ಬೆಂಗಳೂರು, ಜೂ.29- ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಉಚ್ಚಾಟನೆಗೊಂಡಿದ್ದ ಹಿರಿಯ ನಾಯಕ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಮರಳಿ ಬಿಜೆಪಿಗೆ ಕರೆತರಬೇಕೆಂಬ ಕೂಗು ಹೆಚ್ಚಾಗುತ್ತಿದೆ.
ಈ ಸಂಬಂಧ ಶನಿವಾರ ಖಾಸಗಿ ಹೋಟೆಲ್ನಲ್ಲಿ ಬಿಜೆಪಿ ಒಳಗಿರುವ ಕುರುಬ ಸಮಾಜದ ಮುಖಂಡರು ಸಭೆ ನಡೆಸಿ ಈಶ್ವರಪ್ಪ ಅವರನ್ನು ಪಕ್ಷಕ್ಕೆ ಕರೆತರಲು ಹೈಕಮಾಂಡ್ ಜೊತೆ ಮಾತುಕತೆ ನಡೆಸಬೇಕು ಎಂದು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಜವಾಬ್ದಾರಿ ನೀಡಿ ನಿರ್ಣಯ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಶಾಸಕ ಭೈರತಿ ಬಸವರಾಜ್, ದೊಡ್ಡನಗೌಡ ಪಾಟೀಲ್, ಮಾಜಿ ಶಾಸಕ ವರ್ತೂರು ಪ್ರಕಾಶ್, ವಿಧಾನಪರಿಷತ್ ಮಾಜಿ ಸದಸ್ಯ ರಘುನಾಥ್ ಮಲ್ಕಾಪುರೆ, ಡಾ.ಹುಲಿನಾಯ್ಕರ್ ಶರಣು ತಳ್ಳಿಕೇರಿ, ಅಂಬಿಕಾ ಹುಲಿನಾಯ್ಕರ್, ಸೋಮಶೇಖರ್, ಮ.ನಾಗರಾಜ್, ಎಚ್.ಡಿ.ಪಾಟೀಲ್, ಭೋಜರಾಜ್ ಖರೋಲಿ ಸೇರಿದಂತೆ ವಿವಿಧ ಜಿಲ್ಲೆಗಳ ಪ್ರಮುಖರು, ಮುಖಂಡರು ಭಾಗಿಯಾಗಿದ್ದರು.
ಸಭೆಯಲ್ಲಿ ಭಾಗಿಯಾಗಿದ್ದ ಬಹುತೇಕ ನಾಯಕರು ಈಶ್ವರಪ್ಪ ಕೇವಲ ಕುರುಬ ಸಮುದಾಯದ ನಾಯಕರಲ್ಲ. ಹಿಂದುಳಿದ ವರ್ಗಗಳ ನಾಯಕರು ಹೌದು. ಬಿಜೆಪಿ ಕಟ್ಟಿ ಬೆಳೆಸಿದರಲ್ಲಿ ಅವ ಪಾತ್ರವನ್ನು ಅಲ್ಲಗೆಳೆಯುವಂತಿಲ್ಲ. ಹೀಗಾಗಿ ಪಕ್ಷದಿಂದ ಉಚ್ಚಾಟನೆಗೊಂಡಿರುವ ಅವರನ್ನು ಕರೆತರಲು ರಾಜ್ಯ ನಾಯಕರಿಗೆ ಬಹುತೇಕರು ಒತ್ತಾಯಿಸಿದ್ದಾರೆ.
ಯಾವುದೇ ಸಂದರ್ಭದಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ನಡೆಯುವ ಸಾಧ್ಯತೆ ಇದೆ. ಕುರುಬ ಸಮುದಾಯದವರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಅಲ್ಲದೆ ಒಬಿಸಿ ವರ್ಗದವರಿಗೂ ಮನ್ನಣೆ ಕೊಡಬೇಕೆಂದು ಒತ್ತಾಯಿಸಲಾಗಿದೆ. ಈಶ್ವರಪ್ಪ ಅವರಿಂದ ಪಕ್ಷಕ್ಕೆ ಹೆಚ್ಚಿನ ಬಲ ಬರಲಿದೆ. ಬೇರೆ ಬೇರೆ ಕಾರಣಗಳಿಂದ ಅವರು ದೂರವಾಗಿರಬಹುದು. ಪಕ್ಷದಿಂದ ದೂರ ಸರಿದಿರುವವರನ್ನು ಮರಳಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರೆ ಸಂಘಟನೆ ಪ್ರಬಲವಾಗುತ್ತದೆ. ಈ ಬಗ್ಗೆ ವಿಜಯೇಂದ್ರ ಸೇರಿದಂತೆ ರಾಜ್ಯ ನಾಯಕರಿಗೆ ಮನವರಿಕೆ ಮಾಡಿಕೊಡಬೇಕು. ತಕ್ಷಣವೇ ಹೈಕಮಾಂಡ್ ಜೊತೆ ಮಾತುಕತೆ ನಡೆಸಲು ಸಭೆಯಲ್ಲಿ ಆಗ್ರಹಿಸಲಾಯಿತು.
ಪಕ್ಷದಲ್ಲಿ ಹಿರಿಯ ನಾಯಕರ ಕೊರತೆ ಇದೆ. ಅಲ್ಲದೆ ಕುರುಬ ಸಮುದಾಯದಿಂದ ಸಿಎಂ ಸಿದ್ದರಾಮಯ್ಯ ಅವರನ್ನು ಬಿಟ್ಟರೆ ಹಿರಿತನದಲ್ಲಿ ಈಶ್ವರಪ್ಪ 2ನೇ ನಾಯಕರು. ಯಾವುದೋ ಕೆಟ್ಟ ಸಂದರ್ಭದಲ್ಲಿ ಪಕ್ಷದಿಂದ ಉಚ್ಚಾಟನೆಯಾಗಿರಬಹುದು. ಭವಿಷ್ಯದ ಹಿತದೃಷ್ಟಿಯಿಂದ ಅದನ್ನು ಮರೆತು ಕರೆತಂದರೆ ಸಂಘಟನೆಗೆ ಅನುಕೂಲವಾಗಲಿದೆ. ಹೈಕಮಾಂಡ್ ನಾಯಕರಿಗೂ ಅವರ ಅಗತ್ಯತೆ ಬಗ್ಗೆ ಮನವರಿಕೆ ಮಾಡಿಕೊಡೋಣ. ಸಾಧ್ಯವಾದರೆ ದೆಹಲಿಗೆ ಒಂದು ನಿಯೋಗವು ತೆರಳಿ ರಾಷ್ಟ್ರೀಯ ಅಧ್ಯಕ್ಷರು ಸೇರಿದಂತೆ ಮತ್ತಿತರ ನಾಯಕರನ್ನು ಭೇಟಿಯಾಗುವ ಬಗ್ಗೆಯೂ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.
ಅಲ್ಲದೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕುರುಬ ಸಮುದಾಯದ ಪರವಾಗಿ ನಿಲ್ಲಬೇಕು. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ನಮ್ಮ ಸಮುದಾಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ನೀಡಬೇಕು. ಪಕ್ಷದ ಪದಾಧಿಕಾರಿಗಳ ಹುದ್ದೆಯಲ್ಲೂ ಆದ್ಯತೆ ನೀಡಬೇಕೆಂಬ ಬೇಡಿಕೆ ಕೇಳಿಬಂದಿತು.
ಇನ್ನು ರಾಜಾಧ್ಯಕ್ಷರ ವಿಷಯಕ್ಕೆ ಬಂದಾಗ ವಿಜಯೇಂದ್ರ ಪರವಾಗಿ ಸಮುದಾಯ ನಿಲ್ಲಬೇಕು. ಅವರನ್ನೇ ಮುಂದುವರೆಸಲು ಹೈಕಮಾಂಡ್ಗೆ ಮನವಿ ಮಾಡೋಣ. ಈಶ್ವರಪ್ಪ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಮುಖಾಮುಖಿ ಭೇಟಿ ಮಾಡಿಸುವ ಬಗ್ಗೆಯೂ ಚರ್ಚೆ ನಡೆಯಿತು.
ಕಾಂಗ್ರೆಸ್ನಲ್ಲಿ ಪಕ್ಷ ಬಿಟ್ಟು ಹೋದವರನ್ನು ಮರಳಿ ಕರೆತಂದ ಪರಿಣಾಮ ಗೆಲುವು ಸಾಧಿಸಲಾಯಿತು. ನಮ್ಮಲ್ಲಿ ಗೊಂದಲಗಳು ಉಂಟಾಗಿದ್ದರಿಂದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡೆವು. ಇದೇ ಗೊಂದಲ ಲೋಕಸಭೆ ಚುನಾವಣೆಯಲ್ಲೂ ಮರುಕಳಿಸಿದ್ದರಿಂದ ಮೂರಾಲ್ಕು ಸ್ಥಾನವನ್ನು ಕಳೆದುಕೊಂಡೆವು. ಎಲ್ಲರೂ ವೈಮನಸ್ಯ, ಪ್ರತಿಷ್ಟೆಯನ್ನು ಬದಿಗಿಟ್ಟು ಪಕ್ಷದ ಬೆಳವಣಿಗೆಗೆ ಕೈಜೋಡಿಸಬೇಕು. ಪಕ್ಷ ಬಿಟ್ಟವರನ್ನು ಕರೆತರಲು ಎಲ್ಲರೂ ಮುಂದಾಗಬೇಕೆಂಬ ನಿರ್ಧಾರಕ್ಕೆ ಬರಲಾಯಿತು.
- ಹಸುವಿನ ಕೆಚ್ಚಲು ಕೊಯ್ದ ದುಷ್ಕರ್ಮಿಗಳು
- 8 ವರ್ಷಗಳಿಂದ ವಿತರಣೆಯಾಗದ 1 ಲಕ್ಷ ಸ್ಯಾನಿಟರಿ ಪ್ಯಾಡ್ ಬೆಂಕಿಗೆ
- ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಜಾರಕಿಹೊಳಿ ಬ್ರದರ್ಸ್, ಕುತೂಹಲ ಕೆರಳಿಸಿದ ಬೆಳವಣಿಗೆ
- ಬೆಂಗಳೂರು : ಮಹಿಳೆಯ ಭೀಕರವಾಗಿ ಕೊಂದು ಮೂಟೆ ಕಟ್ಟಿ ಕಸದ ಲಾರಿಗೆ ಎಸೆದ ದುಷ್ಕರ್ಮಿಗಳು
- ‘ಮುಂದಿನ 3 ತಿಂಗಳಲ್ಲಿ ಡಿಕೆಶಿ ಸಿಎಂ ಆಗ್ತಾರೆ’ : ಕಾಂಗ್ರೆಸ್ನಲ್ಲಿ ತಾರಕಕ್ಕೇರಿದ ಬದಲಾವಣೆ ಬಿಸಿ