ಹಾಸನ,ಡಿ.11- ಸ್ನೇಹಿತನನ್ನು ಕೊಲೆ ಮಾಡಿ ವಿಡಿಯೋ ಹರಿಬಿಟ್ಟಿದ್ದ ಆರೋಪಿಯನ್ನು ಹಾಸನ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉಲ್ಲಾಸ್ (21) ಬಂಧಿತ ಆರೋಪಿ. ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜೀತಾ ನಗರದ ತಮ ಕಚೇರಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಕೀರ್ತಿ ಎಂಬ ಯುವಕನನ್ನು ಆರೋಪಿ ಉಲ್ಲಾಸ್ ನಡುರಸ್ತೆಯಲ್ಲೇ ಕೊಲೆ ಮಾಡಿ ವಿಡಿಯೋವನ್ನು ಹರಿಬಿಟ್ಟಿದ್ದ.
ಈ ಸಂಬಂಧ ಡಿ.9ರಂದು ಕೀರ್ತಿ ಅವರ ಸಹೋದರ ಕಿರಣ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಬಳಿಕ ತನಿಖೆ ಕೈಗೊಂಡು ಆರೋಪಿ ಉಲ್ಲಾಸ್ನನ್ನು ಬಂಧಿಸಲಾಗಿದೆ. ಈ ಪ್ರಕರಣ ಸಂಬಂಧ ಇತರೆ ಆರೋಪಿಗಳ ಹುಡುಕಾಟ ಮುಂದುವರೆದಿದ್ದು ತನಿಖೆಗೆ ತಂಡಗಳನ್ನು ರಚಿಸಲಾಗಿದೆ ಎಂದರು.
ಕೊಲೆಗೀಡಾದ ಕೀರ್ತಿ ಹಾಗೂ ಉಲ್ಲಾಸ್ ಎರಡು ವರ್ಷಗಳಿಂದ ಪರಿಚಿತರಾಗಿದ್ದು ಇಬ್ಬರೂ ಆಟೋ ಚಾಲಕ ವೃತ್ತಿಯನ್ನು ಮಾಡುತ್ತಿದ್ದರು. ಡಿ. 8 ಹಾಗೂ 9ರಂದು ಇಬ್ಬರ ನಡುವೆ ಗಲಾಟೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಆರೋಪಿಗಳು ಘಟನೆ ಸಂದರ್ಭದಲ್ಲಿ ಗಾಂಜಾ ಸೇವಿಸಿದ್ದರೋ ಇಲ್ಲವೋ ಎಂಬುದರ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಹೇಳಿದರು.
ಕೊಲೆ ಬಳಿಕ ವಿಡಿಯೋ ಯಾವ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ ಎಂಬುದರ ಬಗ್ಗೆಯೂ ತನಿಖೆ ಮುಂದುವರೆದಿದ್ದು ಉಲ್ಲಾಸ್ 5 ವರ್ಷಗಳ ಹಿಂದೆ ಪ್ರಕರಣ ಒಂದರಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದರು.
