ಬೆಂಗಳೂರು, ಜೂ.27- ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ ಹೆಸರನ್ನು ಬೆಂಗಳೂರು ನಗರ ವಿಶ್ವವಿದ್ಯಾನಿಲಯಕ್ಕೆ ನಾಮಕರಣ ಮಾಡಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೆಂಚಪ್ಪಗೌಡರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೆಂಪೇಗೌಡರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಬೆಂಗಳೂರು ವಿಶ್ವವಿದ್ಯಾಲಯವನ್ನು ವಿಭಜಿಸಿ ಮೂರು ವಿಶ್ವವಿದ್ಯಾನಿಲಯಗಳನ್ನಾಗಿ ಸರ್ಕಾರ ಮಾಡಿದೆ. ಈಗಾಗಲೇ ಗಣ್ಯರ ಹೆಸರನ್ನು ವಿಶ್ವವಿದ್ಯಾನಿಲಯಗಳಿಗೆ ನಾಮಕರಣ ಮಾಡಲಾಗಿದೆ. ಅದೇ ರೀತಿ ಬೆಂಗಳೂರಿನ ಯಾವುದಾದರೂ ಒಂದು ವಿಶ್ವವಿದ್ಯಾನಿಲಯಕ್ಕೆ ಕೆಂಪೇಗೌಡರ ಹೆಸರನ್ನು ಇಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಅವರು ಹೇಳಿದರು.
ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣ ಎಂಬ ಹೆಸರನ್ನು ಇಡಲಾಗಿದೆ. ನ್ಯಾಷನಲ್ ಕಾಲೇಜಿನ ಜೊತೆಗೆ ಕೆಂಪೇಗೌಡ ಆಸ್ಪತ್ರೆ ಎಂಬುದನ್ನು ಸೇರಿಸಿ ಮೆಟ್ರೋ ನಿಲ್ದಾಣಕ್ಕೆ ಮರು ನಾಮಕರಣ ಮಾಡಬೇಕು. ಆ ಮೂಲಕ ಕೆಂಪೇಗೌಡ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಕೆಂಪೇಗೌಡರ ಜಯಂತಿಯನ್ನು ನಾಡಹಬ್ಬವಾಗಿ ನಾಡಿನಾದ್ಯಂತ ಎಲ್ಲೆಡೆ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಕೆಂಪೇಗೌಡರು ನಿರ್ಮಿಸಿದ ಎಲ್ಲಾ ಗುಡಿಗೋಪುರಗಳಿಗೂ ವಿಶೇಷವಾಗಿ ಅಲಂಕಾರ ಮಾಡಿ ರಾಜ್ಯ ಸರ್ಕಾರವು ವಿಜೃಂಭಣೆಯಿಂದ ಜಯಂತಿ ಆಚರಿಸುತ್ತಿರುವುದು ಸಂತೋಷ ತಂದಿದೆ. ಕೆಂಪೇಗೌಡರು ದೂರದೃಷ್ಟಿಯಿಂದ ನಿರ್ಮಿಸಿದ ಬೆಂಗಳೂರು ಸಿಲಿಕಾನ್ ವ್ಯಾಲಿ ಎಂದು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ. ಇಲ್ಲಿ ನೆಲೆಸಿರುವ ದೇಶ, ವಿದೇಶ ಹಾಗೂ ಹೊರರಾಜ್ಯದವರು ಕೆಂಪೇಗೌಡರನ್ನು ಸ್ಮರಿಸಬೇಕು ಎಂದು ಅವರು ತಿಳಿಸಿದರು.
ಒಕ್ಕಲಿಗರ ಸಂಘದ ವತಿಯಿಂದ ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನದೊಂದಿಗೆ ಅಶ್ವಾರೂಢ ಕೆಂಪೇಗೌಡರ ಪುತ್ಥಳಿಗೆ ಪುಷ್ಪನಮನ ಅರ್ಪಿಸಲಾಯಿತು. ನಂತರ ಬಸಪ್ಪ ವೃತ್ತ, ಸಜ್ಜನರಾವ್ ವೃತ್ತ, ವಿವಿಪುರಂ ಕಲಾ ಮತ್ತು ವಾಣಿಜ್ಯ ಕಾಲೇಜು ಮೂಲಕ ಸಂಘದವರೆಗೆ ಮೆರವಣಿಗೆ ಮಾಡಲಾಯಿತು.
ಪಟ್ಟನಾಯಕಹಳ್ಳಿ ಮಠದ ಶ್ರೀ ನಂಜಾವಧೂತ ಸ್ವಾಮೀಜಿ, ವಿಶ್ವಒಕ್ಕಲಿಗರ ಮಹಾ ಸಂಸ್ಥಾನ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ವಿಜಯನಗರ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ, ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಎಲ್.ಶ್ರೀನಿವಾಸ್, ಡಾ.ಕೆ.ವಿ.ರೇಣುಕಾಪ್ರಸಾದ್, ಪ್ರಧಾನ ಕಾರ್ಯದರ್ಶಿ ಟಿ. ಕೋನಪ್ಪರೆಡ್ಡಿ, ಖಜಾಂಚಿ ಎನ್.ಬಾಲಕೃಷ್ಣ, ಸಾಂಸ್ಕೃತಿಕ ಚಟುವಟಿಕೆಗಳ ಸಮಿತಿ ಅಧ್ಯಕ್ಷ ವೆಂಕಟರಾಮೇಗೌಡ, ನಿರ್ದೇಶಕರಾದ ಸಿ.ಎಂ.ಮಾರೇಗೌಡ, ಬಿ.ಪಿ.ಮಂಜೇಗೌಡ, ಎಂ.ಪುಟ್ಟಸ್ವಾಮಿ, ರಾಘವೇಂದ್ರ, ಹೆಚ್.ಸಿ.ಜಯಮುತ್ತು, ಸಿ.ದೇವರಾಜು, ಆರ್. ಪ್ರಕಾಶ್, ಹೆಚ್.ಎನ್.ರವೀಂದ್ರ ಮೊದಲಾದ ಗಣ್ಯರು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
- ‘ಆಪರೇಷನ್ ಸಿಂಧೂರ್’ ಕರಾಚಿಯನ್ನು ಉಡಾಯಿಸಲು ರೆಡಿಯಾಗಿತ್ತಂತೆ ಭಾರತ ನೌಕಾಪಡೆ
- ತುರ್ತುಸ್ಥಿತಿ ಹೇರಿದ್ದಕ್ಕೆ ಕಾಂಗ್ರೆಸ್ ದೇಶದ ಕ್ಷಮೆ ಯಾಚಿಸಲಿ : ಹೊಸಬಾಳೆ
- ರಾಜಣ್ಣ ‘ರಾಜಕೀಯ ಕ್ರಾಂತಿ’ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ
- ವಿದ್ಯುತ್ ಸಂಪರ್ಕಕ್ಕೆ ಸಿಸಿ, ಓಸಿ ನೀಡುವ ನಿಯಮ ಸದ್ಯಕ್ಕೆ ಬೇಡ : ಎನ್ಆರ್ಆರ್
- 2026ರಲ್ಲಿ ತಮಿಳುನಾಡಿನಲ್ಲಿ ಎನ್ಡಿಎ ಸರ್ಕಾರ ರಚನೆ : ಅಮಿತ್ ಶಾ ಭವಿಷ್ಯ