Friday, August 1, 2025
Homeರಾಜ್ಯಧರ್ಮಸ್ಥಳ ಪ್ರಕರಣ : ಶೋಧ ಕಾರ್ಯಾಚರಣೆ ವೇಳೆ ಗುಂಡಿ ಬಳಿ ಡೆಬಿಟ್‌ ಕಾರ್ಡ್‌ ಪತ್ತೆ

ಧರ್ಮಸ್ಥಳ ಪ್ರಕರಣ : ಶೋಧ ಕಾರ್ಯಾಚರಣೆ ವೇಳೆ ಗುಂಡಿ ಬಳಿ ಡೆಬಿಟ್‌ ಕಾರ್ಡ್‌ ಪತ್ತೆ

Dharmasthala case: Debit card found near a hole during search operation

ಬೆಂಗಳೂರು,ಜು.31– ರಾಜ್ಯಾದ್ಯಂತ ಭಾರೀ ಕುತೂಹಲ ಕೆರಳಿಸಿದ್ದ ಧರ್ಮಸ್ಥಳ ಪೊಲೀಸ್‌‍ ಠಾಣೆ ವ್ಯಾಪ್ತಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶವ ಹೂಳಲಾಗಿದೆ ಎಂಬ ಪ್ರಕರಣದ ತನಿಖೆಯನ್ನು ಮುಂದುವರೆಸಿರುವ ಎಸ್‌‍ಐಟಿ ತಂಡ ನಿನ್ನೆ ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಗಂಡಸಿನ ಪ್ಯಾನ್‌ಕಾರ್ಡ್‌ ಹಾಗೂ ಮಹಿಳೆಯ ಡೆಬಿಟ್‌ ಕಾರ್ಡ್‌ ಪತ್ತೆಯಾಗಿವೆ. ಆದರೆ ಇವು ತೆಗೆದ ಗುಂಡಿಯಲ್ಲಿ ಪತ್ತೆಯಾಗಿಲ್ಲವೆಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ನೇತ್ರಾವತಿ ನದಿ ಪಕ್ಕದ ದಟ್ಟ ಕಾಡಿನೊಳಗೆ ಸಂಜೆವರೆಗೂ ಶೋಧ ನಡೆಸಿದರೂ ತನಿಖಾಧಿಕಾರಿಗಳಿಗೆ ಯಾವುದೇ ಕುರುಹು ಪತ್ತೆಯಾಗಿಲ್ಲ.ಈ ಜಾಗದಲ್ಲಿ ಗುಂಡಿ ತೆಗೆಯುತ್ತಿದ್ದಾಗ ಅಕ್ಕ ಪಕ್ಕದಲ್ಲಿ ಪ್ಯಾನ್‌ ಕಾರ್ಡ್‌ ಹಾಗೂ ಡೆಬಿಟ್‌ ಕಾರ್ಡ್‌ ಪತ್ತೆಯಾದ ಹಿನ್ನೆಲೆಯಲ್ಲಿ ತನಿಖೆಗೆ ಮತ್ತೊಂದು ದಾರಿ ಸಿಕ್ಕಂತಾಗಿದೆ.

ಈ ಕಾರ್ಯ ಕಷ್ಟಕರ ಹಾಗೂ ಸವಾಲಿನ ಕೆಲಸವಾಗಿರುವ ಉತ್ಖನನ ಕಾರ್ಯ ಮುಂದುವರೆಸಿರುವ ಎಸ್‌‍ಐಟಿಯ ನಿರ್ಧಾರ ಅವರ ವೃತ್ತಿಪರ ಬದ್ಧತೆಯನ್ನು ತೋರಿಸುತ್ತದೆ. ನಿನ್ನೆ ಸಂಜೆ ಎಸ್‌‍ಐಟಿ ಮುಖ್ಯಸ್ಥ ಪ್ರಣವ್‌ಮೊಹಂತಿ ಅವರು ಸ್ಥಳಕ್ಕೆ ಆಗಮಿಸಿ ಖುದ್ದು ವೀಕ್ಷಿಸಿದರು. ಅವರೊಂದಿಗೆ ಡಿಐಜಿ ಅನುಚೇತ್‌ ಜೊತೆಗಿದ್ದರು.

ಅರಣ್ಯ ಪ್ರದೇಶದ ಆರಂಭದಲ್ಲಿರುವ 2ನೇ ಜಾಗದಲ್ಲಿ ಸ್ಥಳೀಯ ಪಂಚಾಯಿತಿಯ 20 ಮಂದಿ ಕಾರ್ಮಿಕರಿಂದ ಉತ್ಖನನ ಕಾರ್ಯ ನಡೆಸಲಾಯಿತು. 6 ಅಡಿ ಉದ್ದಗಲ, 5 ಅಡಿ ಜಾಗ ಗುರುತಿಸಿ ಅಗೆಯಲಾಯಿತು.ಆದರೆ ತನಿಖಾಧಿಕಾರಿಗಳಿಗೆ ಒಂದೇ ಒಂದು ಕುರುಹು ಪತ್ತೆಯಾಗದೆ ಬರಿಗೈಲಿ ವಾಪಸಾದರು.

ಅನಾಮಿಕ ವ್ಯಕ್ತಿ ತೋರಿಸಿರುವ ಮತ್ತೊಂದು ಸ್ಥಳದಲ್ಲೂ ಉತ್ಖನನ ನಡೆಸಿದಾಗಲೂ ಮಧ್ಯಾಹ್ನದವರೆಗೆ ಯಾವುದೇ ಕಳೆಬರಗಳು ದೊರೆಯದ ಕಾರಣಕ್ಕೆ ಎಸ್‌‍ಐಟಿ ಅಧಿಕಾರಿಗಳು ಗಂಭೀರ ಸಮಾಲೋಚನೆ ನಡೆಸಿದ್ದಾರೆ.ಅನಾಮಿಕನ ಹೇಳಿಕೆಗಳ ಮೇಲೆ ಅನುಮಾನಗಳು ವ್ಯಕ್ತವಾಗಿದ್ದವು. ದೂರುದಾರ ತಾವು ಇದೇ ಸ್ಥಳದಲ್ಲೇ ಶವ ಹೂತಿಟ್ಟಿದ್ದಾಗಿ ಪುನರುಚ್ಚರಿಸಿದ್ದಾನೆ. ಆತನ ಒತ್ತಡದ ಮೇರೆಗೆ ಜೆಸಿಬಿ ಬಳಸಿ ಮತ್ತಷ್ಟೂ ಆಳವಾಗಿ ಅಗೆದರೂ ಯಾವುದೇ ಪ್ರಯೋಜನವಾಗಿಲ್ಲ. ಮೊದಲ ಪ್ರಯತ್ನವೇ ವಿಫಲವಾಗಿದೆ.

ಜೆಸಿಬಿಯಿಂದ ಅಗೆದಾಗ ಒಂದು ವೇಳೆ ಅಸ್ಥಿಪಂಜರ ಲಭ್ಯವಿದ್ದರೆ ಅದಕ್ಕೆ ಹಾನಿಯಾಗಬಹುದು. ಅಪರಾಧದ ಸ್ವರೂಪ ಪತ್ತೆಹಚ್ಚಲು ಫೋರೆನ್ಸಿಕ್‌ಗೆ ತೊಂದರೆಯಾಗಬಹುದು ಎಂಬ ಕಾಳಜಿ ವಹಿಸಲಾಗಿತ್ತು. ಆದರೆ ನಿನ್ನೆ ಇಡೀ ದಿನದ ಕಾರ್ಯಾಚರಣೆಯಲ್ಲಿ ಯಾವುದೇ ಪ್ರಯೋಜನಗಳಾಗದೇ ಇದ್ದುದ್ದರಿಂದ ಎಸ್‌‍ಐಟಿ ತಂಡ ನಾನಾ ರೀತಿಯ ಅನುಮಾನಗಳನ್ನು ವ್ಯಕ್ತಪಡಿಸಿದೆ. ಎಸ್‌‍ಐಟಿ ಅಧಿಕಾರಿಗಳು ಕಂದಾಯ, ಅರಣ್ಯ, ವೈದ್ಯಕೀಯ ಇಲಾಖೆ ಅಧಿಕಾರಿಗಳ ನೆರವಿನೊಂದಿಗೆ ಫೋರೆನ್ಸಿಕ್‌ ತಜ್ಞರ ಸಮುಖದಲ್ಲಿ ಇಂದು ಮತ್ತೆ ಉತ್ಖನನ ಮುಂದುವರೆದಿದೆ.

RELATED ARTICLES

Latest News