ಯಲಹಂಕ, ಆ.19- ಶಾಸಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿರುವ ಕೆ.ಎನ್.ಜಗದೀಶ್ ಎಂಬುವವರ ವಿರುದ್ಧ ಬಿಜೆಪಿ ಮುಖಂಡರು ಮತ್ತು ಶಾಸಕ ಎಸ್.ಆರ್.ವಿಶ್ವನಾಥ್ ಅವರ ಅಭಿಮಾನಿಗಳು ರಾಜಾನುಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಜಗದೀಶ್ ಅವರು ಇತ್ತೀಚೆಗೆ ಶಾಸಕ ವಿಶ್ವನಾಥ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯವಾಗಿ, ಅವಹೇಳನಕಾರಿ ಭಾಷೆಯಲ್ಲಿ ಮಾತನಾಡುವ ಮೂಲಕ ಮಾತನಾಡುವ ಮೂಲಕ ಶಾಸಕರ ತೇಜೋವಧೆಗೆ ಪ್ರಯತ್ನಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಈ ಕುರಿತು ಹೆಸರಘಟ್ಟ ಹೋಬಳಿ ಬಿಜೆಪಿ ಅಧ್ಯಕ್ಷ ವಸಂತ್ ಅರಕೆರೆ ಮಾತನಾಡಿ, ಪ್ರಶ್ನಿಸುವ ಹಕ್ಕನ್ನು ಸಂವಿಧಾನ ಎಲ್ಲರಿಗೂ ನೀಡಿದೆ. ಈ ಕುರಿತು ನಮ ಸಂವಿಧಾನದ ಬಗ್ಗೆ ನಮಗೆ ಹೆಮೆಯಿದೆ. ಆದರೆ ಸಮಾಜದಲ್ಲಿನ ಗಣ್ಯ ವ್ಯಕ್ತಿಗಳು ಸೇರಿದಂತೆ ಸಿಕ್ಕ ಸಿಕ್ಕವರ ಬಗ್ಗೆ ಅವಾಚ್ಯ ಪದಪ್ರಯೋಗ, ಅವಹೇಳನಕಾರಿ ಮತ್ತು ಅಗೌರವಯುತ ಭಾಷೆಯಲ್ಲಿ ಮಾತನಾಡುವುದು ನಮ ಸಂವಿಧಾನದ ಯಾವ ಪುಟದಲ್ಲಿದೆ ಎಂಬುದನ್ನು ವಕೀಲ ಜಗದೀಶ್ ಅವರು ತೋರಿಸಲಿ ಎಂದು ಕಿಡಿಕಾರಿದ್ದಾರೆ.
ಯಾವುದೇ ಒಬ್ಬ ವ್ಯಕ್ತಿ ದಿಢೀರನೆ ನಾಯಕನಾಗಿ ಅಥವಾ ಗಣ್ಯ ವ್ಯಕ್ತಿಯಾಗಿ ಬೆಳೆದು ಬಿಡುವುದಿಲ್ಲ. ಅದರ ಹಿಂದೆ ಅವರ ಹೋರಾಟ, ಪರಿಶ್ರಮ ಇರುತ್ತದೆ. ಅಂಥವರ ಬಗ್ಗೆ ಅವಾಚ್ಯವಾಗಿ, ಅಗೌರವಯುತವಾಗಿ ಮಾತನಾಡುವುದು, ಜಾತಿಯ ಹೆಸರಿಡಿದು ಬೈಯ್ಯುವುದು ಅಸಂವಿಧಾನಿಕವಾದ ಕ್ರಮವಾಗಿದೆ ಎಂದು ಟೀಕಿಸಿದ್ದಾರೆ.
ಅವಹೇಳನಕಾರಿ ಭಾಷೆಯಲ್ಲಿ ಮಾತನಾಡುವುದು ಸಭ್ಯವಾದ ನಡೆಯಲ್ಲ ಎಂದು ಈ ಮೂಲಕ ನಿಮಗೆ ಚಿಕ್ಕ ಸಲಹೆ ನೀಡುತ್ತಿದ್ದೇವೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸಾದೇನಹಳ್ಳಿ ಪ್ರಕಾಶ್ ಗೌಡ, ನವೀನ್ ಗೌಡ(ತಂಬಿ), ಅದ್ದಿಗಾನಹಳ್ಳಿ ಮಹೇಶ್, ರಾಜಾನುಕುಂಟೆ ರಾಕೇಶ್, ಸಾದೇನಹಳ್ಳಿ ಮಹೇಶ್, ಮನು, ರಮೇಶ್, ಸತೀಶ್ ಸೇರಿದಂತೆ ಬಿಜೆಪಿ ಯುವ ಮುಖಂಡರಿದ್ದರು.