸಂದರ್ಭದಲ್ಲಿ ಏನೆಲ್ಲಾ ನಡೆಯಿತು ಎಂದು ಗೊತ್ತಿದೆ ಎಂದರು. ಗುಜರಾತ್ನ ಅಹಮದಾಬಾದ್ನಲ್ಲಿ ನಡೆದ ವಿಮಾನ ದುರಂತಕ್ಕೆ ತಾವು ಕೇಂದ್ರ ಸರ್ಕಾರವನ್ನು ಹೊಣೆ ಮಾಡಿಲ್ಲ. ಬೇರೆಬೇರೆ ರಾಜ್ಯಗಳಲ್ಲಿ ಅದರಲ್ಲೂ ಬಿಜೆಪಿ ಆಡಳಿತ ಇರುವ ಕಡೆಗಳಲ್ಲೇ ಎಷ್ಟೆಲ್ಲಾ ಕಾಲ್ತುಳಿತದಂತಹ ದುರ್ಘಟನೆಗಳಾಗಿವೆ ಎಂಬುದು ಗೊತ್ತಿದೆ ಎಂದು ತಿರುಗೇಟು ನೀಡಿದರು.
ಬಿಜೆಪಿಯವರು ಎಷ್ಟೇ ರಾಜಕೀಯ ಮಾಡಲಿ, ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. 2028 ಕ್ಕೆ ಮತ್ತೆ ವಿಧಾನಸೌಧದಲ್ಲಿ ನಾವು ಮತ್ತೆ ಅಧಿಕಾರ ಸ್ವೀಕರಿಸಲಿದ್ದೇವೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತೀರಾ ಎಂಬ ಪ್ರಶ್ನೆಗೆ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಮುಗುಮಾಗಿ ಹೇಳಿದರು. ಹೆಚ್ಚು ಬೆಳೆದಂತೆಲ್ಲಾ ಶತ್ರುಗಳೂ ಹೆಚ್ಚಾಗುತ್ತಾರೆ. ಹಾಗಾಗಿ ಬಿಜೆಪಿಯವರು ನನ್ನನ್ನು ಗುರಿ ಮಾಡಿ ರಾಜಕಾರಣ ಮಾಡುವುದರಲ್ಲಿ ಆಶ್ಚರ್ಯವೇನಿಲ್ಲ ಎಂದರು.